ಇತ್ತೀಚೆಗೆ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ನಟ ನಿಖಿಲ್ ಕುಮಾರಸ್ವಾಮಿ, ಇದೀಗ ಮತ್ತೆ ಬಣ್ಣಹಚ್ಚಿದ್ದಾರೆ. ಕೋವಿಡ್–19 ಲಾಕ್ಡೌನ್ ಪರಿಣಾಮವಾಗಿ ಸ್ಥಗಿತಗೊಂಡಿದ್ದ ‘ರೈಡರ್’ ಚಿತ್ರದ ಚಿತ್ರೀಕರಣ ಪುನರಾರಂಭಗೊಂಡಿದೆ.
ಬೆಂಗಳೂರಿನಲ್ಲೇ ಕೊನೆಯ ಹಂತದ ಚಿತ್ರೀಕರಣ ಇತ್ತೀಚೆಗೆ ಆರಂಭವಾಗಿದ್ದು, ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಮೈಸೂರು ಸುತ್ತಮುತ್ತ ಒಂದು ಹಾಡನ್ನು ಶೂಟಿಂಗ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಸ್ಪೋರ್ಟ್ಸ್ ಡ್ರಾಮಾ ಚಿತ್ರ ಇದಾಗಿದ್ದು, ತೆಲುಗಿನ ವಿಜಯ್ ಕುಮಾರ್ ಕೊಂಡ ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ತೆಲುಗಿನ ‘ಒಕ್ಕಾ ಲೈಲಾ ಕೋಸಂ’ ಮತ್ತು ‘ಗುಂಡೆ ಜಾರಿ ಗಲ್ಲಂಥೈಂಡಾ’ ಸಿನಿಮಾಗಳನ್ನು ನಿರ್ದೇಶಿಸಿದ ಖ್ಯಾತಿ ಅವರದ್ದು.
ಚಿತ್ರದಲ್ಲಿ ನಿಖಿಲ್ ಅವರದ್ದು ಬ್ಯಾಸ್ಕೆಟ್ಬಾಲ್ ಆಟಗಾರನ ಪಾತ್ರ. ಕಾಶ್ಮೀರ ಪರದೇಶಿ ಇದರ ನಾಯಕಿ.ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಶ್ರೀಶ ಕೂದುವಳ್ಳಿ ಅವರ ಛಾಯಾಗ್ರಹಣವಿದೆ. ಸಂಪದ, ದತ್ತಣ್ಣ, ಅಚ್ಯುತ್ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ ತಾರಾಗಣದಲ್ಲಿದ್ದಾರೆ. ರಾಜಕೀಯದಿಂದ ಕೊಂಚ ಬಿಡುವು ಪಡೆದಿರುವ ನಿಖಿಲ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮುಂದಿನ ಪ್ರಾಜೆಕ್ಟ್ ಘೋಷಿಸಿದ್ದರು. ಕೆವಿಎನ್ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಹೊಸ ಚಿತ್ರ ತೆರೆಕಾಣಲಿದೆ ಎಂದು ಘೋಷಿಸಿದ್ದರು. ರೈಡರ್ ಬಳಿಕ ಇದರ ಚಿತ್ರೀಕರಣ ಆರಂಭವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.