ಗುರುಮಠಕಲ್: ಪಟ್ಟಣದ ವಿವಿಧೆಡೆ ಹಾಗೂ ತಾಲ್ಲೂಕಿನ ಪ್ರಮುಖ ದೇವಸ್ಥಾನಗಳು ಹಾಗೂ ಗ್ರಾಮಗಳ ಹನುಮ ಮಂದಿರಗಳಲ್ಲಿ ಬುಧವಾರ ರಾಮ ನವಮಿ ಹಿನ್ನೆಲೆಯಲ್ಲಿ ವಿಶೇಷ ಪೂಜೆ, ಕಲ್ಯಾಣೋತ್ಸವ, ಅಭಿಷೇಕ ಸೇವೆ, ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳ ಜತೆಗೆ ‘ಜೈ ಶ್ರೀರಾಮ್’ ಘೋಷಣೆಗಳು ಮೊಳಗಿದವು.
ಹನುಮ ಮಂದಿರ: ಪಟ್ಟಣದ ಬಸ್ ನಿಲ್ದಾಣದ ಎದುರಿನ ಹನುಮ ಮಂದಿರದಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ರಾಮ ನವಮಿಯ ಸಂಭ್ರಮ ಆರಂಭವಾಗಿತ್ತು. ಬೆಳಿಗ್ಗೆ ದೇವಸ್ಥಾನದ ಮೂಲ ವಿರಾಟ ವಿಶೇಷ ಅಭಿಷೇಕ, ಅಲಂಕಾರ, ಆರತಿ ಸೇವೆಗಳೊಂದಿ ರಾಮ ನವಮಿ ಉತ್ಸವವು ಆರಂಭಗೊಂಡಿತು.
ಸೀತಾ, ಶ್ರೀರಾಮ, ಲಕ್ಷ್ಮಣರ ಉತ್ಸವ ಮೂರ್ತಿಗಳಿಗೆ ವಿಶೇಷ ಅಭಿಷೇಕ, ಅಲಂಕಾರದ ನಂತರ ಕಲ್ಯಾಣೋತ್ಸವ ಜರುಗಿತು. ಕಲ್ಯಾಣೋತ್ಸವದ ನಂತರ ಉಂಜಿಲ ಸೇವೆ (ಉಯ್ಯಾಲೆ ಸೇವೆ), ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ಜರುಗಿತು. ಭಜನೆ ಮತ್ತು ಕೀರ್ತನಾ ಸೇವೆಗಳು ಜರುಗಿದವು.
ಹಿಂದೂ ಸಂಘಟನೆ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದಲ್ಲಿ ಹಿಂದೂ ಯುವ ಘರ್ಜನೆ ಸಂಘಟನೆಯ ಕಾರ್ಯಕರ್ತರು ರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮ ದೇವರ ವಿಗ್ರಹಗಳನ್ನು ಸ್ಥಾಪಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ರಾಮನ ಹಾಡುಗಳಿಗೆ ಕುಣಿದು ಸಂಭ್ರಮಿಸಿದರು.
ಬೋರಬಂಡಾ: ಹತ್ತಿರದ ಬೋರಬಂಡಾ ಗ್ರಾಮದ ಹೊರವಲಯದಲ್ಲಿರುವ ಶ್ರೀಲಕ್ಷ್ಮಿ ತಿಮ್ಮಪ್ಪ ದೇವಸ್ಥಾನ ಸಮಿತಿ ವತಿಯಿಂದ ದೇವಸ್ಥಾನದಲ್ಲಿ ಬೆಳಿಗ್ಗೆ ಸುಪ್ರಭಾತ, ಅಭಿಷೇಕ, ಅಲಂಕಾರ ಸೇವೆಗಳು ಜರುಗಿದವು. ನಂತರ ರಥೋತ್ಸವ, ಮಂಗಳಾರತಿಯ ನಂತರ ಪ್ರಸಾದ ವಿತರಣೆ ಮಾಡಲಾಯಿತು.
ಅನಿರುದ್ಧ ಕಾಕಲವಾರ ತಂಡದಿಂದ ಭಜನೆ, ಕೀರ್ತನಾ ಸಂಗೀತ ಸೇವೆಗಳು ಜರುಗಿದವು.
ಶ್ರೀಲಕ್ಷ್ಮೀ ತಿಮ್ಮಪ್ಪ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಕಾರ್ಯದರ್ಶಿ ನರೇಂದ್ರ ರಾಠೋಡ, ಲಕ್ಷ್ಮೀಬಾಯಿ ರಾಠೋಡ, ಅಯ್ಯಪ್ಪದಾಸ, ಡಾ.ವೆಂಕಟಮ್ಮ, ರಮೇಶ ರಾಠೋಡ, ನಿವೃತ್ತ ಪಿಎಸ್ಐ ವೀರಣ್ಣ ಕೇಶ್ವಾರ, ನಿವೃತ್ತ ಉಪನ್ಯಾಸಕ ಭೀಮರೆಡ್ಡಿ ಉಡುಮಲಗಿದ್ದ, ಕಿಶನ ರಾಠೋಡ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.
ಗುರುಮಠಕಲ್ ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮ ಮಂದಿರದಲ್ಲಿ ಬುಧವಾರ ಸೀತಾರಾಮ ಕಲ್ಯಾಣೋತ್ಸವ ಜರುಗಿತು
ಗುರುಮಠಕಲ್ ಪಟ್ಟಣದ ಬಸ್ ನಿಲ್ದಾಣದ ಎದುರುಗಡೆ ಹಿಂದೂ ಯುವ ಘರ್ಜನೆ ಸಂಘಟನೆ ವತಿಯಿಂದ ರಾಮ ನವಮಿ ಆಚರಿಸಲಾಯಿತು