ನವದೆಹಲಿ: ಕೃಷಿ ಮಸೂದೆಗಳನ್ನು ವಿರೋಧಿಸುತ್ತಿರುವವರು ರೈತರಿಗೆ ಅವಮಾನ ಮಾಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ಇಂಡಿಯಾ ಗೇಟ್ ಸಮೀಪ ಪಂಜಾಬ್ ಯುವ ಕಾಂಗ್ರೆಸ್ ಕಾರ್ಯಕರ್ತರು ಟ್ಯಾಕ್ಟರ್ ಸುಟ್ಟು ಪ್ರತಿಭಟನೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.
'ರೈತರು ಪೂಜಿಸುವ ಯಂತ್ರಗಳು ಹಾಗೂ ಸಲಕರಣೆಗಳಿಗೆ ಬೆಂಕಿ ಹಚ್ಚುವ ಮೂಲಕ ಅವರು ರೈತರನ್ನು ಅವಮಾನಿಸಿದ್ದಾರೆ. ಹಲವು ವರ್ಷಗಳು ಕನಿಷ್ಠ ಬೆಂಬಲ ಬೆಲೆ ನಿಗದಿ (ಎಂಎಸ್ಪಿ) ಮಾಡುವುದಾಗಿ ಅವರು ಹೇಳುತ್ತಿದ್ದರು. ಆದರೆ, ಯಾವತ್ತಿಗೂ ಅದನ್ನು ಜಾರಿಗೆ ತರಲಿಲ್ಲ. ನಮ್ಮ ಸರ್ಕಾರವು ಸ್ವಾಮಿನಾಥನ್ ಸಮಿತಿಯ ಶಿಫಾರಸ್ಸು ಆಧಾರಿಸಿ ಎಂಎಸ್ಪಿ ಜಾರಿ ಮಾಡಿತು.' ಎಂದು ಪ್ರಧಾನಿ ಹೇಳಿದ್ದಾರೆ.
ಉತ್ತರಾಖಂಡದ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ವಿಡಿಯೊ ಕಾನ್ಫರೆನ್ಸ್ನಲ್ಲಿ ಅವರು ಮಾತನಾಡಿದರು.
'ರೈತರು, ಕಾರ್ಮಿಕರು ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸುಧಾರಣಾ ಕ್ರಮಗಳನ್ನು ಇತ್ತೀಚಿನ ಸಂಸತ್ ಅಧಿವೇಶನದಲ್ಲಿ ತರಲಾಗಿದೆ. ಅವುಗಳು ಕಾರ್ಮಿಕರು, ಯುವಕರು, ಮಹಿಳೆ ಹಾಗೂ ದೇಶದ ರೈತರಿಗೆ ಬಲ ನೀಡಲಿವೆ. ಆದರೆ, ಕೆಲವರು ಕೇವಲ ವಿರೋಧಿಸುವ ಸಲುವಾಗಿಯೇ ಅದನ್ನು ಮಾಡುತ್ತಿದ್ದಾರೆ' ಎಂದಿದ್ದಾರೆ.
Today these people are misleading farmers over MSP. There will not only be MSP in the country but also the freedom for farmers to sell their produce anywhere. But some people are unable to tolerate this freedom. Their one more medium to earn black income is finished: PM Modi https://t.co/bGQXerSvBX
— ANI (@ANI) September 29, 2020
ಇಂಡಿಯಾ ಗೇಟ್ ಸಮೀಪದಲ್ಲಿ ಸೋಮವಾರ ಬೆಳಿಗ್ಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಟ್ಯಾಕ್ಟರ್ಗೆ ಬೆಂಕಿ ಹಚ್ಚಿ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟಿಸಿದ್ದರು. ಬೆಂಕಿ ಹಚ್ಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮೂಲದ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ.
‘ನಮ್ಮ ಭದ್ರತಾ ಪಡೆಗಳ ಉನ್ನತಿಗಾಗಿ ಹಲವು ವರ್ಷಗಳ ವರೆಗೂ ಅವರು ಏನನ್ನೂ ಮಾಡಲಿಲ್ಲ. ವಾಯುಪಡೆಯು ರಫೇಲ್ ಯುದ್ಧ ವಿಮಾನಕ್ಕಾಗಿ ಕೇಳುತ್ತಲೇ ಇದ್ದರೂ, ಅವರು ಅದನ್ನು ಕೇಳಿಸಿಕೊಳ್ಳಲಿಲ್ಲ. ಆದರೆ, ನಮ್ಮ ಸರ್ಕಾರ ಫ್ರಾನ್ಸ್ನೊಂದಿಗೆ ರಫೇಲ್ಗಾಗಿ ಒಪ್ಪಂದ ಮಾಡಿಕೊಳ್ಳುತ್ತಿದ್ದಂತೆ ಅವರಿಗೆ ಸಮಸ್ಯೆ ಎದುರಾಯಿತು' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಕೇಂದ್ರದ ಮೂರೂ ಕೃಷಿ ಮಸೂದೆಗಳನ್ನು ವಿರೋಧಿಸುತ್ತಿದ್ದು, 'ಅವು ರೈತ ವಿರೋಧಿ' ಹಾಗೂ ಕೃಷಿ ವಲಯವನ್ನೇ ಹಾಳುಗೆಡವುತ್ತವೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರ ಸರ್ಕಾರದ ಪ್ರಕಾರ, ಈ ಮಸೂದೆಗಳು ರೈತರಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಲಿದ್ದು, ರೈತರು ಉತ್ತಮ ಬೆಲೆಗೆ ಅವರಿಗೆ ಇಷ್ಟ ಬಂದ ಕಡೆ ಮಾರಾಟ ಮಾಡಲು ಅನುವು ಮಾಡಿಕೊಡಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.