ಶಹಾಪುರ: ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಗೆ(ಎನ್ಎಲ್ಬಿಸಿ) ಹಿಂಗಾರು ಬೆಳೆಗೆ ಮಾರ್ಚ್ 21ವರೆಗೆ ನೀರು ಹರಿಸುವ ಬಗ್ಗೆ ಶುಕ್ರವಾರ ಆಲಮಟ್ಟಿಯಲ್ಲಿ ಸಚಿವ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯ ತೆಗೆದುಕೊಂಡಿದೆ.
ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಲ್ಲಿ ಸಾಕಷ್ಟು ನೀರಿನ ಲಭ್ಯತೆ ಇದೆ. ವಾರ ಬಂದಿ ನಿಯಮದ ಪ್ರಕಾರ (ಎಂಟು ದಿನ ಬಂದ್ ಮಾಡಿ 14 ದಿನ ಕಾಲುವೆಗೆ ನೀರು ಹರಿಸುವುದು) ಕಾಲುವೆಗೆ ನೀರು ಹರಿಸಲಾಗುವುದು. ರೈತರು ಲಘು ಬೆಳೆಗಳನ್ನು ಬೆಳೆಯಬೇಕು. ತ್ವರಿತವಾಗಿ ಹಿಂಗಾರಿ ಬಿತ್ತನೆ ಮಾಡಬೇಕು ಎಂದು ಸಭೆಯಲ್ಲಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ಸುರಪುರ ಶಾಸಕ ರಾಜೂಗೌಡ ನಾಯಕ, ಯಾದಗಿರಿ ಶಾಸಕ ವೆಂಕಟರಡ್ಡಿ ಮುದ್ನಾಳ, ದೇವದುರ್ಗ ಶಾಸಕ ಶಿವನಗೌಡ ನಾಯಕ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ಹಿರಿಯ ಅಧಿಕಾರಿಗಳು ಇದ್ದರು.