ರಣತಂತ್ರಗಳು ಹೂಡಿ ‘ಮುನ್ನಡೆ’
2019ರ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರವು ಜಿದ್ದಾಜಿದ್ದಿನ ಕಣವಾಗಿತ್ತು. ಚುನಾವಣೆಯ ಪೂರ್ವ ಆರು ತಿಂಗಳು ಮೊದಲೇ ತಾಲೀಮು ನಡೆಸಿದ್ದ ‘ಕಮಲ’ ನಾಯಕರು ‘ಜಾತಿ ಸಮೀಕರಣ’ ‘ಪುತ್ರ ವ್ಯಾಮೋಹ’ದ ಪ್ರಚಾರ ‘ಖರ್ಗೆ ವಿರೋಧಿ’ ನಾಯಕರನ್ನು ಸೆಳೆದು ರಣತಂತ್ರಗಳನ್ನು ಹೂಡಿದ್ದರು. ‘ಈ ಬಾರಿ ಖರ್ಗೆ ಸೋಲುತ್ತಾರೆ’ ಎಂಬುದನ್ನು ಬಲವಾಗಿ ನಂಬಿಸಿ ಜಾತಿ ಲೆಕ್ಕಾಚಾರ ಹಾಕಿ ಅಂದಿನ ಚಿಂಚೋಳಿಯ ಶಾಸಕರಾಗಿದ್ದ ಒಂದು ಕಾಲದಲ್ಲಿ ಖರ್ಗೆ ಅವರ ಶಿಷ್ಯರಾಗಿದ್ದ ಡಾ.ಉಮೇಶ ಜಾಧವ ಅವರನ್ನೇ ಕರೆತಂದು ಚುನಾವಣೆಯ ಅಖಾಡಕ್ಕೆ ಇಳಿಸಿದರು. ಚುನಾವಣೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಜಾಧವ ಹಾಗೂ ಎರಡರಲ್ಲಿ ಖರ್ಗೆ ಅವರು ‘ಮುನ್ನಡೆ’ ಗಳಿಸಿದ್ದರು. ಖರ್ಗೆ ಅವರಿಗೆ ತಮ್ಮದೇ ಪಕ್ಷದ ಶಾಸಕರಾಗಿದ್ದ ಅಫಜಲಪುರ ಜೇವರ್ಗಿ ಚಿತ್ತಾಪುರ ಹಾಗೂ ಗುರುಮಠಕಲ್ನಲ್ಲಿ (ಮೈತ್ರಿ ಶಾಸಕ) ಮತಗಳ ‘ಮುನ್ನಡೆ’ ಪಡೆಯಲು ಆಗಲಿಲ್ಲ. ಬಿಜೆಪಿ ಹಿಡಿತದಲ್ಲಿದ್ದ ಸೇಡಂನಲ್ಲಿ 5077 ಹಾಗೂ ‘ಕೈ’ ಭದ್ರಕೋಟೆಯಾದ ಕಲಬುರಗಿ ಉತ್ತರದಿಂದ 26392 ಮತಗಳ ‘ಲೀಡ್’ ಪಡೆದಿದ್ದರು. ಜಾಧವ ಅವರು 6 ಕ್ಷೇತ್ರಗಳಲ್ಲಿ ‘ಮುನ್ನಡೆ’ ಗಳಿಸಿ 95452 ಮತಗಳ ಅಂತರದಿಂದ ಸೋಲರಿಯದ ನಾಯಕನಿಗೆ ಮೊದಲ ಬಾರಿ ಸೋಲಿನ ಕಹಿ ಉಣಿಸುವಲ್ಲಿ ಯಶಸ್ವಿಯಾಗಿದ್ದರು.