ಕಾರವಾರ: ಕೋವಿಡ್ 19ನಿಂದ ಗುಣಮುಖರಾದ 72 ಮಂದಿಯನ್ನು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಂದ ಭಾನುವಾರ ಬಿಡುಗಡೆ ಮಾಡಲಾಯಿತು. ಈ ನಡುವೆ, 26 ಮಂದಿಗೆ ಕೋವಿಡ್ ಖಚಿತವಾಗಿದೆ.
ಗುಣಮುಖರಾದವರ ಪೈಕಿ ಹಳಿಯಾಳ ಮತ್ತು ದಾಂಡೇಲಿ ತಾಲ್ಲೂಕುಗಳಲ್ಲಿ ಒಟ್ಟು 43 ಮಂದಿ ಸೇರಿದ್ದಾರೆ. ಶಿರಸಿಯಲ್ಲಿ 16, ಕಾರವಾರದಲ್ಲಿ ಒಂಬತ್ತು, ಕುಮಟಾ, ಹೊನ್ನಾವರ, ಭಟ್ಕಳ ಹಾಗೂ ಯಲ್ಲಾಪುರ ತಾಲ್ಲೂಕುಗಳಲ್ಲಿ ತಲಾ ಒಬ್ಬರು ಸೋಂಕುಮುಕ್ತರಾಗಿದ್ದಾರೆ.
ಜಿಲ್ಲೆಯಲ್ಲಿ ಕೆಲವು ದಿನಗಳಿಂದ ವೇಗವಾಗಿ ಹೆಚ್ಚುತ್ತಿದ್ದ ಸೋಂಕಿತರ ಸಂಖ್ಯೆ, ಭಾನುವಾರ ತುಸು ನಿಧಾನವಾಗಿತ್ತು. ಮುಖ್ಯವಾಗಿ ಹಳಿಯಾಳ ಮತ್ತು ದಾಂಡೇಲಿ ತಾಲ್ಲೂಕುಗಳಲ್ಲಿ ಕೇವಲ ಒಬ್ಬರಿಗೆ ಕೋವಿಡ್ ದೃಢಪಟ್ಟಿದೆ. ಇದರಿಂದ ಜನ ತುಸು ನಿಟ್ಟುಸಿರು ಬಿಡುವಂತಾಯಿತು.
ಹೊಸದಾಗಿ ಸೋಂಕಿತರಾದವರಲ್ಲಿ ಕಾರವಾರ ತಾಲ್ಲೂಕಿನಲ್ಲಿ ಆರು, ಯಲ್ಲಾಪುರ ಹಾಗೂ ಮುಂಡಗೋಡ ತಾಲ್ಲೂಕುಗಳಲ್ಲಿ ತಲಾ ಐವರು, ಅಂಕೋಲಾ ಮತ್ತು ಭಟ್ಕಳ ತಾಲ್ಲೂಕುಗಳಲ್ಲಿ ತಲಾ ನಾಲ್ವರು, ಸಿದ್ದಾಪುರ ಹಾಗೂ ಹಳಿಯಾಳ ತಾಲ್ಲೂಕಿನಲ್ಲಿ ತಲಾ ಒಬ್ಬರಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 90 ಜನರು ಮನೆಯಲ್ಲೇ ಇದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತರಲ್ಲಿ 14 ಜನರಿಗೆ ಪ್ರಾಥಮಿಕ ಸಂಪರ್ಕದಿಂದ ಕೋವಿಡ್ ಕಾಣಿಸಿಕೊಂಡಿದೆ. 10 ಮಂದಿಗೆ ಜ್ವರದ ಲಕ್ಷಣಗಳು (ಐ.ಎಲ್.ಐ) ಇವೆ. ಇಬ್ಬರು ಹೊರ ರಾಜ್ಯಗಳಿಗೆ ಪ್ರಯಾಣಿಸಿದ್ದ ಮಾಹಿತಿಯಿದೆ ಎಂದು ಆರೋಗ್ಯ ಇಲಾಖೆಯ ಆರೋಗ್ಯ ಬುಲೆಟಿನ್ ತಿಳಿಸಿದೆ.