ಪಣಜಿ: ಐತಿಹಾಸಿಕ ಅಗುವಾಡ ಜೈಲನ್ನು ಪ್ರವಾಸಿತಾಣವಾಗಿ ನವೀಕರಿಸಲಾಗುವುದು. ಇದರ ಅಭಿವೃದ್ಧಿ ಕಾರ್ಯ ಮಾರ್ಚ್ನಲ್ಲಿ ಪೂರ್ಣಗೊಳ್ಳಲಿದ್ದು, ಬಳಿಕ ಇದನ್ನು ಪ್ರವಾಸಿಗರಿಗಾಗಿ ತೆರೆಯಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದರು.
17ನೇ ಶತಮಾನದಅಗುವಾಡ ಜೈಲಿನ ನವೀಕರಣಕ್ಕೆ ಸಂಬಂಧಿಸಿದಂತೆ ನಡೆದ ಸಭೆಯ ಬಳಿ ಮಾತನಾಡಿದ ಅವರು, ‘ಈ ಯೋಜನೆಯ ಶೇ 90 ರಷ್ಟು ಕೆಲಸಗಳು ಪೂರ್ಣಗೊಂಡಿವೆ’ ಎಂದರು.
‘ಜೈಲಿನ ಎರಡು ಪ್ರಮುಖ ಕೋಣೆಗಳನ್ನು ಸ್ವಾತಂತ್ರ್ಯ ಹೋರಾಟಗಾರ ಟಿ.ಬಿ.ಕುನ್ಹಾ ಮತ್ತು ರಾಮ್ ಮನೋಹರ್ ಲೋಹಿಯಾ ಅವರಿಗೆ ಸಮರ್ಪಿಸಲಾಗುವುದು’ ಎಂದು ಅವರು ತಿಳಿಸಿದರು.
‘ಅಗುವಾಡ ಕೋಟೆಯನ್ನು ರಾಜ್ಯದ ವಿಮೋಚನಾ ಹೋರಾಟದ ಕುರಿತಾದ ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದ ‘ಸ್ವದೇಶ ದರ್ಶನ ಯೋಜನೆ’ಯಡಿ ಅಂದಾಜು ₹22 ಕೋಟಿ ವೆಚ್ಚದಲ್ಲಿ ಅಗುವಾಡ ಕೋಟೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಜಿಟಿಡಿಸಿ) ತಿಳಿಸಿದೆ.