ಯಾದಗಿರಿ: ಜಿಲ್ಲೆಯೂ ರಾಯಚೂರು ಮತ್ತು ಕಲಬುರಗಿ ಲೋಕಸಭೆ ಕ್ಷೇತ್ರಕ್ಕೆ ಹರಿದು ಹಂಚಿಹೋಗಿದೆ. ಯಾದಗಿರಿ, ಶಹಾಪುರ, ಸುರಪುರ ವಿಧಾನಸಭಾ ಕ್ಷೇತ್ರಗಳು ರಾಯಚೂರು ಕ್ಷೇತ್ರಕ್ಕೆ, ಗುರುಮಠಕಲ್ ಮತಕ್ಷೇತ್ರ ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ಹಂಚಿಕೆಯಾಗಿದೆ.
ರಾಯಚೂರು (ಪರಿಶಿಷ್ಟ ಪಂಗಡ) ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಶೇ 73.46ರಷ್ಟು ಜನರು ಗ್ರಾಮೀಣ ಪ್ರದೇಶ, ಶೇ 26.54ರಷ್ಟು ಜನರು ನಗರ ಪ್ರದೇಶದಲ್ಲಿ ವಾಸಿಸುತ್ತಾರೆ.
ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂದು ರಾಯಚೂರು ಲೋಕಸಭೆ ಕ್ಷೇತ್ರವನ್ನು ಗುರುತಿಸಲಾಗುತ್ತದೆ. ಕರ್ನಾಟಕದಲ್ಲಿ ಐಐಟಿ ಸ್ಥಾಪನೆ ಬಗ್ಗೆ ಚರ್ಚೆಗಳು ಆರಂಭವಾದಾಗ ರಾಯಚೂರಿನ ಹೆಸರು ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಐಐಟಿ ಧಾರವಾಡ ಜಿಲ್ಲೆಯ ಪಾಲಾಯಿತು. ಉದ್ಯೋಗ ಸೃಷ್ಟಿಯಾಗುವಂತಹ ಯಾವುದೇ ಕೈಗಾರಿಕೆಗಳನ್ನು ಕ್ಷೇತ್ರ ಒಳಗೊಂಡಿಲ್ಲ. ಇದರಿಂದಾಗಿ ಜಿಲ್ಲೆಯ ಜನರು ಉದ್ಯೋಗ ಹುಡುಕಿಕೊಂಡು ಗುಳೆ ಹೋಗುವುದು ತಪ್ಪಿಲ್ಲ. ಅದರಲ್ಲೂ ಮಳೆ ಕೈ ಕೊಟ್ಟಾಗ ರೈತರು ಉದ್ಯೋಗ ಹುಡುಕಿ ಬೇರೆ ಜಿಲ್ಲೆ, ರಾಜ್ಯಗಳಿಗೆ ವಲಸೆ ಹೋಗುತ್ತಾರೆ.
ನೀರಾವರಿ ಇಲ್ಲದ ಪ್ರದೇಶದಲ್ಲಿ ಜನರೂ ಇಂದಿಗೂ ಕೆಲಸಕ್ಕಾಗಿ ಗುಳೆ ಹೋಗುವುದು ತಪ್ಪಿಲ್ಲ. ಬಿಸಿಲಿನ ಝಳ ಹೆಚ್ಚಿದ್ದರಿಂದ ಅಂತರ್ಜಲಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ತುಂಗಭದ್ರಾ ಅಣೆಕಟ್ಟು ತುಂಬಿದರೆ ವರ್ಷಪೂರ್ತಿ ಕುಡಿಯುವ ನೀರಿನ ಕೊರತೆ ಎದುರಾಗುವುದಿಲ್ಲ. ಕೃಷ್ಣಾ ಮತ್ತು ತುಂಗಭದ್ರಾ ನದಿ ಹರಿಯುತ್ತಿದ್ದರೂ ಜಿಲ್ಲೆಗಳಲ್ಲಿ ನೀರಾವರಿ ಸಮಸ್ಯೆ ಇದೆ. ಆಯ್ಕೆಯಾದ ಜನಪ್ರತಿನಿಧಿಗಳು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಪಡಬೇಕು ಎಂಬುದು ಜನರ ಆಶಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.