ನವದೆಹಲಿ: ಪಾಕಿಸ್ತಾನದಲ್ಲಿ ಮಹಾರಾಜ ರಂಜಿತ್ ಸಿಂಗ್ ಪ್ರತಿಮೆ ಧ್ವಂಸಗೊಳಿಸಿರುವುದನ್ನು ಖಂಡಿಸಿ ದೆಹಲಿಯ ಪಾಕ್ ಹೈಕಮಿಷನರ್ ಕಚೇರಿ ಬಳಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಕ್ಷಮೆ ಕೇಳುವಂತೆ ಆಗ್ರಹಿಸಿ, ಯುವ ಮೋರ್ಚಾ, ಪೂರ್ವಾಂಚಲ್ ಮೋರ್ಚಾ ಮತ್ತು ಬಿಜೆಪಿ ದೆಹಲಿಯ ಸಿಖ್ ಘಟಕದ ಮುಖಂಡರು ಮತ್ತು ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.
‘ಇಮ್ರಾನ್ ಖಾನ್ ಅವರು ಹಿಂದೂ ಮತ್ತು ಸಿಖ್ಖರ ಮೇಲಿನ ಕಿರುಕುಳ ನಿಲ್ಲಿಸುವ ಜೊತೆಗೆ ದೇಗುಲ ಮತ್ತು ವಿಗ್ರಹಗಳನ್ನು ಅಪವಿತ್ರಗೊಳಿಸುವುದಿಲ್ಲ ಎಂಬ ಭರವಸೆಯನ್ನು ನೀಡಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್ ಕೋಟೆಯಲ್ಲಿದ್ದ ಸಿಖ್ ದೊರೆ ಮಹಾರಾಜ ರಂಜಿತ್ ಸಿಂಗ್ ಅವರ ಒಂಬತ್ತು ಅಡಿ ಎತ್ತರದ ಪ್ರತಿಮೆಯನ್ನು ಮಂಗಳವಾರ ಧ್ವಂಸಗೊಳಿಸಲಾಗಿತ್ತು.