ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಮಗಂಟು ರೋಗಕ್ಕೆ ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ 2,831 ಜಾನುವಾರುಗಳ ಸಾವು

ನಿಧಾನವಾಗಿ ಹತೋಟಿಗೆ ಬರುತ್ತಿರುವ ಜಾನುವಾರುಗಳ ಚರ್ಮಗಂಟು ರೋಗ
Last Updated 14 ಡಿಸೆಂಬರ್ 2022, 20:57 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಚರ್ಮಗಂಟು ರೋಗ (‘ಕ್ಯಾಪ್ರಿಫಾಕ್ಸ್‌’) ಅವಳಿ ಜಿಲ್ಲೆಗಳಲ್ಲಿ ಒಟ್ಟು 2831 ಜಾನುವಾರುಗಳನ್ನು ಬಲಿ ತೆಗೆದುಕೊಂಡಿದೆ.

ಐದು ತಿಂಗಳ ಹಿಂದೆ ಹಾವೇರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯಿಂದ ಹರಡಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಹೂವಿನಹಡಗಲಿ, ಕೂಡ್ಲಿಗಿ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಕಾಲಿಟ್ಟಿದ್ದ ‘ಕ್ಯಾಪ್ರಿಫಾಕ್ಸ್‌’ ಸೋಂಕು ನಿಧಾನವಾಗಿ ಜಿಲ್ಲೆಯಾದ್ಯಂತ ಹರಡಿತು. ಆರಂಭದಲ್ಲಿ ಅಲ್ಲಲ್ಲಿ ಚರ್ಮಗಂಟು ರೋಗದಿಂದ ಜಾನುವಾರುಗಳು ಸಾವನ್ನಪ್ಪಲು ಆರಂಭಿಸಿದವು. ವಾಸ್ತವದಲ್ಲಿ ಏನಾಗುತ್ತಿದೆ ಎನ್ನುವುದು ರೈತರಿಗೂ ಗೊತ್ತಾಗಲಿಲ್ಲ.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯು ಅದನ್ನು ಗಂಭೀರವಾಗಿ ತೆಗೆದುಕೊಂಡು ಆರಂಭದಲ್ಲೇ ತುರ್ತು ಕ್ರಮಗಳನ್ನು ಕೈಗೊಂಡಿರಲಿಲ್ಲ. ಅದರ ಪರಿಣಾಮ ಕೆಲವೇ ದಿನಗಳಲ್ಲಿ ಜಿಲ್ಲೆಯ ಪ್ರತಿಯೊಂದು ಮೂಲೆಗೂ ಸೋಂಕು ವ್ಯಾಪಿಸಿತು. ಇದರ ಪರಿಣಾಮ ಐದು ತಿಂಗಳಲ್ಲಿ 2,831 ಜಾನುವಾರುಗಳು ಸಾವನ್ನಪ್ಪಿವೆ.

ವಿಜಯನಗರ ಜಿಲ್ಲೆಯ ನಂತರ ಬಳ್ಳಾರಿಗೂ ಸೋಂಕು ಹರಡಿತು. ಆದರೆ, ಅಷ್ಟರಲ್ಲಾಗಲೇ ಲಸಿಕೆ ಹಾಕುವ ಕೆಲಸ ಆರಂಭಿಸಿದ್ದರಿಂದ ವಿಜಯನಗರ ಜಿಲ್ಲೆಗೆ ಹೋಲಿಸಿದರೆ ಬಳ್ಳಾರಿ ಜಿಲ್ಲೆಯಲ್ಲಿ ಅದರ ತೀವ್ರತೆ ಕಂಡು ಬರಲಿಲ್ಲ. ಬಳ್ಳಾರಿ ಜಿಲ್ಲೆಯಾದ್ಯಂತ 357 ಜಾನುವಾರುಗಳು ಮರಣ ಹೊಂದಿದರೆ, ವಿಜಯನಗರದಲ್ಲಿ 2474 ರಾಸುಗಳು ಬಲಿಯಾಗಿವೆ. ಹರಪನಹಳ್ಳಿಯಲ್ಲಿ 841, ಹೂವಿನಹಡಗಲಿಯಲ್ಲಿ 594, ಕೂಡ್ಲಿಗಿಯಲ್ಲಿ 406 ಜಾನುವಾರುಗಳು ಸಾವನ್ನಪ್ಪಿದ್ದು, ವಿಜಯನಗರದಲ್ಲೇ ಅತಿ ಹೆಚ್ಚು.

ಲಸಿಕೆ–ಪರಿಹಾರ:

ರೋಗದ ತೀವ್ರತೆ ಹೆಚ್ಚಾಗುತ್ತಿದ್ದಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಎರಡೂ ಜಿಲ್ಲೆಗಳಲ್ಲಿ ಲಸಿಕೆ ಹಾಕುವ ವೇಗ ಹೆಚ್ಚಿಸಿದರಿಂದ ಈಗ ಸೋಂಕು ಹರಡುವ ತೀವ್ರತೆ ತಗ್ಗಿದೆ. ಸಾವಿನ ಪ್ರಮಾಣವೂ ಕಡಿಮೆಯಾಗಿದೆ. ಎರಡೂ ಜಿಲ್ಲೆಗಳಲ್ಲಿ ಒಟ್ಟು 502382 ಜಾನುವಾರುಗಳಿವೆ (ಹಸು, ಎಮ್ಮೆ). ಇದರಲ್ಲಿ 22430 ರಾಸುಗಳಿಗೆ ಸೋಂಕು ತಗುಲಿತ್ತು. ಇದರಲ್ಲಿ 18074 ಗುಣಮುಖ ಹೊಂದಿವೆ.

1525 ಜಾನುವಾರುಗಳಿಗೆ ಈಗಲೂ ಚಿಕಿತ್ಸೆ ಮುಂದುವರೆಸಲಾಗಿದೆ. ಒಟ್ಟು 307663 ರಾಸುಗಳಿಗೆ ಲಸಿಕೆ ಹಾಕಲಾಗಿದೆ. ಈಗಲೂ ಲಸಿಕೆಯ ದಾಸ್ತಾನು ಇದ್ದು, ಬೇಡಿಕೆ ಇರುವ ಕಡೆಗಳಲ್ಲಿ ಪೂರೈಸಲಾಗುತ್ತಿದೆ. ಇದರಿಂದ ದಿನೇ ದಿನೇ ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ.

ಇದುವರೆಗೆ ಒಟ್ಟು 43 ಜಾನುವಾರುಗಳ ಮಾಲೀಕರಿಗೆ ಪರಿಹಾರ ವಿತರಿಸಲಾಗಿದೆ. ಎತ್ತಿಗೆ ₹30 ಸಾವಿರ, ಹಸುವಿಗೆ ₹20 ಸಾವಿರ, ಕರುವಿಗೆ ತಲಾ ₹5 ಸಾವಿರ ಪರಿಹಾರ ನೀಡಲಾಗಿದೆ.

ಚರ್ಮಗಂಟು ರೋಗದ ತಾಲ್ಲೂಕುವಾರು ವಿವರ

ತಾಲ್ಲೂಕು ಹೆಸರು; ಜಾನುವಾರುಗಳ ಸಂಖ್ಯೆ; ರೋಗಬಾಧಿತ ಜಾನುವಾರು; ಮರಣ
ಹೊಸಪೇಟೆ; 32953; 864; 96
ಹಗರಿಬೊಮ್ಮನಹಳ್ಳಿ; 48983; 1793; 311
ಹೂವಿನಹಡಗಲಿ; 53855; 5914; 594
ಕೂಡ್ಲಿಗಿ; 68699; 3085; 406
ಹರಪನಹಳ್ಳಿ; 91276; 3092; 841
ಕೊಟ್ಟೂರು; 26005; 3110; 226
ಬಳ್ಳಾರಿ; 50932; 1801; 99
ಸಿರುಗುಪ್ಪ; 38232; 758; 92
ಸಂಡೂರು; 48794; 835; 84
ಕಂಪ್ಲಿ; 21541; 692; 27
ಕುರುಗೋಡು; 21112; 486; 55
ಒಟ್ಟು; 502382; 22430 2831
ಮೂಲ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT