ಕೆಂಭಾವಿ: ಸಾಲಬಾಧೆ ತಾಳ ಲಾರದೆ ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣ ಸಮೀಪ ಹದನೂರ ಗ್ರಾಮದಲ್ಲಿ ನಡೆದಿದೆ.
ಹದನೂರ ಗ್ರಾಮದ ಸಂಗಣ್ಣಗೌಡ ಬಾಪುಗೌಡ ಮಾಲಿಪಾಟೀಲ (50) ಮೃತ ರೈತ. ಕೃಷಿ ಬೆಳೆಗಾಗಿ ಬ್ಯಾಂಕ್, ಸೊಸೈಟಿ ಮತ್ತು ಕೈಸಾಲ ಮಾಡಿಕೊಂಡಿದ್ದ. ಕಳೆದ 2–3 ವರ್ಷಗಳಿಂದ ಸರಿಯಾಗಿ ಬೆಳೆ ಬಾರದೆ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಶ್ರೀದೇವಿ ಮಾಲಿಪಾಟೀಲ ಪ್ರಕರಣದಲ್ಲಿ ದಾಖಲಿಸಿದ್ದಾರೆ.
ಶಹಾಪುರಿನ ಕರ್ನಾಟಕ ಬ್ಯಾಂಕ್ನಲ್ಲಿ ₹6 ಲಕ್ಷ, ಮಲ್ಲಾ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ನಲ್ಲಿ ₹1 ಲಕ್ಷ, ಮಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಕೈಗಡವಾಗಿ ₹2 ಲಕ್ಷ ಸಾಲ ಮಾಡಿಕೊಂಡಿದ್ದ ಎಂದು ತಿಳಿಸಿದ್ದಾರೆ.
ಸೆ.13ರಂದು (ಸೋಮವಾರ) ಹೊಲದ ಕೆಲಸಕ್ಕೆ ಗೋಗಿದ್ದರು. ವಿಶ್ರಾಂತಿಗೆ ತೆರಳುವುದಾಗಿ ತಿಳಿಸಿ ಬಳಿಕ ಕ್ರಿಮಿನಾಶಕ ಸೇವಿಸಿದ್ದಾರೆ. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಲಬುರ್ಗಿಯ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.