ಹೈದರಾಬಾದ್: ಹೈದರಾಬಾದ್ನ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಖುದ್ದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಲ್ಲದೇ ಅನೇಕ ಹಿರಿಯ ಮುಖಂಡರು ಇದೇ ಮೊದಲ ಬಾರಿಗೆ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ.
ನಡ್ಡಾ ಸೇರಿದಂತೆ, ಈ ವಾರದಲ್ಲಿ ಪ್ರಚಾರ ಕೈಗೊಳ್ಳಲಿರುವ ಹಿರಿಯ ನಾಯಕರ ಪಟ್ಟಿಯನ್ನು ತೆಲಂಗಾಣದ ಬಿಜೆಪಿ ನಾಯಕರು ಪ್ರಕಟಿಸಿದ್ದಾರೆ. ಹೈದರಾಬಾದ್ ಮಹಾನಗರ ಪಾಲಿಕೆಗೆ ಡಿ.1ರಂದು ಚುನಾವಣೆ ನಡೆಯಲಿದೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಗುರುವಾರ ಪ್ರಚಾರ ಕೈಗೊಂಡರೆ, ಜೆ.ಪಿ.ನಡ್ಡಾ (ಶುಕ್ರವಾರ), ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (ಶನಿವಾರ), ಗೃಹ ಸಚಿವ ಅಮಿತ್ ಶಾ (ಭಾನುವಾರ) ಪ್ರಚಾರ ಕಾರ್ಯಕೈಗೊಳ್ಳಲಿದ್ದಾರೆ.
ಸ್ಥಳೀಯ ಮುಖಂಡರೂ ಆದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಷನ್ ರೆಡ್ಡಿ ಅವರಲ್ಲದೆ, ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಸ್ಮೃತಿ ಇರಾನಿ ಹಾಗೂ ಬಿಜೆಪಿ ಯುವ ಘಟಕದ ಮುಖ್ಯಸ್ಥ ತೇಜಸ್ವಿ ಸೂರ್ಯ ಈಗಾಗಲೇ ನಗರದಾದ್ಯಂತ ಪ್ರಚಾರ ನಡೆಸಿದ್ದಾರೆ. ಪ್ರಮುಖವಾಗಿ ಟಿ.ಆರ್.ಎಸ್ ಮತ್ತು ಎಐಎಎಂಎಂ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿಯ ದೊಡ್ಡ ನಾಯಕರೆಲ್ಲಾ ನಗರಪಾಲಿಕೆ ಚುನಾವಣೆ ಪ್ರಚಾರ ಕಾರ್ಯಕ್ಕೆ ಬರಲು ಕಾರಣವೇನು? ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಮಚಂದರ್ ರಾವ್ ಅವರ ಪ್ರಕಾರ, ಈಚೆಗೆ ದುಬ್ಬಕ ಉಪಚುನಾವಣೆ ಗೆಲುವಿನ ನಂತರ ಬಿಜೆಪಿಯ ಪರವಾಗಿ ಇರುವ ಒಲವನ್ನು ಗೆಲುವಾಗಿ ಪರಿವರ್ತಿಸುವುದು, ವಿಧಾನಸಭೆ ಚುನಾವಣೆಗೆ ವೇದಿಕೆ ರೂಪಿಸುವುದು ಉದ್ದೇಶ.
ಪ್ರತಿಭಟನೆಯ ಹಿನ್ನೆಲೆಯಿಂದಲೇ ಚಂದ್ರಶೇಖರ್ ರಾವ್ ನೇತೃತ್ವದ ಟಿ.ಆರ್.ಎಸ್ 2014ರಲ್ಲಿ ಅಧಿಕಾರಕ್ಕೆ ಬಂದಿತ್ತು. 2019ರಲ್ಲಿ ಕೆಸಿಆರ್ ಪುತ್ರಿ ಕಲ್ಯಕುಂತಲ ಕವಿತಾ ಅವರು ನಿಜಾಮಾಬಾದ್ ಕ್ಷೇತ್ರದಲ್ಲಿ ಸೋತಿದ್ದರು. ಜೊತೆಗೆ ಇತರೆ ಮೂರು ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಿತ್ತು.
ಸಾರ್ವತ್ರಿಕ ಚುನಾವಣೆಯಲ್ಲಿನ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಕಾರಣ ಎಂದು ಹೇಳಲಾಗಿದ್ದರೆ, ದುಬ್ಬಕ ವಿಧಾನಸಭೆ ಕ್ಷೇತ್ರದ ಗೆಲುವಿಗೆ ಆಡಳಿತರೂಢ ಟಿಆರ್.ಎಸ್ ವಿರೋಧಿ ಅಲೆ ಕಾರಣ ಎಂದು ಹೇಳಲಾಗಿದೆ.
2023ರಲ್ಲಿ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆ ಚುನಾವಣೆಗೆ ಮಹಾನಗರಪಾಲಿಕೆಯ ಚುನಾವಣೆಯು ಮೆಟ್ಟಿಲಾಗಲಿದೆ ಎಂದು ಬಿಜೆಪಿ ಅಂದಾಜು ಮಾಡಿದೆ. ಪಾಲಿಕೆಯ ವ್ಯಾಪ್ತಿಯಲ್ಲಿ ವಿಧಾನಸಭೆಯ 24 ಕ್ಷೇತ್ರಗಳಿವೆ.
ಈ ಮಧ್ಯೆ, ಪ್ರಧಾನಿ ಮೋದಿ ಅವರೂ ಚುನಾವಣಾ ಪ್ರಚಾರಕ್ಕೆ ಬರಬಹುದು ಎಂಬ ವರದಿಗಳಿವೆ. ಆದರೆ, ಇದನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಮಚಂದರ್ ನಿರಾಕರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.