ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳನ್ನು ಜನತಂತ್ರದ ತೊಟ್ಟಿಲುಗಳೆಂದು ಕರೆಯಲಾಗಿದೆ. ಸ್ಥಳೀಯ ಜನರ ಪಾಲ್ಗೊಳ್ಳುವಿಕೆ ಮೂಲಕ ಸ್ಥಳೀಯ ಸಮಸ್ಯೆಗೆ ಸ್ಪಂದಿಸಲು ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ, ಭ್ರಷ್ಟ ರಾಜಕಾರಣಿಗಳಿಂದ ಯಾವುದೇ ಜನಪರ ಕೆಲಸಗಳು ಆಗುತ್ತಿಲ್ಲ. ಮತದಾರರ ಬಡತನ, ಅನಕ್ಷರತೆ, ಸಾಮಾಜಿಕ ಪ್ರಜ್ಞೆಯ ಕೊರತೆಯನ್ನು ಬಂಡವಾಳ ಮಾಡಿಕೊಂಡು ರಾಜಕಾರಣಿಗಳು ಮನಬಂದಂತೆ ವರ್ತಿಸುತ್ತಿದ್ದಾರೆ. ಮತದಾರರಿಗೆ ಹಣದ ಆಮಿಷವೊಡ್ಡಿ ಪ್ರಜಾತಂತ್ರ ವ್ಯವಸ್ಥೆ ಕುಲಗೆಡಿಸುತ್ತಿದ್ದಾರೆ. ಅದರಲ್ಲಿ ಸುಧಾರಣೆ ತರುವ ಅಗತ್ಯವಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ವಂಚಿತ ಸಮುದಾಯಗಳಿಗೆ ಮೀಸಲು ಸೌಲಭ್ಯವೂ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಯಾವುದೇ ರೀತಿಯ ಅವ್ಯವಹಾರ, ಹಣದ ಆಮಿಷ, ಒತ್ತಡಕ್ಕೆ ಒಳಗಾಗದೆ ಮತದಾರರು ಮುಕ್ತವಾಗಿ ಮತ ಚಲಾಯಿಸುವ ವಾತಾವರಣ, ಅರಿವು ಚುನಾವಣಾ ಆಯೋಗ ಮೂಡಿಸಬೇಕು ಎಂದು ಆಗ್ರಹಿಸಿದರು.