ಸುಮಾರು 45 ಎಕರೆ ವಿಸ್ತೀರ್ಣದ ದ್ವೀಪದಲ್ಲಿ ಭತ್ತ ಮತ್ತು ತೆಂಗು ಬೆಳೆಯಲಾಗುತ್ತಿದೆ. ಆದರೆ, ಸಂಪರ್ಕ ವ್ಯವಸ್ಥೆ ಸರಿಯಿಲ್ಲದ ಕಾರಣ ಹಲವರು ಕೃಷಿ ಚಟುವಟಿಕೆಗಳನ್ನೇ ನಿಲ್ಲಿಸಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ, ಫಸಲಿನ ಮಾರಾಟ ಹೀಗೆ ಏನೇ ಇದ್ದರೂ ಸಣ್ಣ ದೋಣಿಗಳಲ್ಲಿಟ್ಟು ಕಾಳಿ ನದಿಯನ್ನು ದಾಟಬೇಕಿದೆ. ದ್ವೀಪದ ಒಟ್ಟೂ ಅವ್ಯವಸ್ಥೆಯಿಂದ ಬೇಸತ್ತು ಹಲವಾರು ಯುವಕರು ಪಟ್ಟಣ ಸೇರಿದ್ದಾರೆ. ಬೇಸಾಯ ಚಟುವಟಿಕೆಗಳನ್ನು ಮಾಡಲು ಕೂಲಿ ಕಾರ್ಮಿಕರೂ ಸಿಗುತ್ತಿಲ್ಲ. ಇದರಿಂದಾಗಿ ಹತ್ತಾರು ಎಕರೆ ಹೊಲಗಳು ಪಾಳುಬಿದ್ದಿವೆ ಎಂದು ಸ್ಥಳೀಯ ನಿವಾಸಿ ಶರದ್ ತಾಮ್ಸೆ ಬೇಸರ ವ್ಯಕ್ತಪಡಿಸುತ್ತಾರೆ.