ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ತೊಗರಿ ಬೇಳೆ ಗಗನಮುಖಿ ಬೆಲೆ
ಆಳ–ಅಗಲ: ತೊಗರಿ ಬೇಳೆ ಗಗನಮುಖಿ ಬೆಲೆ
ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಉತ್ಪಾದನೆ; ಕ್ವಿಂಟಲ್‌ಗೆ ₹12,700 ದಾಟಿದ ದರ
Published 10 ಸೆಪ್ಟೆಂಬರ್ 2023, 23:30 IST
Last Updated 10 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಕಲ್ಯಾಣ ಕರ್ನಾಟಕದ ಪ್ರಮುಖ ಬೆಳೆಯಾದ ತೊಗರಿಯ ಬೆಲೆಯು ಈಗ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹12,700ಕ್ಕೆ  ತಲುಪಿದೆ. ಸಾರ್ವಕಾಲಿಕ ಗರಿಷ್ಠ ಬೆಲೆ ಇದು. ಇದರ ನೇರ ಪರಿಣಾಮ ಗ್ರಾಹಕರ ಮೇಲಾಗಿದ್ದು, ಪ್ರತಿ ಕೆ.ಜಿ. ತೊಗರಿ ಬೇಳೆಗೆ ₹160 ಕೊಟ್ಟು ಖರೀದಿಸಬೇಕಾಗಿದೆ. 15 ದಿನಗಳ ಹಿಂದಷ್ಟೇ ರಿಟೇಲ್ ಮಾರುಕಟ್ಟೆಯಲ್ಲಿ ತೊಗರಿ ಬೇಳೆ ದರ ₹120ರ ಆಸುಪಾಸಿನಲ್ಲಿತ್ತು. ಒಮ್ಮೆಲೇ ₹40ರಷ್ಟು ಹೆಚ್ಚಳವಾಗಿದೆ.

ರಾಜ್ಯದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆಗಳ ಪೈಕಿ ಕಲಬುರಗಿ ಅಗ್ರಸ್ಥಾನದಲ್ಲಿದೆ. ರೈತರ ಬಳಿ ಇದ್ದ ತೊಗರಿ ಈಗಾಗಲೇ ಮಾರಾಟವಾಗಿದೆ. ಮಾರುಕಟ್ಟೆಗೆ ಮುಂದಿನ ಬೆಳೆ ಬರುವವರೆಗೂ ತೊಗರಿ ಪೂರೈಕೆ ಆಗುವುದಿಲ್ಲ. ಹಾಗಾಗಿ, ಬೆಲೆ ಏರುಗತಿಯಲ್ಲೇ ಇರಲಿದೆ. ಬೆಲೆಯು ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹15,000ದಿಂದ ₹16 ಸಾವಿರ ತಲುಪಬಹುದು. ಹಾಗಾದರೆ, ತೊಗರಿ ಬೇಳೆ ದರ ಕೆ.ಜಿ.ಗೆ ₹200 ದಾಟಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡುತ್ತಿದ್ದಾರೆ.

ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಮಣ್ಣಿನಲ್ಲಿರುವ ಸುಣ್ಣದ ಕಲ್ಲಿನ ಅಂಶವು ತೊಗರಿಗೆ ಅಗತ್ಯವಾದ ಖನಿಜಾಂಶಗಳನ್ನು ಪೂರೈಸುತ್ತದೆ. ಇದರಿಂದಾಗಿಯೇ ಉಳಿದ ಭಾಗಗಳಲ್ಲಿ ಬೆಳೆದ ತೊಗರಿಗೆ ಹೋಲಿಸಿದರೆ ಕಲಬುರಗಿ ಸೀಮೆಯ ತೊಗರಿ ಬೇಳೆಯು ಗಾತ್ರದಲ್ಲಿ ದಪ್ಪವಾಗಿರುತ್ತದೆ. ಇದನ್ನೇ ಮಾರುಕಟ್ಟೆಯಲ್ಲಿ ಪಟಗಾ ತೊಗರಿ (ಉತ್ಕೃಷ್ಟ ಗುಣಮಟ್ಟ) ಎಂದು ಮಾರಾಟ ಮಾಡಲಾಗುತ್ತದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಕ್ವಿಂಟಲ್‌ಗೆ ಗರಿಷ್ಠ ₹8,273ಕ್ಕೆ ತೊಗರಿ ಮಾರಾಟವಾಗಿತ್ತು. ಇದು ಆವರೆಗಿನ ದಾಖಲೆಯ ಬೆಲೆ ಆಗಿತ್ತು. ನಂತರ ₹7,000ದಿಂದ ₹7,500ಕ್ಕೆ ಮಾರಾಟವಾಗಿತ್ತು. ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ವ್ಯಾಪಕವಾಗಿ ನೆಟೆ ರೋಗ ಕಾಣಿಸಿಕೊಂಡಿದ್ದರಿಂದ ತೊಗರಿ ಇಳುವರಿ ಗಣನೀಯವಾಗಿ ಕುಸಿದಿತ್ತು. ಇದರಿಂದಾಗಿಯೇ ನೆಟೆ ರೋಗಕ್ಕೆ ಪರಿಹಾರ ನೀಡಬೇಕು ಎಂಬ ಕೂಗು ರೈತ ಸಮುದಾಯದಿಂದ ವ್ಯಾಪಕವಾಗಿ ಕೇಳಿಬಂದಿತ್ತು. ಗಾಯದ ಮೇಲೆ ಬರೆ ಎಳೆದಂತೆ ಕಳೆದ ಅಕ್ಟೋಬರ್‌ನಲ್ಲಿ ಸುರಿದ ಮಳೆಯಿಂದಾಗಿ ತೊಗರಿ ಬೆಳೆಯು ಸಂಪೂರ್ಣವಾಗಿ ಜಲಾವೃತವಾಯಿತು. ನೆಟೆ ರೋಗದ ಹೊಡೆತದಿಂದ ಕಂಗಾಲಾಗಿದ್ದ ರೈತರಿಗೆ ಅತಿವೃಷ್ಟಿಯು ಶಾಪವಾಗಿ ಪರಿಣಮಿಸಿತು. ಇದರಿಂದಾಗಿ ಉತ್ಪಾದನೆಯ ಮೇಲೆ ಗಂಭೀರ ಪರಿಣಾಮ ಉಂಟಾಯಿತು.

ಕಳೆದ ವರ್ಷ ಕಲಬುರಗಿ ಜಿಲ್ಲೆಯೊಂದರಲ್ಲೇ 4.87 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿಯನ್ನು ಬೆಳೆಯಲಾಗಿತ್ತು. ನೆಟೆ ರೋಗ ಮತ್ತು ಅತಿವೃಷ್ಟಿಯಿಂದಾಗಿ 2.37 ಲಕ್ಷ ಹೆಕ್ಟೇರ್‌ ತೊಗರಿ ಬೆಳೆ ಸಂಪೂರ್ಣ ನಾಶವಾಯಿತು. 2.5 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದ ಬೆಳೆ ಮಾತ್ರ ರೈತರ ಕೈಗೆ ಸಿಕ್ಕಿತು. ಕೃಷಿ ಇಲಾಖೆಯ ಅಂದಾಜಿನ ಪ್ರಕಾರ 4.87 ಲಕ್ಷ ಹೆಕ್ಟೇರ್‌ನಲ್ಲಿ ಉತ್ತಮ ಇಳುವರಿ ಬಂದಿದ್ದರೆ 50 ಲಕ್ಷ ಕ್ವಿಂಟಲ್ ತೊಗರಿ ಉತ್ಪಾದನೆ ಆಗುತ್ತಿತ್ತು. ಆದರೆ, 33 ಲಕ್ಷ ಕ್ವಿಂಟಲ್ ಮಾತ್ರ ಉತ್ಪಾದನೆಯಾಗಿದೆ. ಇದರ ಪರಿಣಾಮ ಬೆಲೆಯಲ್ಲಿ ವಿಪರೀತ ಏರಿಕೆಯಾಗುತ್ತಿದೆ ಎನ್ನುತ್ತವೆ ಎಪಿಎಂಸಿ ಮೂಲಗಳು.

ತೊಗರಿ ಬೆಳೆ ಬಂದ ಕೂಡಲೇ ಹೆಚ್ಚಿನ ರೈತರು ತಮ್ಮಲ್ಲಿದ್ದ ಬಹುತೇಕ ದಾಸ್ತಾನನ್ನು ಮಾರಾಟ ಮಾಡಿದ್ದಾರೆ. ಹೀಗಾಗಿ, ಹೆಚ್ಚಿನ ದಾಸ್ತಾನೂ ಇಲ್ಲ. ಮೊದಲೆಲ್ಲ ದಿನವೊಂದಕ್ಕೆ ಹತ್ತು ಸಾವಿರ ಕ್ವಿಂಟಲ್‌ಗೂ ಅಧಿಕ ತೊಗರಿ ಆವಕವಾಗುತ್ತಿದ್ದರೆ, ಇತ್ತೀಚಿನ ದಿನಗಳಲ್ಲಿ ಆವಕದ ಪ್ರಮಾಣ ಸರಾಸರಿ 1,500 ಕ್ವಿಂಟಲ್‌ಗೆ ಕುಸಿದಿದೆ. ಮತ್ತೊಂದೆಡೆ ಕಲಬುರಗಿ ನಗರದಲ್ಲಿ 150ಕ್ಕೂ ಅಧಿಕ ದಾಲ್‌ ಮಿಲ್‌ಗಳಿದ್ದು, ಅವುಗಳಿಗೆ ಅಗತ್ಯವಿರುವಷ್ಟು ತೊಗರಿ ಪೂರೈಕೆಯಾಗುತ್ತಿಲ್ಲ. ಒಂದೊಂದು ಮಿಲ್‌ಗೆ ಸರಾಸರಿ 15 ಸಾವಿರ ಕ್ವಿಂಟಲ್‌ಗಳಷ್ಟು ತೊಗರಿ ಅಗತ್ಯವಿದೆ. ಇದೇ ಲೆಕ್ಕಾಚಾರದ ಪ್ರಕಾರದ ಎಲ್ಲ ದಾಲ್‌ ಮಿಲ್‌ಗಳಿಗೆ 22 ಲಕ್ಷ ಕ್ವಿಂಟಲ್‌ಗೂ ಅಧಿಕ ತೊಗರಿ ಅಗತ್ಯವಾಗಿದೆ.

ಆದರೆ, ತೊಗರಿ ಬೆಳೆ ಬಂದ ಬಳಿಕ ಶೇ 80ರಷ್ಟು ರೈತರು ಮಾರಾಟ ಮಾಡಿದ್ದರು. ಪ್ರತಿ ಕೆ.ಜಿಗೆ. ₹120ರಂತೆ ಸಗಟು ಮಾರಾಟಗಾರರಿಂದ ಖರೀದಿಸಿ, ತೊಗರಿ ಬೇಳೆಯನ್ನು ₹160ಕ್ಕೆ ಕೆ.ಜಿ.ಯಂತೆ ಮಾರಾಟ ಮಾಡಿದರೂ ಲಾಭ ಗಿಟ್ಟುವುದಿಲ್ಲ. ಸರ್ಕಾರದ ಸಮರ್ಪಕ ಪ್ರೋತ್ಸಾಹ ಇಲ್ಲದಿರುವುದರಿಂದ ಮಿಲ್‌ಗಳು ಮುಚ್ಚುತ್ತಿದ್ದು, ತೊಗರಿ ಬೆಲೆ ಏರಿಕೆಯಿಂದ ಇನ್ನಷ್ಟು ಸಂಕಷ್ಟ ಎದುರಾಗಿದೆ ಎನ್ನುತ್ತಾರೆ ಗುಲಬರ್ಗಾ ದಾಲ್ ಮಿಲ್ಲರ್ಸ್ ಅಸೋಸಿಯೇಶನ್‌ ಅಧ್ಯಕ್ಷ ಶಿವಶರಣಪ್ಪ ನಿಗ್ಗುಡಗಿ.

‘ಇತ್ತೀಚೆಗೆ ಬರುತ್ತಿರುವ ತೊಗರಿಯ ಗುಣಮಟ್ಟವೂ ಚೆನ್ನಾಗಿಲ್ಲ’ ಎಂದು ಅವರು ಹೇಳುತ್ತಾರೆ.

ರೈತರಿಗೆ ಸಿಗದ ಬೆಲೆ ಏರಿಕೆ ಲಾಭ: ತೊಗರಿ ಬೆಲೆ ಏರಿಕೆ ಕಂಡರೂ ಅದರ ಲಾಭ ಮಾತ್ರ ರೈತರಿಗೆ ಸಿಕ್ಕಿಲ್ಲ ಎಂಬ ಆರೋಪ ರೈತ ಸಂಘಟನೆಗಳದ್ದು. ತೊಗರಿ ಬೆಳೆ ಬಂದ ಕೂಡಲೇ ಬಿತ್ತನೆ ಸಂದರ್ಭದಲ್ಲಿ ಮಾಡಿದ್ದ ಬೀಜ, ಗೊಬ್ಬರದ ಸಾಲವನ್ನು ತೀರಿಸಲು ರೈತರು ಬೆಳೆ ಮಾರಾಟ ಮಾಡಿದ್ದಾರೆ. ಆಗ ಅವರಿಗೆ ಅಬ್ಬಬ್ಬಾ ಎಂದರೆ ಕ್ವಿಂಟಲ್‌ಗೆ ₹7 ಸಾವಿರ ದರ ಸಿಕ್ಕಿದೆ. ಅದನ್ನೇ ಸಂಗ್ರಹ ಮಾಡಿಕೊಂಡಿರುವ ವರ್ತಕರು ಇದೀಗ ಹೆಚ್ಚಿನ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ.

ಮತ್ತೊಂದೆಡೆ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯು (ಮೊದಲಿನ ತೊಗರಿ ಅಭಿವೃದ್ಧಿ ಮಂಡಳಿ) ‘ಭೀಮಾ ಪಲ್ಸ್’ ಹೆಸರಿನಲ್ಲಿ ಕಡಿಮೆ ದರದಲ್ಲಿ ಗ್ರಾಹಕರಿಗೆ ತೊಗರಿ ಬೇಳೆ ಪೂರೈಸುವುದಾಗಿ ಘೋಷಣೆ ಮಾಡಿತ್ತು. ಆದರೆ, ಅದಿನ್ನೂ ಮಾರುಕಟ್ಟೆಗೆ ಬಿಡುಗಡೆಯಾಗಿಲ್ಲ. ಹೀಗಾಗಿ, ವ್ಯಾಪಾರಿಗಳಿಂದಲೇ ದುಬಾರಿ ಬೆಲೆಗೆ ಖರೀದಿ ಮಾಡಬೇಕಿದೆ.

ಕಲಬುರಗಿಯ ಗಂಜ್‌ನ ಎಪಿಎಂಸಿ ಮಾರುಕಟ್ಟೆಯಲ್ಲಿ ಕಾರ್ಮಿಕರು ತೊಗರಿಯನ್ನು ಸ್ವಚ್ಛಗೊಳಿಸುತ್ತಿರುವುದು

ಕಲಬುರಗಿಯ ಗಂಜ್‌ನ ಎಪಿಎಂಸಿ ಮಾರುಕಟ್ಟೆಯಲ್ಲಿ ಕಾರ್ಮಿಕರು ತೊಗರಿಯನ್ನು ಸ್ವಚ್ಛಗೊಳಿಸುತ್ತಿರುವುದು

– ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌

ಕಲಬುರಗಿಯ ಗಂಜ್‌ನ ಎಪಿಎಂಸಿ ಮಾರುಕಟ್ಟೆಯ ಅಡತಿ ಅಂಗಡಿಯಲ್ಲಿ ತೊಗರಿಯ ತೂಕ ಮಾಡುತ್ತಿರುವುದು

ಕಲಬುರಗಿಯ ಗಂಜ್‌ನ ಎಪಿಎಂಸಿ ಮಾರುಕಟ್ಟೆಯ ಅಡತಿ ಅಂಗಡಿಯಲ್ಲಿ ತೊಗರಿಯ ತೂಕ ಮಾಡುತ್ತಿರುವುದು

– ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌

ಗ್ರಾಹಕರ ಸಹಾಯಕ್ಕೆ ಬಾರದ ಮಂಡಳಿ

ರೈತರು ಹಾಗೂ ಗ್ರಾಹಕರ ಮಧ್ಯೆ ಕೊಂಡಿಯಂತೆ ಕೆಲಸ ಮಾಡಬೇಕಿದ್ದ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯು ತೊಗರಿ ಖರೀದಿಸಲಾಗದೇ ಇರುವುದರಿಂದ ರಿಯಾಯಿತಿ ದರದಲ್ಲಿ ತೊಗರಿ ಬೇಳೆ ವಿತರಣೆಯೂ ನಡೆಯುತ್ತಿಲ್ಲ.

ಜನವರಿ, ಫೆಬ್ರುವರಿ ತಿಂಗಳಲ್ಲಿ ಹೊಸದಾಗಿ ತೊಗರಿ ಉತ್ಪನ್ನ ಬಂದಾಗಲೇ ತನ್ನಲ್ಲಿ ನೋಂದಾಯಿಸಿಕೊಂಡ ರೈತರಿಗೆ ಮುಕ್ತ ಮಾರುಕಟ್ಟೆ ಬೆಲೆಗಿಂತ ಪ್ರತಿ ಕ್ವಿಂಟಲ್‌ಗೆ ₹100 ಹೆಚ್ಚುವರಿಯಾಗಿ ಪಾವತಿಸಿ ಖರೀದಿಸುವುದಾಗಿ ಮಂಡಳಿ ತಿಳಿಸಿತ್ತು. ಆದರೆ, ನಿರ್ದಿಷ್ಟ ಗುಣಮಟ್ಟದ ತೊಗರಿಯನ್ನು ಮಾತ್ರ ಖರೀದಿಸುವುದಾಗಿ ಷರತ್ತು ವಿಧಿಸಿತ್ತು. ಇದರಿಂದಾಗಿ ರೈತರು ಮಂಡಳಿಗೆ ತೊಗರಿ ಮಾರಾಟ ಮಾಡಲೇ ಇಲ್ಲ. ಹೀಗಾಗಿ, ತೊಗರಿಯನ್ನು ಬೇಳೆಯಾಗಿ ಸಂಸ್ಕರಿಸಿ ‘ಭೀಮಾ ‍ಪಲ್ಸ್’ ಹೆಸರಿನಲ್ಲಿ ಬಿಡುಗಡೆ ಮಾಡುವ ಯತ್ನ ಕೈಗೂಡಲಿಲ್ಲ ಎನ್ನುತ್ತಾರೆ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಅಂಥೋನಿ ಮಾರಿಯಾ ಇಮ್ಯಾನುವೆಲ್.

₹10 ಸಾವಿರ ಬೆಂಬಲ ಬೆಲೆಗೆ ಬೇಡಿಕೆ

ಕಲಬುರಗಿ ಜಿಲ್ಲೆಯ ತೊಗರಿಯು ಸುಣ್ಣದ ಕಲ್ಲುಗಳಿರುವ ಜಮೀನಿನಲ್ಲಿ ಬೆಳೆಯುವುದರಿಂದ ಹೇರಳವಾಗಿ ‍‍ಪ್ರೊಟೀನ್‌ ಹೊಂದಿರುತ್ತದೆ. ಹೀಗಾಗಿ, ಜಿಲ್ಲೆಯಲ್ಲಿ ತೊಗರಿ ಬೆಳೆಯುವ ಪ್ರದೇಶ ವಿಸ್ತರಣೆಯಾಗಬೇಕಿದ್ದರೆ ಉತ್ತಮ ದರ ಸಿಗಬೇಕು. ಆದ್ದರಿಂದ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ₹10 ಸಾವಿರಕ್ಕೆ ನಿಗದಿಪಡಿಸಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ. ಜೊತೆಗೆ, ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿವೆ. ಆದರೆ, ಬೆಂಬಲ ಬೆಲೆ ನಿಗದಿಪಡಿಸುವ ಕೇಂದ್ರ ಸರ್ಕಾರವು ಈ ಬೇಡಿಕೆಯನ್ನು ಈಡೇರಿಸುವ ಗೋಜಿಗೆ ಹೋಗಿಲ್ಲ.

ಕಳೆದ ವರ್ಷ ಪ್ರತಿ ಕ್ವಿಂಟಲ್‌ ತೊಗರಿಗೆ ಕನಿಷ್ಠ ಬೆಂಬಲ ಬೆಲೆ ₹6,600 ನಿಗದಿಪಡಿಸಲಾಗಿತ್ತು. ತಮಾಷೆಯೆಂದರೆ ಅದಾಗಲೇ ಮುಕ್ತ ಮಾರುಕಟ್ಟೆಯಲ್ಲಿ ತೊಗರಿ ಬೆಳೆ ₹7,000 ಇತ್ತು. ಹೀಗಾಗಿ, ರೈತರು ಕನಿಷ್ಠ ಬೆಂಬಲ ಬೆಲೆಯಡಿ ಮಾರಾಟ ಮಾಡಲು ಮುಂದಾಗಲಿಲ್ಲ.

‘ಸರ್ಕಾರ ಬೆಂಬಲ ಬೆಲೆಯನ್ನು ₹10 ಸಾವಿರ ನಿಗದಿಪಡಿಸಿದರೆ ಇದರಿಂದ ಆಕರ್ಷಿತರಾಗುವ ರೈತರು ಹೆಚ್ಚು ತೊಗರಿ ಬೆಳೆಯಲು ಮುಂದಾಗುತ್ತಾರೆ. ಉತ್ಪಾದನೆ ಹೆಚ್ಚಾದರೆ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆಗೂ ಅಧಿಕ ಪ್ರಮಾಣದಲ್ಲಿ ತೊಗರಿ ಬೇಳೆಯನ್ನು ನೀಡಬಹುದು. ಪಡಿತರದ ಮೂಲಕವೂ ವಿತರಿಸಬಹುದು’ ಎನ್ನುತ್ತಾರೆ ರೈತ ಚಳವಳಿಯಲ್ಲಿ ಗುರುತಿಸಿಕೊಂಡಿರುವ ಆಳಂದ ಶಾಸಕ ಬಿ.ಆರ್. ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT