ಹೊಸಪೇಟೆ (ವಿಜಯನಗರ): ಅತಿವೃಷ್ಟಿಯಿಂದ ಜಿಲ್ಲೆಯಾದ್ಯಂತ ಹಾನಿಯಾದ ಬೆಳೆಗೆ ಶೀಘ್ರ ಪರಿಹಾರ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ.
ಈ ಸಂಬಂಧ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ಸಂಘದ ಕಾರ್ಯಕರ್ತರು ನಂತರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಈಡಾದ ಬಡ ರೈತ ಕುಟುಂಬಗಳ ಸಾಲ ಮನ್ನಾ ಮಾಡಬೇಕು. ಕೀಟನಾಶಕ ಔಷಧಿ, ಸಬ್ಸಿಡಿ ಸೌಲಭ್ಯ ಸಕಾಲಕ್ಕೆ ದೊರಕಿಸಿಕೊಡಬೇಕು. ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವಂತೆ ಕಾಯ್ದೆ ಜಾರಿಗೆ ತರಬೇಕು. ಅರಣ್ಯ ಭೂಮಿಯಲ್ಲಿ ಒಕ್ಕಲುತನ ಮಾಡುವವರಿಗೆ ಪಟ್ಟಾ ನೀಡಬೇಕು ಎಂದು ಹಕ್ಕೊತ್ತಾಯ ಮಾಡಿದರು.
ಬಡತನ ರೇಖೆಗಿಂತ ಕೆಳಗಿನವರಿಗೆ ಹತ್ತು ಕೆ.ಜಿ ಅಕ್ಕಿ, ₹10,000 ಕೋವಿಡ್ ನೆರವು ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷದಲ್ಲಿ ಇನ್ನೂರು ದಿನ ಕೆಲಸ ಕೊಡಬೇಕು. ₹750 ಕನಿಷ್ಠ ಕೂಲಿ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಜಿ. ಕೆರೆ ಹನುಮಂತ, ಕಾರ್ಯದರ್ಶಿ ಎನ್. ಯಲ್ಲಾಲಿಂಗ, ಖಜಾಂಚಿ ಕೆ. ಕೆರೆ ಹನುಮಂತ, ಬಾಣದ ರಾಮಣ್ಣ, ಬಾಣದ ನಾಗರಾಜ ಇದ್ದರು.