ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ ಸಂಗ್ರಹಕ್ಕೆ ಅಡ್ಡಿಯಾಗದ ಕೊರೊನಾ

ಸಂಕಷ್ಟದ ನಡುವೆಯೂ ಗಮನಾರ್ಹ ಸಾಧನೆ ಮಾಡಿದ ಉತ್ತರ ಕನ್ನಡದ ಸ್ಥಳೀಯ ಸಂಸ್ಥೆಗಳು
Last Updated 14 ಡಿಸೆಂಬರ್ 2020, 6:33 IST
ಅಕ್ಷರ ಗಾತ್ರ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳು ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದ ಉದಾಹರಣೆಗಳು ಕಡಿಮೆ. ಮೂರು ವರ್ಷಗಳಿಂದ ನಿಗದಿತ ಗುರಿ ತಲುಪಿವೆ. ಕೆಲವೆಡೆ ಗುರಿಯನ್ನೂ ಮೀರಿ ಕರ ಸಂಗ್ರಹವಾಗಿದೆ. ಆದರೆ, ಈ ಬಾರಿ ಕೊರೊನಾ ಕಾರಣದಿಂದ ಸಂಪೂರ್ಣವಾಗಿ ಅಲ್ಲದಿದ್ದರೂ ತೃಪ್ತಿಕರ ಸಾಧನೆಯನ್ನು ಮಾಡಿವೆ.

ಜಿಲ್ಲೆಯಲ್ಲಿ ವಾಣಿಜ್ಯ ವ್ಯವಹಾರಗಳು ಭಾರಿ ಪ್ರಮಾಣದಲ್ಲಿ ಇಲ್ಲ. ಆದರೆ, ಇಲ್ಲಿರುವ ಸಾಮಾನ್ಯ ವ್ಯವಹಾರ ಕೇಂದ್ರಗಳಿಂದ ಹಾಗೂ ಮನೆಗಳಿಂದ ಸಂಗ್ರಹವಾಗುವ ತೆರಿಗೆ ಹಣವು, ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಮೂಲ ಸೌಕರ್ಯ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಸಾಕಷ್ಟು ನೆರವಾಗುತ್ತದೆ. ಈ ಬಾರಿ ಸಾಂಕ್ರಾಮಿಕ ಸೋಂಕಿನ ನಡುವೆಯೂ ನಾಗರಿಕರು ತಮ್ಮ ಕರ್ತವ್ಯವನ್ನು ಪಾಲಿಸಿದ್ದಾರೆ.ಡಿಸೆಂಬರ್ ತಿಂಗಳಲ್ಲಿ ಜಿಲ್ಲಾಧಿಕಾರಿಯು ನೀಡಿದ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿದೆ. ಇದು ಅಧಿಕಾರಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ.

ಶಿರಸಿ: ಆಸ್ತಿ ತೆರಿಗೆ ಸಂಗ್ರಹ

ಪ್ರಮಾಣ ಶಿರಸಿ ನಗರದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ತೆರಿಗೆ ವಸೂಲಾತಿ ವಿಚಾರದಲ್ಲೂ ನಗರಸಭೆ
ಮೂರು ವರ್ಷಗಳಲ್ಲಿ ಸಮಾಧಾನಕರ ಸಾಧನೆ ಮಾಡಿದೆ. ಕೊರೊನಾ ಕಾರಣಕ್ಕೆ ಈ ಬಾರಿಯೇ ಕರ ಸಂಗ್ರಹ ಪ್ರಮಾಣ ನಿರೀಕ್ಷಿತ ಗುರಿ ತಲುಪಿಲ್ಲ.

2017–18ರಲ್ಲಿ ₹ 18.79 ಕೋಟಿ ತೆರಿಗೆ ಗುರಿಯಲ್ಲಿ ₹ 18.48 ಕೋಟಿ ಸಂಗ್ರಹ ಮಾಡಲಾಗಿತ್ತು. ಈ ಮೂಲಕ ಶೇ 98ರಷ್ಟು ಸಾಧನೆ ಆಗಿತ್ತು. 2018–19ರಲ್ಲಿ ₹ 23.41 ಕೋಟಿ ತೆರಿಗೆ ಸಂಗ್ರಹದ ಗುರಿ ಇತ್ತು. ಆ ಪೈಕಿ ₹ 22.74 ಕೋಟಿ (ಶೇ 97ರಷ್ಟು) ವಸೂಲಾಗಿತ್ತು. 2019–20ರಲ್ಲಿ ₹ 24.32 ಕೋಟಿ ತೆರಿಗೆ ಸಂಗ್ರಹದ ಗುರಿಯಲ್ಲಿ ₹ 21.68 ಕೋಟಿ ಮಾತ್ರ (ಶೇ 89) ವಸೂಲು ಆಗಿತ್ತು.

‘2020–21ನೇ ಸಾಲಿನಲ್ಲಿ ₹ 32.08 ಕೋಟಿ ಲಕ್ಷ ತೆರಿಗೆ ಸಂಗ್ರಹಿಸುವ ಗುರಿ ಇದೆ. ಆ ಪೈಕಿ ಕೊರೊನಾ ಸಾಂಕ್ರಾಮಿಕದ ನಡುವೆಯೂ ಈಗಾಗಲೇ ₹ 21.92 ಕೋಟಿ ತೆರಿಗೆ ಸಂಗ್ರಹ ಮಾಡಿ ಶೇ 68ರಷ್ಟು ಸಾಧನೆ ಮಾಡಿದ್ದೇವೆ. ವರ್ಷದ ಅಂತ್ಯದೊಳಗೆ ಪ್ರತಿಶತ ಗುರಿ ತಲುಪುತ್ತೇವೆ’ ಎಂದು ಪೌರಾಯುಕ್ತ ರಮೇಶ ನಾಯಕ ವಿಶ್ವಾಸ ವ್ಯಕ್ತಪಡಿಸಿದರು.

‘ಆಸ್ತಿ ತೆರಿಗೆ ಸಂಗ್ರಹದಲ್ಲಿ ನಗರಸಭೆ ಹಿಂದೆ ಬಿದ್ದಿಲ್ಲ. ಆದರೆ, ನೀರಿನ ಕರ ವಸೂಲಾತಿಯಲ್ಲಿ ಸ್ವಲ್ಪ ಹಿನ್ನಡೆ ಆಗಿತ್ತು. ಅದನ್ನು ಸರಿಪಡಿಸಿಕೊಳ್ಳುತ್ತೇವೆ. ನಿರೀಕ್ಷಿತ ಗುರಿ ತಲುಪುತ್ತೇವೆ’ ಎಂದು ಹೇಳಿದರು.

ಮುಂಡಗೋಡ: ಪಟ್ಟಣ ಪಂಚಾಯಿತಿಯು ಕರ ವಸೂಲಿಯಲ್ಲಿ ಜಿಲ್ಲೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆ ಜಾರಿಯಾದಾಗಿನಿಂದ, ಆಸ್ತಿ ತೆರಿಗೆ ತುಂಬುವರ ಪ್ರಮಾಣ ಹೆಚ್ಚಳವಾಗಿದೆ.

ಕರ ವಸೂಲಿ ಮಾಡಲು ಪಟ್ಟಣ ಪಂಚಾಯಿತಿಯ ನಾಲ್ಕೈದು ಸಿಬ್ಬಂದಿ ನಿತ್ಯವೂ ಪ್ರತಿ ಓಣಿ, ವಾರ್ಡ್‌ಗಳಿಗೆ ಭೇಟಿ ನೀಡುವುದು ಈಗಲೂ ಮುಂದುವರಿದಿದೆ.

‘ಸ್ಥಳೀಯ ಸಂಸ್ಥೆಗಳ ಚುನಾವಣೆ ಬಂದಾಗ ಆಸ್ತಿ ಕರ ಹೆಚ್ಚು ವಸೂಲಿಯಾಗುತ್ತದೆ. ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು, ಕಡ್ಡಾಯವಾಗಿ ಕರ ತುಂಬಿರಬೇಕಾಗಿರುತ್ತದೆ. ಇದರಿಂದ ಹಲವು ವರ್ಷಗಳಿಂದ ಕಟ್ಟು ಬಾಕಿಯಿರುವಂತ ಕರ ವಸೂಲಿ ಒಂದೇ ಸಲ ಆಗುತ್ತದೆ’ ಎನ್ನುತ್ತಾರೆ ಕರವಸೂಲಾತಿ ಸಿಬ್ಬಂದಿ.

‘ಸರ್ಕಾರಿ ಸೌಲಭ್ಯಕ್ಕಾಗಿ ಕೆಲವೊಮ್ಮೆ ಪಟ್ಟಣ ಪಂಚಾಯಿತಿಯ ಪತ್ರದ ಅಗತ್ಯ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಆ ಆರ್ಥಿಕ ವರ್ಷದವರೆಗೆ ಕರ ತುಂಬಿದ ನಂತರವೇ, ಪಂಚಾಯಿತಿಯಿಂದ ಅನುಮತಿ ನೀಡುತ್ತಾರೆ. ಇದರಿಂದಲೂ ಕರ ವಸೂಲಾತಿ ಗುರಿ ಮುಟ್ಟಲು ಸಹಕಾರಿ ಆಗುತ್ತದೆ’ ಎಂದು ವಿವರಿಸುತ್ತಾರೆ.

‘ಮೂರು ವರ್ಷಗಳಿಂದ ಶೇ 80– 85ರಷ್ಟು ಆಸ್ತಿ ತೆರಿಗೆ ವಸೂಲಿ ಆಗುತ್ತಿದೆ. ಜನರಲ್ಲಿ ತಿಳಿವಳಿಕೆ ಮೂಡಿಸಲು, ಕರ ವಸೂಲಾತಿ ಅಭಿಯಾನವೂ ಪ್ರತಿ ವರ್ಷ ನಡೆಯುತ್ತಿದೆ. ಕರಪತ್ರ ಹಂಚುವುದು ಸೇರಿದಂತೆ ವಿಶೇಷ ಅಭಿಯಾನ ನಡೆಸಿ, ಶೇ 5ರಷ್ಟು ತೆರಿಗೆ ವಿನಾಯ್ತಿ ನೀಡಲಾಗುತ್ತದೆ’ ಎಂದು ಮುಖ್ಯಾಧಿಕಾರಿ ಸಂಗನಬಸಯ್ಯ ಹೇಳಿದರು.

ಸಿದ್ದಾಪುರ: ಕೋವಿಡ್‌ 19ರ ಹಿನ್ನೆಲೆಯಲ್ಲಿ ಸ್ಥಳೀಯ ಪಟ್ಟಣ ಪಂಚಾಯ್ತಿಯಲ್ಲಿ ತೆರಿಗೆ ಸಂಗ್ರಹ ಸಹಜವಾಗಿಯೇ ಕಡಿಮೆಯಾಗಿದ್ದರೂ ಒಟ್ಟಾರೆ ಸಮಾಧಾನಕರವಾಗಿದೆ.

ಕಳೆದ ವರ್ಷಕ್ಕಿಂತ ಈ ವರ್ಷ ಈವರೆಗೆ ಕಡಿಮೆ ತೆರಿಗೆ ಸಂಗ್ರಹವಾದರೂ 2021ರ ಮಾರ್ಚ್‌ ಅಂತ್ಯದ ಹೊತ್ತಿಗೆ ವರ್ಷದ ತೆರಿಗೆ ಪೂರ್ಣ ಸಂಗ್ರಹವಾಗಬಹುದು ಎಂದು ಪಟ್ಟಣ ಪಂಚಾಯ್ತಿ ಮೂಲಗಳು ತಿಳಿಸಿವೆ.

2019– 20ನೇ ಸಾಲಿನಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ₹ 49.27 ಲಕ್ಷ (ಬರಬೇಕಾದುದು ₹ 65.81 ಲಕ್ಷ) ಮತ್ತು ನೀರಿನ ಕರ ₹ 29.56 ಲಕ್ಷ (ಬರಬೇಕಾದುದು: ₹ 47.93 ಲಕ್ಷ ) ಸಂಗ್ರಹವಾಗಿದೆ.

2020– 21ನೇ ಸಾಲಿನಲ್ಲಿ ಈವರೆಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ ₹ 45.41 ಲಕ್ಷ (ಬರಬೇಕಾದುದು: ₹ 81.92 ಲಕ್ಷ) ಮತ್ತು ನೀರಿನ ಕರ ₹ 14.75 ಲಕ್ಷ (ಬರಬೇಕಾದುದು ₹ 54.23 ಲಕ್ಷ) ಬಂದಿದೆ.

‘ಕೋವಿಡ್‌ –19 ಹಿನ್ನೆಲೆಯಲ್ಲಿ ಆರ್ಥಿಕ ವರ್ಷದ ಮೊದಲಿನ ತಿಂಗಳಲ್ಲಿ ತೆರಿಗೆ ಸಂಗ್ರಹ ಇರಲಿಲ್ಲ. ಆದರೆ, ಈಗ ತೆರಿಗೆ ಸಂಗ್ರಹ ಆಗುತ್ತಿದ್ದು, ಮಾರ್ಚ್‌ ಅಂತ್ಯದೊಳಗೆ ಎಲ್ಲ ತೆರಿಗೆ ಸಂಗ್ರಹವಾಗುವ ವಿಶ್ವಾಸವಿದೆ’ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಕುಮಾರ್‌ ನಾಯ್ಕ ತಿಳಿಸಿದರು.

ಯಲ್ಲಾಪುರ: ಪಟ್ಟಣದಲ್ಲಿ 2020–21ನೇ ಸಾಲಿನಲ್ಲಿ 5,554 ಮನೆಗಳಿಂದ ಹಿಂದಿನ ಬಾಕಿ ಸೇರಿದಂತೆ ₹ 74.24
ಲಕ್ಷ ತೆರಿಗೆ ಬರಬೇಕಾಗಿದೆ. ನವೆಂಬರ್‌ವರೆಗೆ ₹ 50.15 ಲಕ್ಷ ಸಂಗ್ರಹಿಸಿ ಶೇ 67.55ರಷ್ಟು ಪ್ರಗತಿಯಾಗಿತ್ತು.

2018– 19ನೇ ಸಾಲಿನಲ್ಲಿ 6,402 ಮನೆಗಳಿಂದ ₹ 75.79 ಲಕ್ಷ ಬರಬೇಕಾದಲ್ಲಿ ₹ 53.33 ಲಕ್ಷ ಬಂದಿದೆ. ಶೇ 70.36ರಷ್ಟು ತೆರಿಗೆ ಸಂಗ್ರವಾಗಿದೆ. 2019– 20ರಲ್ಲಿ 5,553 ಮನೆಗಳಿಂದ ಬರಬೇಕಿದ್ದ ₹ 70.34 ಲಕ್ಷದಲ್ಲಿ ₹ 54.21 ಲಕ್ಷ ವಸೂಲಿಯಾಗಿದೆ. ಈ ಮೂಲಕ ಶೇ 77.06ರಷ್ಟು ತೆರಿಗೆ ಸಂಗ್ರಹವಾಗಿದೆ.

ಯಲ್ಲಾಪುರ ಪಟ್ಟಣದಲ್ಲಿ ಅತಿಕ್ರಮಣ ಮನೆಗಳೇ ಹೆಚ್ಚು. ಪಿ.ಐ.ಡಿ. ಸಂಖ್ಯೆ ಹೊಂದಿ, ಫಾರ್ಮ್ ನಂ 3ನ್ನು ಪಟ್ಟಣದ ಎಲ್ಲ ಆಸ್ತಿಗಳಿಗೂ ನೀಡಲಾಗಿಲ್ಲ. ಅಂತಹ ಮನೆಗಳಿಗೆ ಸ್ವಯಂ ಘೋಷಿತ ಆಸ್ತಿ ತೆರಿಗೆಗಳನ್ನು ತುಂಬಿಸಿಕೊಳ್ಳಲಾಗುತ್ತಿದೆ ಎಂದು ಪ್ರಭಾರ ಕಂದಾಯ ನಿರೀಕ್ಷಕ ಸುಬ್ರಾಯ ಶೇರುಗಾರ್ ತಿಳಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅರುಣ ನಾಯ್ಕ ಪ್ರತಿಕ್ರಿಯಿಸಿ, ‘ಕೋವಿಡ್ ಸಮಯದಲ್ಲಿ ತೆರಿಗೆ ನೀಡುವಂತೆ ಸಾರ್ವಜನಿಕರ ಮೇಲೆ ಒತ್ತಡ ಹೇರಿಲ್ಲ. ಪಟ್ಟಣ ಪಂಚಾಯಿತಿಯಲ್ಲಿ ತೆರಿಗೆ ಸಂಗ್ರಹಕ್ಕೆ ಬೇಕಾದ ಕಂದಾಯ ಇನ್‌ಸ್ಪೆಕ್ಟರ್, ಬಿಲ್ ಕಲೆಕ್ಟರ್, ಕ್ಲರ್ಕ್ ಹುದ್ದೆಗಳು ಖಾಲಿ ಇವೆ. ಆದರೂ ಬೇರೆ ವಿಭಾಗದ ಸಿಬ್ಬಂದಿ ಬಳಸಿಕೊಂಡು ತೆರಿಗೆ ಸಂಗ್ರಹ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಹೊನ್ನಾವರ: ಪಟ್ಟಣ ಪಂಚಾಯಿತಿಯು ಕರ ವಸೂಲಿಯಲ್ಲಿ ನಿಗದಿತ ಗುರಿ ಮುಟ್ಟಿಲ್ಲ. ಆದರೆ, ಮೊದಲ ದರ್ಜೆಯಲ್ಲಿ ಉತ್ತೀರ್ಣವಾಗಿದೆ!

2018–19ನೇ ಸಾಲಿನಲ್ಲಿ ಶೇ 69ರಷ್ಟು ಆಗಿದ್ದ ಕರ ಸಂಗ್ರಹಣೆ, ಕಳೆದ ಸಾಲಿನಲ್ಲಿ ಶೇ 67ಕ್ಕೆ ಕುಸಿದಿತ್ತು. ಪ್ರಸ್ತುತ ಸಾಲಿನಲ್ಲಿ ಇದುವರೆಗೆ ಶೇ 52ರಷ್ಟು ಕರ ವಸೂಲಾತಿಯಾಗಿದೆ. ₹ 67.08 ಲಕ್ಷ ಆದಾಯ ಬಂದಿದೆ.

ನೀರಿನ ಶುಲ್ಕ ವಸೂಲಾತಿಯಲ್ಲಿ ಸಾಧನೆ ಕಳಪೆಯಾಗಿದೆ. ಕೇವಲ ಶೇ 29ರಷ್ಟು (₹ 20.35 ಲಕ್ಷ) ಆದಾಯ ನೀರು ಪೂರೈಕೆಯಿಂದ ಬಂದಿದೆ. ಕಳೆದ ಸಾಲಿನಲ್ಲಿ ಶೇ 53ರಷ್ಟು ವಸೂಲಾತಿಯಾಗಿತ್ತು.

ಉದ್ದಿಮೆಗಳಿಂದ ಪ್ರಸ್ತುತ ಸಾಲಿನಲ್ಲಿ ಕರ ವಸೂಲಾತಿಯಿಂದ ಬಂದಿರುವ ಆದಾಯ ಕೇವಲ ₹ 3.07 ಲಕ್ಷ. ಪಟ್ಟಣದಲ್ಲಿರುವ 7,816 ಅಧಿಕೃತ ಕಟ್ಟಡಗಳ ಪೈಕಿ 1,742 ಅಂಗಡಿಗಳಿವೆ. ಉಳಿದವು ಮನೆಗಳು. 1,250 ಅನಧಿಕೃತ ಕಟ್ಟಡಗಳಿದ್ದು ಇವುಗಳಿಂದ ಎರಡು ಪಟ್ಟು ಕರ ವಸೂಲಿ ಮಾಡಲಾಗುತ್ತಿದೆ.

ಬೇರು ಬಿಟ್ಟಿರುವ ದೊಡ್ಡ ವ್ಯಾಪಾರಿಗಳೇ ಕರ ಬಾಕಿದಾರರಲ್ಲಿ ಮುಂಚೂಣಿ ಸಾಲಿನಲ್ಲಿದ್ದಾರೆ ಎನ್ನುವ ಅಂಶ ಪ್ರಾಮಾಣಿಕ ತೆರಿಗೆದಾರರ ಆಕ್ಷೇಪಕ್ಕೆ ಗುರಿಯಾಗಿದೆ.

‘ತೆರಿಗೆ ಸಂಗ್ರಹಿಸಲು ಇದ್ದ ಸಿಬ್ಬಂದಿ ಕೊರತೆಯನ್ನು ನೀಗಿಸಲಾಗಿದ್ದು, ಈಗ ವಸೂಲಿ ಚುರುಕಾಗಿದೆ. ಶೇ 100ರಷ್ಟು ತೆರಿಗೆ ಸಂಗ್ರಹಿಸುವ ಗುರಿ ಇದೆ’ ಎನ್ನುತ್ತಾರೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಶಿವರಾಜ ಮೇಸ್ತ.

* ಕಳೆದ ಮಾರ್ಚ್ ಕೊನೆಯಲ್ಲಿ ಕೊರೊನಾ ವ್ಯಾಪಿಸಿದ್ದರಿಂದ ತೆರಿಗೆ ಸಂಗ್ರಹ ಇಳಿಮುಖವಾಗಿತ್ತು. ಆರ್ಥಿಕ ವರ್ಷದ ಅಂತ್ಯದಲ್ಲಿ ಕೆಲವರು ತೆರಿಗೆ ಪಾವತಿಸುವವರಿದ್ದರು.

– ರಮೇಶ ನಾಯಕ, ಶಿರಸಿ ನಗರಸಭೆ ಪೌರಾಯುಕ್ತ.

* ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ತೆರಿಗೆ ಸಂಗ್ರಹ ಉತ್ತಮವಾಗಿದೆ. ಕೋವಿಡ್ ಸಂದರ್ಭದಲ್ಲೂ ಪ್ರಜ್ಞಾವಂತ ನಾಗರಿಕರ ಸಹಕಾರದಿಂದ ಕರ ಸಂಗ್ರಹ ಗಮನಾರ್ಹವಾಗಿದೆ.

– ಎಚ್.ಕೆ.ಕೃಷ್ಣಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ.

ಪ್ರಜಾವಾಣಿ ತಂಡ: ಸದಾಶಿವ ಎಂ.ಎಸ್, ಗಣಪತಿ ಹೆಗಡೆ, ಶಾಂತೇಶ ಬೆನಕನಕೊಪ್ಪ, ರವೀಂದ್ರ ಭಟ್ ಬಳಗುಳಿ, ನಾಗರಾಜ ಮದ್ಗುಣಿ, ಎಂ.ಜಿ.ಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT