ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

NDA ಸೇರಲು ಶರದ್‌ ಪವಾರ್‌ಗೆ PM ನೀಡಿದ್ದು ಆಹ್ವಾನವಲ್ಲ, ಸಲಹೆ: ಫಡಣವೀಸ್

Published 11 ಮೇ 2024, 14:11 IST
Last Updated 11 ಮೇ 2024, 14:11 IST
ಅಕ್ಷರ ಗಾತ್ರ

ಪುಣೆ: ‘ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್ ಅವರಿಗೆ ಎನ್‌ಡಿಎ ಸೇರಲು ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದರೇ ವಿನಃ, ಆಹ್ವಾನವಲ್ಲ’ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಶನಿವಾರ ಸ್ಪಷ್ಟಪಡಿಸಿದ್ದಾರೆ.

ನಂದೂರ್ಬಾರ್‌ ಜಿಲ್ಲೆಯಲ್ಲಿ ಶುಕ್ರವಾರ ನಡೆದ ರ‍್ಯಾಲಿಯ ಸಂದರ್ಭದಲ್ಲಿ, ‘ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ ನಾಶವಾಗುವುದಕ್ಕಿಂತ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯದಲ್ಲಿರುವ ಏಕನಾಥ ಶಿಂದೆ ಮತ್ತು ಅಜಿತ್ ಪವಾರ್ ನೇತೃತ್ವದ ಸರ್ಕಾರದೊಂದಿಗೆ ಎನ್‌ಸಿಪಿ(ಎಸ್‌ಪಿ) ಹಾಗೂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಬಣ ಕೈಜೋಡಿಸಲಿ ಎಂದು ಪ್ರಧಾನಿ ಮೋದಿ ಅವರು ಸಲಹೆ ನೀಡಿದ್ದಾರೆ’ ಎಂದಿದ್ದಾರೆ.

‘ಬಾರಾಮತಿಯಿಂದ ಸ್ಪರ್ಧಿಸಿರುವ ಶರದ್‌ ಪವಾರ್ ಪಕ್ಷ ಸೋಲಲಿದೆ. ಉದ್ಧವ್ ಠಾಕ್ರೆ ಮತ್ತು ಪವಾರ್ ಇಬ್ಬರೂ ಮುಳುಗುವ ದೋಣಿಯಲ್ಲಿದ್ದಾರೆ. ನಿಮ್ಮ ರಾಜಕೀಯ ಮಹತ್ವಾಕಾಂಕ್ಷೆಯನ್ನು ಪೂರ್ಣಗೊಳಿಸಬೇಕೆಂದರೆ ನಮ್ಮೊಂದಿಗೆ ಕೈಜೋಡಿಸಿ ಎಂಬುದನ್ನು ಸ್ಪಷ್ಟವಾದ ಪದಗಳಲ್ಲಿ ಮೋದಿ ಹೇಳಿದ್ದಾರೆ. ಆದರೆ ಎನ್‌ಡಿಎ ಸೇರಿ ಎಂದು ಮೋದಿ ಮನವಿ ಮಾಡಿದರು ಎಂಬುದು ಸುಳ್ಳು ಸುದ್ದಿ’ ಎಂದು ಫಡಣವೀಸ್ ಹೇಳಿದ್ದಾರೆ.

‘ಯಾವುದೋ ವಿಷಯವನ್ನು ತಿರುಚುವ ಮೂಲಕ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ವಿರೋಧ ಪಕ್ಷದವರಿಗೆ ಪ್ರಸ್ತಾಪಿಸಲು ಯಾವುದೇ ವಿಷಯಗಳಿಲ್ಲ. ಬಾರಾಮತಿ ಕ್ಷೇತ್ರದಲ್ಲಿ ನಮ್ಮ ಗೆಲುವು ಖಂಡಿತಾ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶರದ್‌ ಪವಾರ್ ಕುಟುಂಬದ ಹಿಡಿತದಲ್ಲಿರುವ ಪುಣೆಯ ಬಾರಾಮತಿ ಕ್ಷೇತ್ರವು ಎನ್‌ಸಿಪಿ ಇಬ್ಭಾಗವಾದ ನಂತರ ಕುಟುಂಬದ ಪ್ರತಿಷ್ಠೆಯ ಕಣವಾಗಿದೆ. ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಅವರು ಎನ್‌ಸಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ಇವರ ವಿರುದ್ಧ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಅವರು ಸ್ಪರ್ಧಿಸಿದ್ದಾರೆ. ಈ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT