ಮಂಗಳೂರು: ಟೋಕಿಯೊ– 2020 ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಎಸೆತದ ಮೂಲಕ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾ ಸಾಧನೆ ದೇಶದೆಲ್ಲೆಡೆ ಮನೆ ಮಾತು. ಅವರ ಕುರಿತು ಸಿನಿಮಾ ಮಾಡಲು ನಿರ್ಮಾಪಕ, ದಕ್ಷಿಣ ಕನ್ನಡ ಜಿಲ್ಲೆಯ ಅರುಣ್ ರೈ ತೋಡಾರ್ ಈಗ ಮುಂದಾಗಿದ್ದಾರೆ.
ತುಳುನಾಡಿನ ಸಾಂಸ್ಕೃತಿಕ ಕ್ರೀಡೆಯಾದ ಕಂಬಳದ ಬಗ್ಗೆ ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ‘ಬಿರ್ದ್ದ ಕಂಬುಲ’ ಸಿನಿಮಾ ನಿರ್ಮಾಣ ಮಾಡುತ್ತಿರುವ ಅರುಣ್ ರೈ ತೋಡಾರ್, ಮತ್ತೊಂದು ಸಾಹಸಕ್ಕೆ ಅಣಿಯಾಗಿದ್ದಾರೆ. ಮಂಗಳೂರು ಎ.ಆರ್. ಪ್ರೊಡಕ್ಸನ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನೀರಜ್ ಚೋಪ್ರಾ ಕುರಿತು ಹಿಂದಿಯಲ್ಲಿ ಸಿನಿಮಾವನ್ನು ನಿರ್ಮಿಸಿ ಕನ್ನಡ, ಮಲಯಾಳಂ, ತೆಲುಗು, ತಮಿಳು ಭಾಷೆಗೆ ಡಬ್ ಮಾಡಲು ಚಿಂತನೆ ನಡೆಸಲಾಗಿದೆ. ಆ ಮೂಲಕ ದೇಶದ ಯುವ ಜನತೆಯಲ್ಲಿ ಕ್ರೀಡಾಸ್ಫೂರ್ತಿ ತುಂಬುವುದು ನಮ್ಮ ಉದ್ದೇಶ’ ಎಂದರು.
ಬಿರ್ದ್ದ ಕಂಬುಲು ಸಿನಿಮಾ ಮುಕ್ತಾಯದ ಬಳಿಕ ನೀರಜ್ ಕುರಿತ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ.