ಚಂಡೀಗಢ: 'ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಲಿದೆ ಎಂಬುದು ಬಿಜೆಪಿಯ ಬಕ್ವಾಸ್ (ಅಸಂಬದ್ಧ) ವಾದ ಆಗಿದ್ದು, 200ರ ಗಡಿ ಸಹ ದಾಟುವುದಿಲ್ಲ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಹೇಳಿದ್ದಾರೆ.
ಅಮೃತಸರದಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, 'ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಬಿಜೆಪಿ ಸೀಟುಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಕಾಂಗ್ರೆಸ್ ಹಾಗೂ 'ಇಂಡಿಯಾ' ಮೈತ್ರಿಕೂಟ ಲಾಭ ಗಳಿಸುತ್ತಿದೆ' ಎಂದು ಹೇಳಿದ್ದಾರೆ.
'ನಿಮ್ಮ (ಬಿಜೆಪಿ) ಸೀಟುಗಳ ಸಂಖ್ಯೆ ಕುಸಿಯುತ್ತಿದೆ. 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಆಸೆಯನ್ನು ಮರೆತುಬಿಡಿ. ಅದು ಬಕ್ವಾಸ್ (ಅಸಂಬದ್ಧ). ನಿಮಗೆ ಸರ್ಕಾರ ರಚಿಸಲು ಸಾಧ್ಯವಾಗುವುದಿಲ್ಲ. 200 ಸ್ಥಾನಗಳನ್ನೂ ಮೀರುವುದಿಲ್ಲ' ಎಂದು ಖರ್ಗೆ ಹೇಳಿದ್ದಾರೆ.
'ತಮಿಳುನಾಡು, ಕೇರಳ, ತೆಲಂಗಾಣ ರಾಜ್ಯಗಳಲ್ಲಿ ಬಿಜೆಪಿ ಅಸ್ತಿತ್ವದಲ್ಲಿಲ್ಲ. ಕರ್ನಾಟಕ, ಮಹಾರಾಷ್ಟ್ರದಲ್ಲಿ ದುರ್ಬಲವಾಗಿದೆ. ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಅಲ್ಪ ಮಟ್ಟಿನ ಸ್ಪರ್ಧೆಯಿದೆ. ಹೀಗಿರುವಾಗ ನೀವು (ಬಿಜೆಪಿ) 400 ಸೀಟುಗಳನ್ನು ಗೆಲ್ಲಲು ಹೇಗೆ ಸಾಧ್ಯ' ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಚುನಾವಣೆ ಫಲಿತಾಂಶದ ಬಳಿಕ ಎಐಸಿಸಿ ಅಧ್ಯಕ್ಷ ಖರ್ಗೆ ಅವರು ತಮ್ಮ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಖರ್ಗೆ, 'ನಾನು ರಾಜಕೀಯಕ್ಕೆ ಸೇರಿದ್ದು ಕೆಲಸ ಮಾಡುವುದಕ್ಕೆ ಅಲ್ಲ. ಚಿಕ್ಕವನಿಂದಲೂ ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ಜೂನ್ 4ರ ಬಳಿಕ ತಮ್ಮ ಕೆಲಸದ ಬಗ್ಗೆ ಅಮಿತ್ ಶಾ ಚಿಂತಿಸುವುದು ಒಳಿತು' ಎಂದು ಕಿವಿಮಾತು ಹೇಳಿದ್ದಾರೆ.
'ಪಕ್ಷದ ಪ್ರಣಾಳಿಕೆ ದೇಶದ ಯುವಜನತೆ, ರೈತರು, ಕಾರ್ಮಿಕರು ಹಾಗೂ ದುರ್ಬಲ ವರ್ಗದವರ ಪರವಾಗಿದೆ. 'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದ ಬಳಿಕ ಖಾಲಿ ಇರುವ 30 ಲಕ್ಷ ಸರ್ಕಾರಿ ಉದ್ಯೋಗವನ್ನು ಭರ್ತಿ ಮಾಡಲಾಗುವುದು' ಎಂದು ಖರ್ಗೆ ಪುನರುಚ್ಚರಿಸಿದ್ದಾರೆ.