ವಿಜಯನಗರ (ಹೊಸಪೇಟೆ): ನಗರದ ಎಸ್.ವಿ.ಕೆ. ಬಸ್ ನಿಲ್ದಾಣದ ಬಳಿ ಗುಡ್ಡೆಯಂತೆ ಸಂಗ್ರಹವಾಗಿದ್ದ ತ್ಯಾಜ್ಯವನ್ನು ‘ಗ್ರೀನ್ ಹೊಸಪೇಟೆ’ ಕಾರ್ಯಕರ್ತರ ಸಹಯೋಗದೊಂದಿಗೆ ನಗರಸಭೆ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು.
ಬಳಿಕ ಗ್ರೀನ್ ಹೊಸಪೇಟೆ ಸಂಘಟನೆ ಕಾರ್ಯಕರ್ತರು ಗೋಡೆಗೆ ಸುಣ್ಣ ಬಳಿದರು. ಸುತ್ತಮುತ್ತಲಿನ ಜನರಿಗೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿದರು.
ನಗರಸಭೆ ಆರೋಗ್ಯ ಇನ್ಸ್ಪೆಕ್ಟರ್ ವೆಂಕಟೇಶ್, ‘ಈ ಹಿಂದೆ ಸಾಕಷ್ಟು ಬಾರಿ ಸೂಚನೆ ನೀಡಿದರೂ ಸಾರ್ವಜನಿಕರು, ಕೆಲ ಅಂಗಡಿ ಮಾಲೀಕರು ಬೇಕಾಬಿಟ್ಟಿ ಕಸ ಎಸೆದು ಹೋಗುತ್ತಿದ್ದಾರೆ. ಗ್ರೀನ್ ಹೊಸಪೇಟೆ ಸಂಘಟನೆಯವರು ಈ ವಿಷಯ ನಮ್ಮ ಗಮನಕ್ಕೆ ತಂದಿದ್ದರೂ. ಅವರ ಸಹಕಾರದೊಂದಿಗೆ ಕಸ ವಿಲೇವಾರಿ ಮಾಡಲಾಗಿದೆ’ ಎಂದು ತಿಳಿಸಿದರು.
‘ಅಲ್ಲಿರುವ ಕಸದ ಡಬ್ಬಿಯನ್ನು ತೆಗೆಯಲಾಗುತ್ತಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ರಸ್ತೆಯ ಪಕ್ಕದಲ್ಲಿ ಕಸ ಎಸೆಯಬಾರದು. ಕಸ ಸಂಗ್ರಹಿಸುವ ವಾಹನಗಳಲ್ಲಿಯೇ ತ್ಯಾಜ್ಯ ಹಾಕಬೇಕು. ರಸ್ತೆ ಬದಿ ಕಸ ಹಾಕುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಸಂಘಟನೆಯ ಅಧ್ಯಕ್ಷ ಸುನೀಲ್ ಗೌಡ, ರಾಜಣ್ಣ, ಜೋಗಿ ತಾಯಪ್ಪ, ಶಿವರಾಜ್, ವಿನಯ್, ಡಿ.ಜೆ.ವಿಶ್ವ, ರಾಜು, ಧನು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.