ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಯೋಗ ದಿನ: ಆರು ಸಾವಿರ ಜನರಿಂದ ಏಕಕಾಲಕ್ಕೆ ಹಂಪಿ ರಥಬೀದಿಯಲ್ಲಿ ಯೋಗ

Last Updated 21 ಜೂನ್ 2022, 3:12 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಶ್ವಪ್ರಸಿದ್ಧ ಹಂಪಿಯಲ್ಲಿ ಮಂಗಳವಾರ ಬೆಳಿಗ್ಗೆ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಬೆಳಿಗ್ಗೆ ಆರು ಗಂಟೆಗೆ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಕ್ರಮ ಉದ್ಘಾಟಿಸಿ, 79 ದೇಶಗಳಲ್ಲಿ ಇಂದು ದಿನ ಯೋಗ ದಿನ ಆಚರಿಸಲಾಗುತ್ತಿದೆ. ಸೂರ್ಯ ಮುಳುಗದ ಸಾಮ್ರಾಜ್ಯ ಬ್ರಿಟಿಷರ ಆಡಳಿತ ಎಂದು ಹೇಳುತ್ತಿದ್ದರು. ಸೂರ್ಯ ಉದಯಿಸುವಾಗ ಒಂದಿಲ್ಲೊಂದು ದೇಶದಲ್ಲಿ ಈಗ ಯೋಗ ಮಾಡಲಾಗುತ್ತಿದೆ. ಭಾರತದ ಯೋಗದ ಮಹತ್ವದ ಜಗತ್ತಿಗೆ ಅರಿವಾಗಿದೆ ಎಂದು ಹೇಳಿದರು.

ಯೋಗ ಬೇರೆ, ಆಸನ ಬೇರೆ. ಯೋಗದ ಮೂಲಕ ಆಸನ ಮಾಡುವುದು. ಎರಡೂ ಒಟ್ಟಿಗೆ ಸೇರಿದಾಗ ಯೋಗಾಸನ ಆಗುತ್ತದೆ. ಭಾರತದ ಒಟ್ಟು ಪದ್ಧತಿಗಳಲ್ಲಿ ಭಾಷೆ, ಸಂಸ್ಕೃತಿ ಹಿಡಿದುಕೊಂಡು ಜಗತ್ತಿಗೆ ನಮ್ಮ ಪರಂಪರೆಯ ಮಾದರಿ ಪರಿಚಯವಾಗಿದೆ. ಕೌಟುಂಬಿಕ ವ್ಯವಸ್ಥೆ, ಜೀವನ ಪದ್ಧತಿ, ಕಲೆ ಸಂಗೀತ ಪ್ರತಿಯೊಂದರಲ್ಲಿ ಅದರದೇ ಆದ ವೈಶಿಷ್ಟ್ಯ ಇದೆ. ಅದರ ಪರಿಣಾಮವಾಗಿ ಸಾವಿರ ವರ್ಷಗಳ ಅನೇಕ ವಿದೇಶಿ ಆಕ್ರಮಣಗಳ ನಂತರ ಉಳಿದಿದೆ. ಅದರಲ್ಲಿ ಯೊಗ ಕೂಡ ಒಂದು ಎಂದರು.

ಇಂಗ್ಲಿಷ್ ಶಿಕ್ಷಣದ ಪ್ರಾರಂಭದ ನಂತರ ಒಂದು ಪೊರೆ ಬಿದ್ದಿದೆ. ಭಾರತೀಯರು ಹೇಳಿದರೆ ನಾವು ನಂಬುವುದಿಲ್ಲ. ಭಗವದ್ಗೀತೆ, ರಾಮಾಯಣ, ಬಸವಣ್ಣನವರ ವಚನಗಳ‌ ಬಗ್ಗೆ ಪಾಶ್ಚಿಮಾತ್ಯರು ಹೇಳಿದರೆ ಅದರ ಮಹತ್ವ ನಮಗೆ ಅರಿವಾಗುತ್ತದೆ. ಕೋವಿಡ್ ಗೆಲ್ಲಲು ಯೋಗ, ಪ್ರಾಣಾಯಾಮದಿಂದ ಸಾಧ್ಯ ಎಂಬುದು ಈಗ ಅರಿವಾಗಿದೆ ನಮಗೆ ಎಂದರು.

ಇಟಲಿಯಲ್ಲಿ ಮೂರು ದಿನ ಸತತ ಪ್ರಾಣಾಯಾಮ ಮಾಡಿ ಶ್ವಾಸಕೋಶದ ತೊಂದರೆಯಿಂದ ವ್ಯಕ್ತಿಯೊಬ್ಬರು ಸುಧಾರಿಸಿಕೊಂಡಿದ್ದರು. ದೇಹ, ಮನಸ್ಸು ಸಮಚಿತ್ತದಿಂದ ಇಟ್ಟುಕೊಳ್ಳಲು ಯೋಗಾಸನ, ಪ್ರಾಣಾಯಾಮ ಸಹಕಾರಿಯಾಯಿತು. ಯೋಗ ದಿನಾಚರಣೆ ಘೋಷಣೆಗೂ ಮುನ್ನ 193 ದೇಶಗಳು ಮತದಾನದಲ್ಲಿ ಭಾಗವಹಿಸಿ 173 ದೇಶಗಳು ಅದಕ್ಕೆ ಸಹಮತ ವ್ಯಕ್ತಪಡಿಸಿದ್ದವು.ಜೂನ್ 21ರಂದು ಜಗತ್ತಿನ ಬಹುತೇಕ ಭಾಗಗಳಲ್ಲಿ ಹಗಲು ಅತಿ ಹೆಚ್ಚು ಇರುತ್ತದೆ. ವೈಜ್ಞಾನಿಕ ಹಿನ್ನೆಯಿಂದ ಯೋಚನೆ ಮಾಡಿ, ಪ್ರಧಾನಿ ಸಲಹೆ ಮಾಡಿದ್ದರು. ಅದು ಜಾರಿಗೆ ಬಂತು ಎಂದು ತಿಳಿಸಿದರು.

ಯೋಗ ಒಂದು ದಿನಕ್ಕೆ ಸೀಮಿತವಾಗಬಾರದು. ಜೀವನದ ಒಂದು ಭಾಗವಾಗಬೇಕು. ಫೋಟೊ, ವಾಟ್ಸಾಪ್‌ಗೆ ಸೀಮಿತವಾಗಬಾರದು. ಮಧುಮೇಹ ರಾಜಧಾನಿ ಆಗಿ ಭಾರತ ಬದಲಾಗುತ್ತಿದೆ. ಅನಗತ್ಯ ಒತ್ತಡಗಳಿಂದ ಈ ಸಮಸ್ಯೆ. 21ನೇ ಶತಮಾನ ಭಾರತದ್ದಾಗಬೇಕು. ಅತಿ ಹೆಚ್ಚು ಯುವಕರು, ಮಾನವ ಶಕ್ತಿ ಹೊಂದಿರುವ ಭಾರತ ಆರೋಗ್ಯದಿಂದ ಇದ್ದರೆ ಜಗತ್ತಿಗೆ ಉತ್ತಮ ಸೇವೆ ಕೊಡಬಹುದು. ಉತ್ತಮ ಮಾನವ ಶಕ್ತಿ ಜಗತ್ತು ಬಯಸುತ್ತದೆ. ಹಾಗಾಗಿ ಆರೋಗ್ಯವಂತರಾಗಿ ಇರಬೇಕು ಎಂದರು.

10ನೇ ಶತಮಾನ ಇಂಗ್ಲೆಂಡ್, 20ನೇ ಶತಮಾನ ಅಮೆರಿಕದ್ದು, 21ನೇ ಶತಮಾನ ಭಾರತದ್ದು ಆಗಬೇಕು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ ಮಾತನಾಡಿ, 21ನೇ ಶತಮಾನದಲ್ಲಿದ್ದರೂ ನಾವು ಸಮಾಧಾನಿಗಳಾಗಿಲ್ಲ, ನಿಶ್ಚಿಂತರಾಗಿಲ್ಲ. ಯೋಗ ರೋಗ ಬರುವುದನ್ನು ತಡೆಯುತ್ತದೆ. ಆದರೆ, ನಮ್ಮ ಋಷಿ, ಮುನಿಗಳು ಕೊಟ್ಟದ್ದನ್ನು ನಾವು ಮೆರೆಯುತ್ತಿದ್ದೇವೆ. ಸನ್ಮಾನ್ಯ ದೈವಿಪುರುಷ ಮೋದಿ ಬಂದ ನಂತರ ನಮ್ಮ ಸಂಸ್ಕೃತಿ, ಪರಂಪರೆ, ಯೋಗವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರು. ಆರೋಗ್ಯ ಬಹಳ ಮುಖ್ಯವಾದುದು. ನಿತ್ಯ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು. ಆರೋಗ್ಯವಂತರಾಗಿ ಇರೋಣ ಎಂದರು.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾತನಾಡಿ, ವಿಜಯನಗರ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸ್ಥಳ. ಅದರ ಇತಿಹಾಸ ಎಲ್ಲರಿಗೂ ಗೊತ್ತಿದೆ. ಹಂಪಿಯಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ವಿಷಯ. ಯೋಗದ ಬಗ್ಗೆ ಹೇಳಲು ನಾನು ದೊಡ್ಡವನಲ್ಲ. ಆರೋಗ್ಯ, ಶಿಕ್ಷಣ, ಆರ್ಥಿಕ ಕ್ಷೇತ್ರದಲ್ಲಿ ವಿಶ್ವಗುರು ಆಗಬೇಕೆಂಬ ಮಹದಾಸೆಯಿಂದ ಮೋದಿಯವರು ಶ್ರಮಿಸುತ್ತಿದ್ದಾರೆ. ಗಡಿಯಾರದ ತರಹ ನಮ್ಮ ವ್ಯವಸ್ಥೆ ನಡೆಯುತ್ತಿತ್ತು. ಮೋದಿ ಬಂದ ನಂತರ ಪ್ರತಿ ಕ್ಷಣ ದೇಶ, ಯುವಕರು, ರೈತರಿಗೆ ಏನೆಲ್ಲ ಸವಲತ್ತು ಕೊಡಬೇಕೆಂದು ಚಿಂತಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಶ್ವಾಸಗುರು ಸಂಸ್ಥೆಯ ವಚನಾನಂದ ಸ್ವಾಮೀಜಿ, ಹಂಪಿ‌ ಮಾತಂಗ ಪೂರ್ಣಾನಂದ ಭಾರತಿ ಸ್ವಾಮೀಜಿ, ಸಂಸದ ವೈ.ದೇವೇಂದ್ರಪ್ಪ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ., ಜಿಲ್ಲಾ ಪಂಚಾಯಿತಿ ಸಿಇಒ‌ ಹರ್ಷಲ್ ಭೋಯರ್ ನಾರಾಯಣರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಡಾ. ಅರುಣ್ ಕೆ.,ಹಂಪಮ್ಮ, ಪದ್ಮಮ್ಮ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT