ಹೊಸಪೇಟೆ (ವಿಜಯನಗರ): ಖಾಸಗೀಕರಣ ವಿರೋಧಿಸಿ ಅಂಚೆ ನೌಕರರು ಬುಧವಾರ ನಗರದ ಪ್ರಧಾನ ಅಂಚೆ ಕಚೇರಿ ಎದುರು ಧರಣಿ ನಡೆಸಿದರು.
ಖಾಸಗೀಕರಣ ಪ್ರಕ್ರಿಯೆ ಕೂಡಲೇ ಕೈಬಿಡಬೇಕು. ಹೊಸ ಪಿಂಚಣಿ ಯೋಜನೆಯನ್ನು ನಿಲ್ಲಿಸಿ, ಹಳೆ ಪಿಂಚಣಿ ಯೋಜನೆಯನ್ನೇ ಮುಂದುವರೆಸಬೇಕು. ಗ್ರಾಮೀಣ ಅಂಚೆ ನೌಕರರಿಗೆ ನಾಗರಿಕ ಸೇವಕ ಸ್ಥಾನಮಾನ ನೀಡಿ ಅವರ ಸೇವೆ ಕಾಯಂಗೊಳಿಸಬೇಕು. ಬಡ್ತಿಗೆ ರೂಪಿಸಿರುವ ಹೊಸ ನಿಯಮ ಹಿಂಪಡೆಯಬೇಕು. ಎಂಟನೇ ಕೇಂದ್ರ ವೇತನ ಆಯೋಗ ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಹೊಸಪೇಟೆ ಶಾಖೆಯ ಕಾರ್ಯದರ್ಶಿ ಎಲ್.ಎಸ್. ಸುರೇಶ್ ಕುಮಾರ್, ಅಂಚೆ ಕಚೇರಿಯ ಅಂಚೆ ಪಾಲಕರಾದ ಕೆ.ಕೊಟ್ರೇಶಪ್ಪ, ಹಾಲೇಶ್, ಹೊಸಪೇಟೆ ಶಾಖೆ ಅಧ್ಯಕ್ಷ ಎಂ. ರಾಮರಾವ್, ಬಿ. ಪಾಲಯ್ಯ, ಖಜಾಂಚಿ ವಿ.ಎಸ್. ಕೃಷ್ಣ, ಪೋಸ್ಟ್ ಮ್ಯಾನ್ ಸಂಘದ ಅಧ್ಯಕ್ಷ ಶಿವಕುಮಾರ್ ಇತರರಿದ್ದರು.