ಹೇಮಾವತಿ ನದಿ ನೀರು ಹಂಚಿಕೆ ವಿವಾದ ತುಮಕೂರು ಮತ್ತು ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಗಳಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿದೆ. ‘ಹಂಚಿಕೆ’ ರಾಜಕೀಯ ಸ್ವರೂಪ ಪಡೆದುಕೊಂಡ ನಂತರ ಹಲವು ಮಗ್ಗಲು ದಾಟಿ ಸಾಗುತ್ತಿದೆ. ನೀರು ಹರಿಸುವ ವಿಚಾರದಲ್ಲಿ ರಾಜಕಾರಣ ನುಸುಳುತ್ತಿದ್ದಂತೆಯೇ ಪ್ರತಿಷ್ಠೆ, ದ್ವೇಷದ ಕಿಚ್ಚು ಹೆಚ್ಚಾಗಿದೆ. ‘ನೀ ಕೊಡೆ, ನಾ ಬಿಡೆ’ ಎಂಬ ಪರಿಸ್ಥಿತಿ ತುಮಕೂರು ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ ನಿರ್ಮಾಣವಾಗಿದೆ. ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದಾದ ವಿಚಾರ ಬೆಟ್ಟದಂತೆ ಎದ್ದು ನಿಂತಿದೆ. ಸಣ್ಣ ಕಿಡಿಯು ಜ್ವಾಲೆಯ ರೂಪ ಪಡೆದುಕೊಂಡಿದ್ದು, ಅಣ್ಣ–ತಮ್ಮಂದಿರಂತೆ ಇದ್ದ ತುಮಕೂರಿನ ಅಕ್ಕಪಕ್ಕದ ತಾಲ್ಲೂಕುಗಳು ಮತ್ತು ಎರಡೂ ಜಿಲ್ಲೆಗಳ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿದೆ
ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಮೂಲಕ ಬೆಂಗಳೂರು ದಕ್ಷಿಣ ಜಿಲ್ಲೆಗೆ ನೀರು ಕೊಂಡೊಯ್ಯಲಾಗುತ್ತಿದೆ ಎಂಬುದು ಸುಳ್ಳು. ಜಿಲ್ಲೆಗೆ ಹೇಮಾವತಿ ನೀರಿನ ಅಗತ್ಯವಿಲ್ಲ. ಕುಣಿಗಲ್ ತಾಲ್ಲೂಕಿಗೆ ಹೇಮಾವತಿಯ 3.37 ಟಿಎಂಸಿ ಅಡಿ ನೀರು ಪಾಲು ಸಿಕ್ಕಿದೆ. ಆದರೂ 10-12 ವರ್ಷಗಳಿಂದ ತಾಲ್ಲೂಕಿಗೆ ತನ್ನ ಪಾಲಿನ ನೀರು ತಲುಪಿಲ್ಲ. ಅಲ್ಲಿನ ಜನರಿಗೆ ಶೇ 92ರಷ್ಟು ನೀರು ನಷ್ಟವಾಗಿದೆ. ಹೀಗಾಗಿ ಯೋಜನೆ ಕೈಗೊಂಡಿದ್ದೇವೆ.–ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ
ಇದು ನಮ್ಮ ನೀರು ನಮ್ಮ ಹಕ್ಕಿನ ವಿಷಯ. ನಮ್ಮ ನೀರಿಗಾಗಿ ಯಾವ ಮಟ್ಟದ ಹೋರಾಟಕ್ಕೂ ಸಿದ್ದ. ನೀರಿಗಾಗಿ ನಡೆಯುವ ಹೋರಾಟದಲ್ಲಿ ತಾಲ್ಲೂಕಿನ ಸಮಸ್ತರೂ ಭಾಗವಹಿಸಬೇಕು–ಎಚ್.ಸಿ. ಬಾಲಕೃಷ್ಣ, ಮಾಗಡಿ ಶಾಸಕ
ವಿವಾದ ಬಗೆಹರಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕೂಡಲೇ ಎರಡೂ ಜಿಲ್ಲೆಗಳ ಜನಪ್ರತಿನಿಧಿಗಳು ರೈತ ಮುಖಂಡರು ಹಾಗೂ ನೀರಾವರಿ ತಜ್ಞರ ಸಭೆ ಕರೆದು ಚರ್ಚಿಸಬೇಕು–ಡಾ.ಸಿ.ಎನ್. ಮಂಜುನಾಥ್, ಸಂಸದ (ಸಿ.ಎಂಗೆ ಬರೆದ ಪತ್ರದಲ್ಲಿ)
ಹಲವು ವರ್ಷಗಳ ಹೋರಾಟದ ಫಲವಾಗಿ ಯೋಜನೆ ಮಂಜೂರಾಗಿ ಕಾಮಗಾರಿಯೂ ಶುರುವಾಗಿದೆ. ಆರಂಭದಲ್ಲಿ ಸುಮ್ಮನಿದ್ದವರು ಈಗ ರಾಜಕೀಯ ಕಾರಣಕ್ಕೆ ವಿರೋಧಿಸುತ್ತಿದ್ದಾರೆ–ಎಚ್.ಎಂ. ರೇವಣ್ಣ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ
ಕುಡಿಯುವುದಕ್ಕಾಗಿ ಹಂಚಿಕೆಯಾಗಿರುವ ನಮ್ಮ ಪಾಲಿನ ನೀರನ್ನು ನಾವು ಪಡೆದೇ ಪಡೆಯುತ್ತೇವೆ. ನಾವು ನಮ್ಮ ಹಕ್ಕಿನ ನೀರು ಕೇಳುತ್ತಿದ್ದೆಯೇ ಹೊರತು ಬೇರೆಯವರ ಹಕ್ಕಿನ ನೀರನ್ನಲ್ಲ.–ಎ.ಮಂಜುನಾಥ್, ಜೆಡಿಎಸ್ ಮಾಜಿ ಶಾಸಕ ಮಾಗಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.