ಹಿಮನಾಡು ಲಡಾಖ್ನಲ್ಲಿ ರಾಜ್ಯ ಸ್ಥಾನಮಾನ ಮತ್ತು ಸ್ವಾಯತ್ತೆಗಾಗಿ ನಡೆಯುತ್ತಿರುವ ಹೋರಾಟ ಹಿಂಸಾರೂಪ ಪಡೆದುಕೊಂಡಿದೆ. ಬುಧವಾರ ಲೇಹ್ನಲ್ಲಿ ನಡೆದ ಹಿಂಸಾಚಾರವನ್ನು ಇತ್ತೀಚೆಗೆ ನೇಪಾಳದಲ್ಲಿ ನಡೆದ ‘ಝೆನ್ ಜಿ’ ಪೀಳಿಗೆಯ ಹೋರಾಟಕ್ಕೆ ಹೋಲಿಸಲಾಗುತ್ತಿದೆ. 2019ರಲ್ಲಿ ಲಡಾಖ್ ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆಯಾದಾಗ ಸ್ವಾಗತಿಸಿದ್ದ ಅಲ್ಲಿನ ಜನರು ಈಗ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಸೂಕ್ಷ್ಮ ಪರಿಸರ, ಭೂಮಿಯ ಹಕ್ಕುಗಳು, ವೈವಿಧ್ಯಮಯ ಸಂಸ್ಕೃತಿಗಳನ್ನು ಉಳಿಸಲು ಸಾಂವಿಧಾನಿಕ ರಕ್ಷಣೆ ಕೇಳುತ್ತಿದ್ದಾರೆ
ಕಾರ್ಗಿಲ್ ಭಾಗದಲ್ಲಿರುವ ಶಿಯಾ ಮುಸ್ಲಿಮರು ಲೇಹ್ ವ್ಯಾಪ್ತಿಯಲ್ಲಿರುವ ಬೌದ್ಧ ಧರ್ಮೀಯರು ಒಟ್ಟಾಗಿ ಈ ಬೇಡಿಕೆಗಳ ಈಡೇರಿಕೆಗಾಗಿ ಹೋರಾಡುತ್ತಿದ್ದಾರೆ. ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಮತ್ತು ಲೇಹ್ ಅಪೆಕ್ಸ್ ಬಾಡಿ (ಎಲ್ಎಬಿ) ಎಂಬ ಎರಡು ಸಂಘಟನೆಗಳ ಅಡಿಯಲ್ಲಿ ಹೋರಾಟ ನಡೆಯುತ್ತಿದೆ. ಸೋನಮ್ ವಾಂಗ್ಚುಕ್ ಅವರು ಚಳವಳಿಯ ಮುಂಚೂಣಿಯಲ್ಲಿದ್ದಾರೆ