ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ಭದ್ರ ಕೋಟೆಯಾದ ಕಲಬುರಗಿಯನ್ನು ಮತ್ತೆ ‘ಕೈ’ವಶ ಮಾಡಿಕೊಳ್ಳಲು ಹಾಗೂ ತಂತ್ರಹೂಡಿ ಗೆದ್ದುಕೊಂಡಿದ್ದ ಕ್ಷೇತ್ರದಲ್ಲಿ ಮತ್ತೊಮ್ಮೆ ‘ಕಮಲ’ ಅರಳಿಸಲು ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷದ ಬಿಜೆಪಿ– ಜೆಡಿಎಸ್ ಶಾಸಕರಿಗೆ ತಮ್ಮ– ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಮತಗಳ ‘ಲೀಡ್’ ಗಳಿಸುವ ಅನಿವಾರ್ಯತೆ ಇದೆ.
ಕಲಬುರಗಿ ಲೋಕಸಭಾ ಎಸ್ಸಿ ಮೀಸಲು ಕ್ಷೇತ್ರವು ಯಾದಗಿರಿಯ ಗುರುಮಠಕಲ್ ಸೇರಿ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಎಂಟರಲ್ಲಿ ಬಿಜೆಪಿ ಮತ್ತು ಜೆಡಿಎಸ್ ತಲಾ ಒಂದು ಹಾಗೂ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಮಹಾನಗರ ಪಾಲಿಕೆಯಲ್ಲಿ ‘ಕಮಲ’ದ ಆಳ್ವಿಕೆ ಇದ್ದು, ಬಿಜೆಪಿಯ 12, ಕಾಂಗ್ರೆಸ್ನ 14 ಹಾಗೂ ಜೆಡಿಎಸ್ನ ಇಬ್ಬರು ಸದಸ್ಯರು ಇದ್ದಾರೆ.
ಗ್ರಾಮೀಣ ಭಾಗದಲ್ಲಿ ಮತದಾರ ಒಲವು ತಿಳಿಯುವಂತಹ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಯ ಸದಸ್ಯರಿಲ್ಲ. ಹೀಗಾಗಿ, ‘ಕೈ’ ಮತ್ತು ‘ಕಮಲ’ದ ನಾಯಕರು ವಿಧಾನಸಭಾ ಕ್ಷೇತ್ರಗಳನ್ನು ಆಧರಿಸಿ ಮತ ಗಳಿಕೆಯ ತಂತ್ರಗಳನ್ನು ಹೂಡಬೇಕಿದೆ. ಈ ಹಿಂದಿನ ಲೋಕಸಭಾ ಚುನಾವಣೆಯ ಫಲಿತಾಂಶದ ಮತ ಗಳಿಕೆಯ ‘ಲೀಡ್’ ಎರಡೂ ಪಕ್ಷಗಳಿಗೆ ಏದುಸಿರು ಬಿಡುವಂತೆ ಮಾಡಿದೆ. ‘ಮುನ್ನಡೆ’ಯ ಹಾದಿ ಸುಲಭದಲ್ಲ ಎಂಬುದನ್ನೂ ತೋರಿಸಿದೆ.
2014ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಐದು ವಿಧಾನಸಭಾ ಕ್ಷೇತ್ರಗಳಲ್ಲಿ ‘ಮುನ್ನಡೆ’ ಗಳಿಸಿದ್ದರು. ಉಳಿದ ಮೂರು ಕ್ಷೇತ್ರಗಳಲ್ಲಿ ಈಗಿನ ಕಾಂಗ್ರೆಸ್ ಮುಖಂಡ, ಅಂದಿನ ಬಿಜೆಪಿ ಅಭ್ಯರ್ಥಿಯಾಗಿದ್ದ ರೇವೂನಾಯಕ ಬೆಳಮಗಿ ಅವರು ‘ಲೀಡ್’ ಪಡೆದಿದ್ದರು. ಬಿಜೆಪಿ ಅಭ್ಯರ್ಥಿಯ ಅತ್ಯಧಿಕ ‘ಲೀಡ್’ (4,125) ಮತಗಳು ಅಫಜಲಪುರದಿಂದ ಬಂದಿದ್ದವು. ಜೇವರ್ಗಿಯಲ್ಲಿ 1,028 ಹಾಗೂ ಕಲಬುರಗಿ ಗ್ರಾಮೀಣದಲ್ಲಿ ಅತಿ ಕಡಿಮೆ 84 ಮತಗಳ ‘ಮುನ್ನಡೆ’ಯಷ್ಟೇ ಸಿಕ್ಕಿತ್ತು.
ಖರ್ಗೆ ಅವರಿಗೆ ಕಲಬುರಗಿ ಉತ್ತರ ಕ್ಷೇತ್ರದಿಂದ ಅತ್ಯಧಿಕ 27,503 ಮತಗಳು ಹರಿದು ಹೋಗಿದ್ದವು. ರಾಜಕೀಯ ತಳಹದಿ, ತವರು ಕ್ಷೇತ್ರವಾದ ಗುರುಮಠಕಲ್ ಮತದಾರರು 19,090 ಮತಗಳ ‘ಮುನ್ನಡೆ’ಯ ಕಾಣಿಕೆ ನೀಡಿದ್ದರು. ಕಲಬುರಗಿ ದಕ್ಷಿಣದಲ್ಲಿ ಅತಿ ಕಡಿಮೆ 269 ಮತಗಳ ‘ಲೀಡ್’ ಬಂದಿದ್ದು, ಚಿತ್ತಾಪುರದಲ್ಲಿ ಸಹ 14,339 ಮತಗಳ ‘ಮುನ್ನಡೆ’ ದೊರಕಿತ್ತು. ಆದರೆ, 2019ರಲ್ಲಿ ಚುನಾವಣೆಯ ಫಲಿತಾಂಶ ಸಂಪೂರ್ಣವಾಗಿ ತಲೆಕೆಳಗಾಗಿತ್ತು.
ಕಳೆದ ಬಾರಿ ಕಾಂಗ್ರೆಸ್– ಜೆಡಿಎಸ್ ಮೈತ್ರಿ ಸರ್ಕಾರ ಇತ್ತು. ಕಾಂಗ್ರೆಸ್ ಶಾಸಕರ ಬಲವೂ ಅವರ ಜತೆಗೆ ಇತ್ತು. ಆದರೆ, ಅದ್ಯಾವುದೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಮತಗಳಿಕೆಯ ಮೇಲೆ ಪರಿಣಾಮ ಬೀರಲಿಲ್ಲ. ಅದೇ ಫಲಿತಾಂಶ ಈ ಬಾರಿಯ ಚುನಾವಣೆಯಲ್ಲಿ ಮುಂದುವರಿಯಲಿದೆ ಎಂಬುದು ಬಿಜೆಪಿ ಮುಖಂಡರ ವಿಶ್ವಾಸ.
ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗೆ ಪರಿಸ್ಥಿತಿ ಭಿನ್ನವಾಗಿ ಇರುತ್ತದೆ. ಪಕ್ಷದ ಅಧಿಕಾರದ ಜತೆಗೆ ಹೆಚ್ಚು ಶಾಸಕರು ಇರುವುರಿಂದ ರಣತಂತ್ರ ರೂಪಿಸಿ, ಕ್ಷೇತ್ರದ ಮೇಲೆ ಹಿಡಿತ ಸಾಧಿಸುವುದು ಸುಲಭವಾಗುತ್ತದೆ ಎನ್ನುತ್ತಾರೆ ಕಾಂಗ್ರೆಸ್ ಮುಖಂಡರು.
2024ರ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರಗಳ ಮತದಾರರ ‘ಮುನ್ನಡೆ’ಯ ಬಲವು ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಸಿಗುತ್ತದೆಯೋ? ಅಥವಾ ಕಳೆದ ಬಾರಿಯಂತೆ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರ ಪಾಲಾಗುತ್ತದೆಯೋ ಎಂಬುದು ಚುನಾವಣಾ ಫಲಿತಾಂಶದ ದಿನವಾದ ಜೂನ್ 4ರಂದು ಗೊತ್ತಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.