ಗುವಾಹಟಿ: ಮೂರು ಜಿಲ್ಲೆಗಳಲ್ಲಿ ಹರಡಿರುವ ಸುಮಾರು 1,800 ಹೆಕ್ಟೇರ್ ಭೂಮಿಯನ್ನು ನೆರೆಯ ಮಿಜೋರಾಂನ ಜನರು ಅತಿಕ್ರಮಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೋಮವಾರ ಹೇಳಿದ್ದಾರೆ.
ಮಿಜೋರಾಂನ ಜನರು ಅಸ್ಸಾಂ ಕ್ಯಾಚರ್ ಜಿಲ್ಲೆಯಲ್ಲಿ ಭೂಮಿಯನ್ನು ಅತಿಕ್ರಮಣ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಈಶಾನ್ಯ ರಾಜ್ಯಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಅಸ್ಸಾಂ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.
ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಶಾಸಕ ಸುಜಮ್ ಉದ್ದೀನ್ ಲಸ್ಕರ್ ಹೇಳಿಕೆಗೆ ನೀಡಿರುವ ಲಿಖಿತ ಉತ್ತರದಲ್ಲಿ, ಬರಾಕ್ ಕಣಿವೆಯಲ್ಲಿ ಒಟ್ಟು 1,777,58 ಹೆಕ್ಟೇರ್ ಭೂಮಿಯನ್ನು ಮಿಜೋರಾಂನ ಅತಿಕ್ರಮಣಕಾರರು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಪೈಕಿ ಹೈಲಾಕಂಡಿ ಜಿಲ್ಲೆಯಲ್ಲಿ 1,000 ಹೆಕ್ಟೇರ್ ಪ್ರದೇಶವನ್ನು ಅತಿಕ್ರಮಿಸಲಾಗಿದೆ. ಕ್ಯಾಚರ್ನಲ್ಲಿ 400 ಹಾಗೂ ಕರೀಮ್ಗಂಜ್ನಲ್ಲಿ 377.58 ಹೆಕ್ಟೇರ್ ಅತಿಕ್ರಮಿಸಲಾಗಿದೆ ಎಂದು ಹೇಳಿದ್ದಾರೆ.
ಅಸ್ಸಾಂನ ಜನರನ್ನು ರಕ್ಷಿಸಲು ಹಾಗೂ ಅತಿಕ್ರಮಣ ತಡೆಯಲು ಪೊಲೀಸರು ಗಸ್ತು ವ್ಯವಸ್ಥೆ ಮತ್ತು ತಡೆಗಟ್ಟುವ ಕ್ರಮ ಕೈಗೊಳ್ಳಲಾಗಿದೆ.
ಮಿಜೋರಾಂ ಅಸ್ಸಾಂನೊಂದಿಗೆ ಸುಮಾರು 164.6 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿದೆ.