‘ಮಲ್ಲತ್ತಹಳ್ಳಿಯಿಂದಲೇ ಶ್ವೇತಾ ಅವರು ಕಾರ್ಖಾನೆಯ ಕೆಲಸಕ್ಕೆ ಬರುತ್ತಿದ್ದರು. ಇದು ಸಣ್ಣ ಪ್ರಮಾಣದ ಬಣ್ಣ ತಯಾರಿಸುವ ಕಾರ್ಖಾನೆಯಾಗಿದೆ. ಮಂಗಳವಾರ ಸಂಜೆ ಪೇಂಟ್ ತಯಾರಿಸಲು ಬಳಸುವ ಕಚ್ಚಾ ಸಾಮಗ್ರಿಗಳನ್ನು ಮಿಶ್ರಣ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಯಂತ್ರಕ್ಕೆ ವಿದ್ಯುತ್ ಸಂಪರ್ಕ ಕಡಿತ ಮಾಡಿಕೊಳ್ಳದೆ ಬಣ್ಣವನ್ನು ಹೊರಕ್ಕೆ ತೆಗೆಯಲು ಶ್ವೇತಾ ಮುಂದಾಗಿದ್ದರು. ಆಗ ತಲೆಯ ಕೂದಲು ಯಂತ್ರಕ್ಕೆ ಸಿಲುಕಿಕೊಂಡು ಅವರನ್ನು ಯಂತ್ರದ ಹತ್ತಿರಕ್ಕೆ ಎಳೆದಿದೆ. ಅವರು ಕೂಗಾಟ ನಡೆಸಿದ್ದರೂ ಶಬ್ದದಿಂದ ಯಾರಿಗೂ ಕೇಳಿಸಿರಲಿಲ್ಲ. ಕೆಲ ಸಮಯದ ಬಳಿಕ ಕಾರ್ಮಿಕರು ಬಂದು ನೋಡುವಷ್ಟರಲ್ಲಿ ಅವರು ಮೃತಪಟ್ಟಿದ್ದರು’ ಎಂದು ಪೊಲೀಸರು ಹೇಳಿದರು.