ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಭಮೇಳವನ್ನು ನಿಲ್ಲಿಸುವ ಸಂಬಂಧ ವಿವಿಧ ಹಿಂದೂ ಅಖಾಡಗಳ ಮಧ್ಯೆ ಭಿನ್ನಾಭಿಪ್ರಾಯ

Last Updated 16 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳವನ್ನು ನಿಲ್ಲಿಸುವ ಸಂಬಂಧ ವಿವಿಧ ಹಿಂದೂ ಅಖಾಡಗಳ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ. ಕೋವಿಡ್‌ ವಿಪರೀತ ಮಟ್ಟದಲ್ಲಿ ಏರಿಕೆ ಆಗುತ್ತಿರುವ ಕಾರಣ, ಕುಂಭಮೇಳದಿಂದ ಏಪ್ರಿಲ್ 17ರಂದು ನಿರ್ಗಮಿಸುವುದಾಗಿ ನಿರಂಜನಿ ಅಖಾಡ ಗುರುವಾರ ಘೋಷಿಸಿತ್ತು. ಕೆಲವು ಅಖಾಡಗಳು ಇದಕ್ಕೆ ಬೆಂಬಲ ಸೂಚಿಸಿವೆ. ಕೆಲವು ಅಖಾಡಗಳು ವಿರೋಧ ವ್ಯಕ್ತಪಡಿಸಿವೆ.

ನಿರಂಜನಿ ಅಖಾಡದ ನಿರ್ಧಾರವನ್ನು ಶ್ರೀ ಪಂಚಾಯತಿ ಅಖಾಡ ಮತ್ತು ಆನಂದ್ ಅಖಾಡಗಳು ಬೆಂಬಲಿಸಿವೆ. ಏಪ್ರಿಲ್‌ 17ಕ್ಕೆ ಕುಂಭಮೇಳ ಮುಗಿಸಲು ಈ ಮೂರೂ ಅಖಾಡಗಳು ನಿರ್ಧರಿಸಿವೆ. ಆದರೆ, ‘ನಿರಂಜನಿ ಅಖಾಡವು ಈ ನಿರ್ಧಾರವನ್ನು ಏಕಪಕ್ಷೀಯವಾಗಿ ತೆಗೆದುಕೊಂಡಿದೆ’ ಎಂದು ನಿರ್ವಾನಿ ಅಖಾಡವು ಆಕ್ಷೇಪ ವ್ಯಕ್ತಪಡಿಸಿದೆ. ನಿರ್ಮೋಹಿ ಅಖಾಡ ಮತ್ತು ದಿಗಂಬರ ಅಖಾಡವು ಈ ಆಕ್ಷೇಪವನ್ನು ಬೆಂಬಲಿಸಿವೆ.

‘ಕುಂಭಮೇಳ ಯಾವಾಗ ಆರಂಭವಾಗಬೇಕು ಮತ್ತು ಯಾವಾಗ ಮುಕ್ತಾಯವಾಗಬೇಕು ಎಂಬುದನ್ನು ಗ್ರಹಗತಿಗಳು ನಿರ್ಧರಿಸುತ್ತವೆ. ಪೂರ್ವನಿಗದಿಯಂತೆ ಏಪ್ರಿಲ್ 27ರಂದೇ ಕುಂಭಮೇಳ ಮುಕ್ತಾಯವಾಗಲಿದೆ’ ಎಂದು ನಿರ್ವಾನಿ ಅಖಾಡವು ಘೋಷಿಸಿದೆ.

ಸಂತ ಸಾವು: ಕುಂಭಮೇಳದಲ್ಲಿ ಭಾಗವಹಿಸಿದ್ದ ಅಖಾಡವೊಂದರ ಮುಖ್ಯಸ್ಥ ಮಹಾಮಂಡಲೇಶ್ವರ ಕಪಿಲ ದೇವ ದಾಸ್ ಅವರು ಕೋವಿಡ್‌ನಿಂದ ಗುರುವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರನ್ನು ಮಂಗಳವಾರವಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಜತೆಗಾರರಲ್ಲಿ ಹಲವರಿಗೆ ಸೋಂಕು ತಗುಲಿದೆ.

ಕುಂಭಮೇಳದಲ್ಲಿ ಈವರೆಗೆ 29 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು, ಈ ಮೇಳವು ‘ಸೂಪರ್ ಸ್ಪ್ರೆಡರ್’ (ವ್ಯಾಪಕವಾಗಿ ಸೋಂಕು ಹರಡಲು ಕಾರಣ) ಆಗುವ ಅಪಾಯವಿದೆ. ಇಲ್ಲಿಂದ ಹಿಂತಿರುಗಿದವರೆಲ್ಲರೂ ತಮ್ಮ ಊರು, ಪಟ್ಟಣಗಳಿಗೆ ಸೋಂಕು ಹರಡಿಸುತ್ತಾರೆ ಎಂದು ಕೆಲವು ಅಖಾಡಗಳು ಆತಂಕ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT