ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಲು ಸರಳ ಸೂತ್ರಗಳು- ಭಾಗ 3

Last Updated 19 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಕಳೆದೆರಡು ವಾರಗಳಲ್ಲಿ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲು ಪೋಷಕರು ಮನೆಯಲ್ಲಿ ಯಾವ್ಯಾವ ರೀತಿಯ ಪೂರಕ ಕಲಿಕಾ ವಾತಾವರಣ ನಿರ್ಮಿಸಬೇಕೆಂದು ತಿಳಿದುಕೊಂಡಿದ್ದೆವು. ಓದಿನ ವಾತಾವರಣ ರೂಪಿಸುವುದು, ಮಕ್ಕಳೊಂದಿಗೆ ಹೇಗೆ ಬೆರೆಯಬೇಕು, ಪ್ರತಿ ಮಗುವಿನಲ್ಲಿ ರುವ ವೈಶಿಷ್ಟ್ಯವನ್ನು ಗುರುತಿಸುವ ಬಗೆ, ಸಮಯದ ಉಳಿತಾಯ, ಶಿಸ್ತಿನ ಕಲಿಕೆ, ಕಲಿಕಾ ಸಾಮಗ್ರಿ ಒಪ್ಪ ಓರಣ, ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುವ ಕುರಿತು ತಿಳಿದುಕೊಂಡಿದ್ದೇವೆ. ಈ ಸರಣಿಯ ಕೊನೆಯ ಭಾಗದಲ್ಲಿ ಇನ್ನಷ್ಟು ಸರಳ ಸೂತ್ರಗಳನ್ನು ತಿಳಿದುಕೊಳ್ಳೋಣ.

8. ಮಕ್ಕಳಿಕೆ ಕಲಿಕೆಯ ಜೊತೆಗೆ ಸಮಸ್ಯೆಗಳನ್ನು ಎದುರಿಸುವ ಧೈರ್ಯವನ್ನು ಕಲಿಸಿ, ಅವರಲ್ಲಿರುವ ಆತ್ಮವಿಶ್ವಾಸ ಹೆಚ್ಚಿಸಬೇಕು.

ಈ ವಿಷಯವನ್ನು ಝೆನ್ ಕಥೆಯೊಂದಿಗೆ ತಿಳಿಯೋಣ;

ಒಮ್ಮೆ ಒಬ್ಬ ವಿದ್ಯಾರ್ಥಿಯು ಝೆನ್ ಗುರುಗಳ ಬಳಿ ‘ಗುರುಗಳೇ, ನಾನು ಈಗ ಧನುರ್ವಿದ್ಯೆಯಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ್ದೇನೆ’ ಎಂದು ಹೇಳಿದ. ಶಿಷ್ಯನ ಸಾಧನೆ ಮೆಚ್ಚಿದ ಗುರುಗಳು, ಆತನನ್ನು ಪ್ರಶಂಸಿಸಿದರು. ಹಾಗೆಯೇ ಅರಣ್ಯದೊಳಗಿನ ಕಡಿದಾದ ಬೆಟ್ಟದ ತುದಿಯಲ್ಲಿ ಹೊರಚಾಚಿಕೊಂಡಿರುವ ಬಂಡೆಯ ಅಂಚಿಗೆ ಕರೆದೊಯ್ದುದರು. ದೂರದಲ್ಲಿರುವ ಗುರಿ ತೋರಿ, ಅದಕ್ಕೆ ಬಾಣ ಹೊಡೆಯುವಂತೆ ಸೂಚಿಸಿದರು. ಬಿಲ್ವಿದ್ಯೆಯಲ್ಲಿ ನಿಪುಣನಾಗಿದ್ದ ಶಿಷ್ಯ, ಬಂಡೆಯ ಅಂಚಿಗೆ ನಿಂತು ಕೆಳಗಿನ ಪ್ರಪಾತ ನೋಡುತ್ತಿದ್ದಂತೆ, ನಡುಗಿ ಹೋದ. ಬಾಣ ಹೂಡುವುದಿರಲಿ, ಅವನಿಗೆ ಅಲ್ಲಿ ನಿಲ್ಲಲೂ ಸಾಧ್ಯವಾಗಲಿಲ್ಲ !!

ಆಗ ಗುರುಗಳು ನಕ್ಕು ಹೇಳಿದರು ’ಮಗು ನೀನು ಬಿಲ್ವಿದ್ಯೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದೀಯ. ಆದರೆ ನಿನ್ನ ಮನಸ್ಸಿನ ಮೇಲೆ ಇನ್ನೂ ಹಿಡಿತ ಸಾಧಿಸಲಾಗಿಲ್ಲ. ಮೊದಲು ಅದನ್ನು ಕಲಿ’ ಎಂದು ಹೇಳಿದರು.

ಎಷ್ಟು ಚಂದದ ಕಥೆ ಅಲ್ಲವಾ ? ಈ ಕಥೆಯಲ್ಲಿ ರುವಂತೆ ಅದೆಷ್ಟೋ ಪೋಷಕರು ಮಕ್ಕಳಿಗೆ ಓದುವ ವಿಷಯಗಳ ಮೇಲೆ ಹಿಡಿತ ಸಾಧಿಸಲು ಒತ್ತಾಯಿಸುತ್ತಾರೆ. ಆದರೆ, ಜೀವನದಲ್ಲಿ ಬರುವಂತಹ ಸಣ್ಣ ಸಮಸ್ಯೆಗಳನ್ನು ಎದುರಿಸಲು ಮಕ್ಕಳ ಮನಸ್ಸನ್ನು ಅಣಿಗೊಳಿಸುವುದರಲ್ಲಿ ಹಿಂದೆ ಬೀಳುತ್ತಾರೆ. ಪೋಷಕರು ಮಕ್ಕಳನ್ನು ವಿಷಯ ನಿಷ್ಣಾತರನ್ನಾಗಿಸುವಂತೆಯೇ, ಜೀವನದ ಸಮಸ್ಯೆಗಳನ್ನು ಎದುರಿಸಲು ಅವರ ಮನಸ್ಸನ್ನು ಅಣಿಗೊಳಿಸಬೇಕು. ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು.

ಗೆಲುವಿನ ಜೊತೆಗೆ ಸೋಲು ಸ್ವೀಕರಿಸುವ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸಬೇಕು. ಸೋಲಿಗೆ ಕಾರಣಗಳನ್ನು ಹುಡುಕಿ, ವಿಶ್ಲೇಷಣೆ ಮಾಡುವುದನ್ನು ಕಲಿಸಬೇಕು. ಮುಂದಿನಬಾರಿ ಗೆಲುವು ಸಾಧಿಸಲು ಬೇಕಾದ ಅಂಶಗಳನ್ನು ಪಟ್ಟಿಮಾಡಲು ಹೇಳಿಕೊಡಬೇಕು.

9. ಮಕ್ಕಳಲ್ಲಿ ಧನಾತ್ಮಕ ರೀತಿಯಲ್ಲಿ ಶಿಸ್ತನ್ನು ಮೂಡಿಸಲು ಪ್ರಯತ್ನಿಸಿ

ಮಕ್ಕಳಲ್ಲಿ ಸರಿಯಾದ ಶಿಸ್ತನ್ನು ಮೂಡಿಸುವಲ್ಲಿ ಮನೆಯ ವಾತಾವರಣದ್ದೇ ಸಿಂಹಪಾಲು. ಆದರೆ, ಶಿಸ್ತನ್ನು ಕಲಿಸುವ ಭರದಲ್ಲಿ ಅವರ ಭಾವನೆಗಳಿಗೆ ಹಾನಿಯಾಗದಂತೆ ಎಚ್ಚರವಹಿಸಬೇಕು. ಶಿಸ್ತನ್ನು ಕಲಿಸುವಾಗ, ಅದರ ಹಿಂದಿನ ಕಾರಣವನ್ನು ಮಕ್ಕಳಿಗೆ ತಿಳಿಸಿ ಹೇಳಿ. ಇದರಿಂದ ಅವರು ಸಂತೋಷವಾಗಿ ಆ ಶಿಸ್ತನ್ನು ಪಾಲಿಸುತ್ತಾರೆ.

ಪೋಷಕರು ಎರಡು ರೀತಿಯಲ್ಲಿ ಶಿಸ್ತನ್ನು ಮೂಡಿಸಲು ಪ್ರಯತ್ನಿಸುತ್ತಾರೆ. ಒಂದು ನಕಾರಾತ್ಮಕ ರೀತಿ ಮತ್ತೊಂದು ಸಕಾರಾತ್ಮಕ ರೀತಿ.

ನಕಾರಾತ್ಮಕ ವಿಧಾನ: ಮಕ್ಕಳು ತಪ್ಪು ಮಾಡಿ ದಾಗ, ಪೋಷಕರು ಅವರಿಗೆ ಶಿಕ್ಷೆ ಕೊಡುವುದೋ ಅಥವಾ ಬೈಯುವುದೋ ಮಾಡುತ್ತಾರೆ. ಮೊದ ಮೊದಲು ಈ ಶಿಕ್ಷೆಗೆ ಹೆದರುವ ಮಕ್ಕಳು, ನಂತರದಲ್ಲಿ ಆ ಶಿಕ್ಷೆಗಳಿಗೇ ಹೊಂದಿಕೊಂಡು. ಪೋಷಕರ ಮಾತನ್ನು ಕೇಳದಿರುವ ಸಂಭವ ಹೆಚ್ಚು. ಆದ್ದರಿಂದ, ನಕಾರಾತ್ಮಕ ವಿಧಾನವನ್ನು ಪಾಲಿಸದಿರುವುದು ಉತ್ತಮ.

ಸಕಾರಾತ್ಮಕ ವಿಧಾನ: ಮಕ್ಕಳು ಯಾವುದೇ ಒಳ್ಳೆಯ ಕೆಲಸ ಮಾಡಿದಾಗ, ಅದನ್ನು ಗುರುತಿಸುವುದು. ಅವರನ್ನು ಪ್ರಶಂಸಿಸಿ, ಇನ್ನೂ ಹೆಚ್ಚಿನ ಒಳ್ಳೆಯ ಕೆಲಸಗಳನ್ನು ಮಾಡುವಂತೆ ಪ್ರೋತ್ಸಾಹಿಸುವುದು.ಇದು ಉತ್ತಮವಾದ ವಿಧಾನ. ಮಕ್ಕಳನ್ನು ಹೀಗೆ ಪ್ರೋತ್ಸಾಹಿಸುವುದರಿಂದ, ಅವರು ಪೋಷಕರನ್ನು ಗೌರವಿಸುತ್ತಾರೆ ಮತ್ತು ಅವರ ಮಾತನ್ನೂ ಕೇಳುತ್ತಾರೆ.

10. ಮಕ್ಕಳಿಗೆ ಜವಾಬ್ದಾರಿಯನ್ನು ಕಲಿಸಿ.

ಇದು ಬಹಳ ಮುಖ್ಯ, ಎಷ್ಟೋ ಮಕ್ಕಳು ಓದಿನಲ್ಲಿ ಬಹಳ ಮುಂದಿದ್ದರೂ, ದಿನ ನಿತ್ಯದ ವ್ಯವಹಾರಗಳ ಬಗ್ಗೆ ಅರಿವಿರುವುದಿಲ್ಲ. ಪೋ ಷಕರು ಮನೆಯ ಕೆಲಸಗಳನ್ನು ಮಾಡುವಾಗ ಅಥವಾ ಯಾವುದಾದರೂ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮಕ್ಕಳ ಸಲಹೆಯನ್ನೂ ತೆಗೆದುಕೊಳ್ಳಿ. ಅವರ ಸಲಹೆಗಳನ್ನೂ ಗೌರವಿಸಿ. ಅವರಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿ.

ಹೀಗೆ ಮಕ್ಕಳಲ್ಲಿ ಸರಿಯಾದ ಜೀವನದ ಮೌಲ್ಯಗಳನ್ನು ತುಂಬಿದಾಗ ಮಾತ್ರ ಸಮಾಜವು ಸ್ವಸ್ಥ, ಶಾಂತಿಯುತ ಹಾಗೂ ಮೌಲ್ಯಾಧಾರಿತವಾ ಗಿರಲು ಸಾಧ್ಯ. ಇದರಲ್ಲಿ ಪೋಷಕರ ಪಾತ್ರ ಬಹಳ ಪ್ರಮುಖವಾಗಿದೆ.

(ಮುಗಿಯಿತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT