ಬಿಜೆಪಿಯ ಭದ್ರಕೋಟೆಯಾಗಿರುವ ಲಖನೌ ಕ್ಷೇತ್ರದಲ್ಲಿ ರಾಜನಾಥ ಸಿಂಗ್ ಅವರನ್ನು ಮಣಿಸಲು ತಂತ್ರಗಾರಿಕೆ ರೂಪಿಸಿರುವ ಸಮಾಜವಾದಿ ಪಕ್ಷವು, ಶಾಸಕ ರವಿದಾಸ್ ಮೆಹರೋತ್ರಾ ಅವರನ್ನು ಅಖಾಡಕ್ಕಿಳಿಸಿದೆ. ಇವರು ಲಖನೌ ಸೆಂಟ್ರಲ್ ಕ್ಷೇತ್ರದ ಶಾಸಕರಾಗಿದ್ದು, ಸ್ಥಳೀಯವಾಗಿಯೂ ಹೆಚ್ಚು ಪ್ರಭಾವ ಹೊಂದಿರುವ ನಾಯಕರಾಗಿದ್ದಾರೆ. ಅಖಿಲೇಶ್ ಯಾದವ್ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ರವಿದಾಸ್ ಅವರು ಸಚಿವರಾಗಿದ್ದರು. ‘ಇಂಡಿಯಾ’ ಒಕ್ಕೂಟದ ಜೊತೆಗೆ ಕೈಜೋಡಿಸಿರುವುದರಿಂದ ಕಾಂಗ್ರೆಸ್ ಮತಗಳು ಈ ಬಾರಿ ರವಿದಾಸ್ ಅವರಿಗೆ ಸಿಗಲಿದೆ ಎಂಬುದು ಸಮಾಜವಾದಿ ಪಕ್ಷದ ವಿಶ್ವಾಸ. ಈ ಕಾರಣಕ್ಕಾಗಿಯೇ ಪಕ್ಷದ ಪ್ರಮುಖ ನಾಯಕರಲ್ಲೊಬ್ಬರನ್ನು ಅದೃಷ್ಟ ಪರೀಕ್ಷೆಗಿಳಿಸಿದೆ. ಕಳೆದ ಚುನಾವಣೆಯಲ್ಲಿ ಇಲ್ಲಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ನ ಆಚಾರ್ಯ ಪ್ರಮೋದ್ ಕೃಷ್ಣಂ ಅವರು 1,80,011 ಮತಗಳನ್ನು ಪಡೆದಿದ್ದರು. ಈ ಮತಗಳು ಈ ಸಲ ಎಸ್ಪಿ ಬತ್ತಳಿಕೆಗೆ ಸೇರಲಿವೆ ಎಂಬ ವಿಶ್ವಾಸದಲ್ಲಿದ್ದಾರೆ ಅದರ ನಾಯಕರು.