ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ: ಪರೀಕ್ಷೆಯ ಯಶಸ್ಸಿಗೆ ಪುನರಾವರ್ತನೆಯ ತಂತ್ರ

Last Updated 16 ಜನವರಿ 2022, 19:31 IST
ಅಕ್ಷರ ಗಾತ್ರ

ಜನವರಿಯಲ್ಲಿ ಹೊಸ ವರ್ಷ ಮತ್ತು ಸಂಕ್ರಾತಿ ಹಬ್ಬದ ಸಂಭ್ರಮದ ಬೆನ್ನಲ್ಲೇ ಪರೀಕೆಯ ಕಾವು ವಿದ್ಯಾರ್ಥಿಗಳನ್ನು ಆವರಿಸಿಕೊಳ್ಳಲು ಆರಂಭಿಸುತ್ತದೆ. ಪರೀಕ್ಷಾ ವೇಳಾಪಟ್ಟಿಗಳು ಪ್ರಕಟವಾಗುತ್ತಿದ್ದಂತೆ ವಿದ್ಯಾರ್ಥಿಗಳೂ ಪರೀಕ್ಷೆ ಸಿದ್ದತೆಯಲ್ಲಿ ತೊಡಗಿಕೊಳ್ಳುತ್ತಾರೆ. ಉಳಿದಿರುವ ಸಮಯದಲ್ಲಿ ಯಾವುದನ್ನು ಓದಬೇಕು? ಎಷ್ಟು ಓದಬೇಕು? ಹೇಗೆ ಓದಬೇಕು? ಯಾವಾಗ ಓದಬೇಕು? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಪ್ರಶ್ನೆಗಳಿಗೆ ಉತ್ತಮ ಪರಿಹಾರವೇ ಓದಿರುವ ವಿಷಯಗಳನ್ನು ಮೆಲಕು ಹಾಕುವ ‘ಪುನರಾವರ್ತನೆ’(ರಿವಿಷನ್) ಪ್ರಕ್ರಿಯೆ.

ಪುನರಾವರ್ತನೆ ಎಂದರೆ?
ಪುನರಾವರ್ತನೆ ಎಂಬುದು ವಿಷಯದ ಕುರಿತ ಜ್ಞಾನವನ್ನು ವಿಸ್ತರಿಸಲು ಅಥವಾ ಸುಧಾರಿಸಲು ಈ ಹಿಂದೆ ಓದಿದ ಪಾಠಗಳನ್ನು ಮರು ಓದುವ ಹಾಗೂ ಅದರಲ್ಲಿನ ಪ್ರಮುಖಾಂಶಗಳನ್ನು ಪುನರ್‌ ಮನನ ಮಾಡಿಕೊಳ್ಳುವ ಪ್ರಕ್ರಿಯೆ.

ಶಾಲಾ–ಕಾಲೇಜುಗಳಲ್ಲಿ ಡಿಸೆಂಬರ್‌ ಅಂತ್ಯ ಅಥವಾ ಜನವರಿ ಪ್ರಾರಂಭದ ವೇಳೆಗೆ ದ್ವಿತೀಯ ಪಿ.ಯು.ಸಿ ಹಾಗೂ ಹತ್ತನೇ ತರಗತಿ ಪಾಠಗಳು ಮುಗಿದಿರುತ್ತವೆ. ಇಲ್ಲಿಂದ ಪರೀಕ್ಷೆ ಆರಂಭದವರೆಗಿನ ಅವಧಿಯು ವಿದ್ಯಾರ್ಥಿಗಳಿಗೆ ತುಂಬಾ ಮಹತ್ವದ್ದು. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಓದಿರುವ ವಿಷಯಗಳನ್ನು ಪುನರಾವರ್ತನೆ ಮಾಡುವುದು ಸೂಕ್ತ. ಅದಕ್ಕೆ ಶಿಕ್ಷಕರು ಮಾರ್ಗದರ್ಶನವೂ ಅಗತ್ಯ.

ಪ್ರಯೋಜನಗಳೇನು?
*ವಿದ್ಯಾರ್ಥಿಗಳು ತಮ್ಮ ಕಲಿಕೆ ಮತ್ತು ಬರವಣಿಗೆ ವೇಗವನ್ನು ಉತ್ತಮಪಡಿಸಿಕೊಳ್ಳಲು, ಪರೀಕ್ಷಾ ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುವ ಮೂಲಕ ಉತ್ತಮ ಶ್ರೇಣಿ ಪಡೆಯಲು ನೆರವಾಗುತ್ತದೆ.
* ವಿದ್ಯಾರ್ಥಿಗಳನ್ನು ಕೇವಲ ಪರೀಕ್ಷೆಗೆ ಮಾತ್ರ ಅಣಿಗೊಳಿಸದೇ ವಿಷಯ ಜ್ಞಾನವನ್ನು ವಿಸ್ತರಿಸುತ್ತದೆ.
* ಪರಿಕಲ್ಪನೆಗಳನ್ನು ಸ್ಪಷ್ಟಗೊಳಿಸುತ್ತದೆ.
* ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ, ಆತಂಕ ಮತ್ತು ಒತ್ತಡಗಳನ್ನು ನಿವಾರಿಸುತ್ತದೆ.
* ಪರೀಕ್ಷಾ ಸಿದ್ದತೆಗೆ ವಿವಿಧ ತಂತ್ರಗಳನ್ನು ಪರಿಚಯಿಸುತ್ತದೆ.
* ಸಮಯದ ಸದುಪಯೋಗವನ್ನು ಕಲಿಸುತ್ತದೆ.
* ಕಲಿತ ಅಂಶಗಳನ್ನು ಮನದಲ್ಲಿ ಉಳಿಸುತ್ತದೆ ಮತ್ತು ಕಲಿಕೆಯ ವೇಳೆ ಬಿಟ್ಟು ಹೋದ ಅಂಶಗಳ ಮನನ ಮಾಡಿಕೊಳ್ಳಲು ಸಹಾಯಕವಾಗುತ್ತದೆ.
* ಕಲಿಕಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುತ್ತದೆ.
* ನಿಗದಿತ ಬೋಧನೆ/ಕಲಿಕಾ ವೇಳೆಯಲ್ಲಿ ಕಲಿಯಲಾಗದ ಅಂಶಗಳನ್ನು ಕಲಿಯುವ ಅವಕಾಶ ದೊರೆಯುತ್ತದೆ.

ತಂತ್ರಗಾರಿಕೆ
ಪುನರಾವರ್ತನೆ ಹೀಗೆ ಮಾಡಬೇಕು ಎಂದು ಹೇಳಲಾಗದು. ಆದರೆ, ಈ ಪ್ರಕ್ರಿಯೆ ವಿದ್ಯಾರ್ಥಿಗಳ ಕಲಿಕಾಮಟ್ಟವನ್ನು ಉನ್ನತೀಕರಿಸುವ ಉದ್ದೇಶ ಹೊಂದಿರಬೇಕು. ಹಾಗಾಗಿ ಬೋಧಕ ಮತ್ತು ಕಲಿಕಾರ್ಥಿ ಇಬ್ಬರೂ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡರೆ ಉತ್ತಮ. ಅದಕ್ಕಾಗಿ ವಿವಿಧ ತಂತ್ರಗಳನ್ನು ಅನುಸರಿಸಬಹುದು. ಅವು ಹೀಗಿವೆ;

* ಪ್ರಮುಖಾಂಶ ಪದ್ಧತಿ: ಪುನರಾವರ್ತನೆಯಲ್ಲಿ ಇದೊಂದು ಜನಪ್ರಿಯ ತಂತ್ರ. ಪರಿಕಲ್ಪನೆ ಅಥವಾ ಘಟಕದಲ್ಲಿನ ಪ್ರಮುಖಾಂಶಗಳನ್ನು ಮನನ ಮಾಡಿಕೊಳ್ಳುವುದು. ಪ್ರಮುಖಾಂಶಗಳ ಕೆಳಗೆ ಅಡ್ಡಗೆರೆ ಹಾಕುವುದು ಅಥವಾ ಹೈಲೈಟ್ ಮಾಡುವುದು, ಅವುಗಳನ್ನು ಟಿಪ್ಪಣಿ ಮಾಡಿಕೊಳ್ಳುವುದು, ಟಿಪ್ಪಣಿ ಮಾಡಿಕೊಂಡ ಅಂಶಗಳನ್ನು ಮತ್ತೊಬ್ಬರಿಗೆ ಹೇಳುವುದು. ಇದರ ಜೊತೆಗೆ, ಶಿಕ್ಷಕರ ನೆರವಿನಿಂದ ಮುಖ್ಯಾಂಶಗಳನ್ನು ಮೈಂಡ್ ಮ್ಯಾಪ್ ಮತ್ತು ಫ್ಲೋಚಾರ್ಟ್‌ ಮಾಡಿಕೊಳ್ಳಬಹುದು.

* ಪ್ರಶ್ನಾ ಪದ್ಧತಿ: ನಿಗದಿತ ಪಠ್ಯ ಅಥವಾ ಪರಿಕಲ್ಪನೆಗೆ ಪೂರಕವಾಗಿ ಪ್ರಶ್ನೆಗಳನ್ನು ರೂಪಿಸಿಕೊಳ್ಳಬೇಕು. ಇದನ್ನು ಶಿಕ್ಷಕರ ಮಾರ್ಗದರ್ಶನದಲ್ಲಿವಿದ್ಯಾರ್ಥಿಗಳು ಮಾಡಿದರೆ ಕಲಿಕೆ ಹೆಚ್ಚು ಸ್ಥಿರಗೊಳ್ಳುತ್ತದೆ. ಜೊತೆಗೆ ಪ್ರಶ್ನೆಗಳಿಗೆ ಉತ್ತರ ಪಡೆಯುವ ಚಟುವಟಿಕೆಯನ್ನೂ ಮಾಡಿಸಿದರೆ ಕಲಿಕೆ ಇನ್ನಷ್ಟು ಗಟ್ಟಿಗೊಳ್ಳುತ್ತದೆ.

* ಸೆಮಿನಾರ್ ಪದ್ಧತಿ:ಇದು ಕಲಿಕೆಗೆ ಪೂರಕವಾಗಿ ಹೆಚ್ಚು ಬಳಕೆಯಲ್ಲಿರುವ ಚಟುವಟಿಕೆಯಾಗಿದ್ದು, ಪುನರಾ ವರ್ತನೆಗೆ ಬಳಸಿಕೊಳ್ಳಬಹುದು. ಈಗಾಗಲೇ ಶಿಕ್ಷಕರು ಬೋಧಿಸಿದ ಪಠ್ಯ/ಪರಿಕಲ್ಪನೆಯಲ್ಲಿನ ಪ್ರಮುಖಾಂಶಗಳನ್ನು ವಿದ್ಯಾರ್ಥಿಗಳು ಮತ್ತೊಮ್ಮೆ ಪಾಠ ಮಾಡುವುದು. ಇಲ್ಲಿ ಪಠ್ಯದ ಆಚೆಗಿನ ಮಾಹಿತಿಯನ್ನು ಬಳಸಲು ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾರ್ಗದರ್ಶನ ಮಾಡಿದರೆ ಉತ್ತಮ.

* ಪ್ರಮುಖಾಂಶ ಪ್ರದರ್ಶನ: ಪಠ್ಯ/ಪರಿಕಲ್ಪನೆಯಲ್ಲಿ ಪ್ರಮುಖಾಂಶಗಳನ್ನು ಡ್ರಾಯಿಂಗ್ ಹಾಳೆಯಲ್ಲಿ ದೊಡ್ಡದಾಗಿ ಬರೆದು ತರಗತಿಯಲ್ಲಿ ಪ್ರದರ್ಶನ ಮಾಡುವುದು. ಇದನ್ನು ವಿದ್ಯಾರ್ಥಿಗಳು ಗುಂಪುವಾರು ತಯಾರಿಸಿ ಪ್ರದರ್ಶಿಸಿದರೆ ಉತ್ತಮ. ಪದ್ಯದ ಸಾಲುಗಳು, ಸಾರಾಂಶ, ವಿಜ್ಞಾನದ ಚಿತ್ರಗಳು, ಸೂತ್ರಗಳು, ಪ್ರಮುಖ ಇಸ್ವಿಗಳು, ಸರಣಿ ಘಟನಾವಳಿಗಳು ಮುಂತಾದವುಗಳನ್ನು ಈ ತಂತ್ರಗಾರಿಕೆಯಲ್ಲಿ ಬಳಸಬಹುದು.

* ಪ್ರಶ್ನೋತ್ತರ ಪದ್ಧತಿ: ನಿಗದಿತ ಘಟಕಕ್ಕೆ ಪೂರಕವಾದ ಪ್ರಶ್ನೆಗಳನ್ನು ತರಗತಿಯಲ್ಲಿ ಕೇಳುವ ಮತ್ತು ಸೂಕ್ತ ಉತ್ತರ ಪಡೆಯುವ ವಿಧಾನ ಇದು. ಇದಕ್ಕೆ ಈ ಹಿಂದೆ ಪರೀಕ್ಷೆಗಳಲ್ಲಿ ಕೇಳಲಾದ ಹಾಗೂ ಸಂಭಾವ್ಯ ಪ್ರಶ್ನೆಗಳನ್ನು ವಿದ್ಯಾರ್ಥಿಗಳೆ ಕೇಳಿ, ಉತ್ತರಿಸುವಂತಾದರೆ ಕಲಿಕೆ ಹೆಚ್ಚು ದೃಢಗೊಳ್ಳುತ್ತದೆ. ಇಲ್ಲೂ ಶಿಕ್ಷಕರ ಮಾರ್ಗದರ್ಶನ ಅವಶ್ಯಕ.

* ಅನ್ಯ ಸಂಪನ್ಮೂಲ ಬಳಕೆ: ಪಠ್ಯದ ಹೊರತಾಗಿ ವಿವಿಧ ವಿಡಿಯೊ, ಆಡಿಯೊ, ಚಿತ್ರಗಳನ್ನು ಬಳಸಬಹುದು. ಯೂಟ್ಯೂಬ್‌ನಲ್ಲಿ ಈ ಪಠ್ಯಗಳಿಗೆ ಸಂಬಂಧಿಸಿದ ಲಭ್ಯವಿರುವ ವಿಡಿಯೊಗಳ ನೆರವು ಪಡೆಯಬಹುದು. ಸಂಪನ್ಮೂಲ ಶಿಕ್ಷಕರು ತಯಾರಿಸಿದ ವಿಡಿಯೊ ಪಾಠಗಳನ್ನು ಪ್ರಸ್ತುತಪಡಿಸಲು ಅವಕಾಶವಿದೆ.

* ವರ್ಕ್‌ಶೀಟ್‌ ಬಳಕೆ: ಕಲಿಕಾಂಶ/ಪರಿಕಲ್ಪನೆಗೆ ಪೂರಕವಾದ ವರ್ಕ್‌ಶೀಟ್‌ನ್ನು(ಅಭ್ಯಾಸ ಪತ್ರಿಕೆ) ಮಕ್ಕಳಿಗೆ ನೀಡಿ, ಅಭ್ಯಾಸ ಮಾಡಿಸಬಹುದು. ಈ ಚಟುವಟಿಕೆಯು ಕಲಿಕೆಯ ದೃಢೀಕರಣ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT