ನವದೆಹಲಿ: ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್, ಹಿಮಾಚಲ ಪ್ರದೇಶ ಸೇರಿದಂತೆ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸ್ಪರ್ಧಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗುರುವಾರ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ 9ನೇ ರಾಷ್ಟ್ರೀಯ ಪರಿಷತ್ ಸಭೆಯಲ್ಲಿ ಈ ಬಗ್ಗೆ ಅವರು ಘೋಷಣೆ ಮಾಡಿದ್ದಾರೆ.
‘ಬೇರೆ ಪಕ್ಷಗಳಿಗೆ ಸರಿಯಾದ ದೃಷ್ಟಿಕೋನವಿಲ್ಲ. ಹಾಗಾಗಿ ಅವುಗಳು ನಡೆದ ವಿಷಯಗಳ ಬಗ್ಗೆ ಹೇಳುತ್ತಾ ಇರುತ್ತವೆ. ಆದರೆ ಆಮ್ ಆದ್ಮಿ ಪಕ್ಷ, ಭವಿಷ್ಯದ ಬಗ್ಗೆ ಮಾತನಾಡುತ್ತದೆ. ಅಲ್ಲದೆ ನಮ್ಮ ಪಕ್ಷವು 21 ಮತ್ತು 22ನೇ ಶತಮಾನದ ದೃಷ್ಟಿಕೋನವನ್ನು ಹೊಂದಿದೆ’ ಎಂದು ಕೇಜ್ರಿವಾಲ್ ಹೇಳಿದರು.
‘ಮುಂದಿನ ಎರಡು ವರ್ಷಗಳಲ್ಲಿ ಎಎಪಿ ಆರು ರಾಜ್ಯಗಳಲ್ಲಿ ಸ್ಪರ್ಧಿಸಲಿದೆ. ದೇಶದಾದ್ಯಂತ ಚುನಾವಣೆಯಲ್ಲಿ ಸ್ಪರ್ಧಿಸಲು, ಪಕ್ಷವನ್ನು ತಳ್ಳಮಟ್ಟದಿಂದ ಬಲಿಷ್ಠಗೊಳಿಸಬೇಕು ಎಂದು ಅವರು ಇದೇ ವೇಳೆ ಪಕ್ಷದ ಸದಸ್ಯರಿಗೆ ಸೂಚಿಸಿದರು.