ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಅವರು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಎಚ್ಬಿಆರ್ಆರ್ ವಾರ್ಡ್ನ ಫಾರೆಸ್ಟ್ ಪಾರ್ಕ್, ಕಮ್ಮನಹಳ್ಳಿಯಲ್ಲಿ ಹಾಗೂ ಮಾರುತಿ ಸೇವಾನಗರ ವಾರ್ಡ್ನ ನಾಗಯ್ಯನಪಾಳ್ಯದಲ್ಲಿ ಬುಧವಾರ ಚುನಾವಣಾ ಪ್ರಚಾರ ನಡೆಸಿದರು.
ತಮಿಳು ಭಾಷಿಕರು ಹೆಚ್ಚಿರುವ ಈ ಪ್ರದೇಶದಲ್ಲಿ ಪುದುಚೇರಿ ಗೃಹ ಸಚಿವರಾದ ಎ. ನಮಶಿವಾಯಂ, ಮಂಡಲ ಅಧ್ಯಕ್ಷರಾದ ಮುನಿರಾಜ ಕಾರ್ಣಿಕ್, ಎಂ.ಸಿ.ಶ್ರೀನಿವಾಸ್, ಗೋವಿಂದರಾಜ್, ಮಾಜಿ ಕಾರ್ಪೊರೇಟರ್ ಮಂಜುನಾಥ್, ಮೋಹನ್ ಪರ ಮತಯಾಚನೆ ಮಾಡಿದರು.
‘ಪ್ರಧಾನಿ ಮೋದಿಯವರು ಬೆಂಗಳೂರಿಗಾಗಿ ಹೊಂದಿರುವ ‘ವಿಷನ್’ ಅನ್ನು ಕಾರ್ಯರೂಪಕ್ಕೆ ತರುವ ನನ್ನ ಪ್ರಯತ್ನವನ್ನು ಮುಂದುವರಿಸುತ್ತೇನೆ. ಜನಕಲ್ಯಾಣ ಯೋಜನೆಗಳು ಎಲ್ಲ ಫಲಾನುಭವಿಗಳಿಗೆ ದೊರಕುವಂತೆ ಮತ್ತು ಜನರ ಮನೆ ಬಾಗಿಲಿಗೆ ತಲುಪುವಂತೆ ಮಾಡಲು ನಾನು ಶ್ರಮಿಸುತ್ತೇನೆ’ ಎಂದು ಮೋಹನ್ ಭರವಸೆ ನೀಡಿದರು.
‘ಮೋದಿಯವರು ಹತ್ತು ವರ್ಷಗಳಲ್ಲಿ ಮೆಟ್ರೊ ರೈಲು, ಸಾರಿಗೆ ವ್ಯವಸ್ಥೆಯ ಆಧುನೀಕರಣ ಸೇರಿದಂತೆ ವಿಶ್ವ ದರ್ಜೆಯ ಮೂಲಸೌಕರ್ಯ ನಿರ್ಮಾಣ ಮತ್ತು ಆ ಮೂಲಕ ಮಹಿಳೆಯರು ಮತ್ತು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿ ಬೆಂಗಳೂರಿನ ಜನತೆಯ ಜೀವನದ ಗುಣಮಟ್ಟವನ್ನು ಸುಧಾರಿಸಲು ಕೊಡುಗೆ ನೀಡಿದ್ದಾರೆ’ ಎಂದರು.