ಸೆರಂ ಮತ್ತು ಭಾರತ್ ಬಯೋಟೆಕ್ ಲಸಿಕೆ ತುರ್ತು ಬಳಕೆಗೆ ಅನುಮೋದನೆ

ನವದೆಹಲಿ: ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ನ ಲಸಿಕೆಗಳನ್ನು ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಅನುಮೋದನೆ ನೀಡಿದೆ.
ಇದರೊಂದಿಗೆ ದೇಶದಲ್ಲಿ ಕೋವಿಡ್-19 ಲಸಿಕೆ ಕನಸು ನನಸಾಗಿದ್ದು, ಎರಡು ಪ್ರಮುಖ ಲಸಿಕೆಗಳ ಬಳಕೆಗೆ ಒಪ್ಪಿಗೆ ದೊರಕಿದೆ.
ಈ ಬಗ್ಗೆ ಭಾನುವಾರ ಬೆಳಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ ಡಿಸಿಜಿಐನ ವಿ.ಜಿ. ಸೋಮಾನಿ, ಸುರಕ್ಷತೆಯ ಬಗ್ಗೆ ಅಲ್ಪಸ್ವಲ್ಪ ಅನುಮಾನ ಇದ್ದಿದ್ದರೆ ನಾವಿದನ್ನು ಅನುಮೋದಿಸುವುದಿಲ್ಲ. ಲಸಿಕೆಗಳು ಶೇಕಡಾ 100ರಷ್ಟು ಸುರಕ್ಷಿತವಾಗಿದೆ. ಜ್ವರ ಹಾಗೂ ಅಲರ್ಜಿಯಂತಹ ಕೆಲವು ಅಡ್ಡ ಪರಿಣಾಮಗಳು ಪ್ರತಿ ಲಸಿಕೆಯಲ್ಲೂ ಸಾಮಾನ್ಯವಾಗಿದೆ. ಜನರು ಶಕ್ತಿಹೀನರಾಗುತ್ತಾರೆ ಎಂಬುದು ಅಸಂಬದ್ಧ ಎಂದು ಹೇಳಿದರು.
ಸಮರ್ಪಕ ಪರೀಕ್ಷೆಯ ಬಳಿಕ ತಜ್ಞರ ಸಮಿತಿಯ ಶಿಫಾರಸುಗಳನ್ನು ಸ್ವೀಕರಿಸಲು ಸಿಆರ್ಎಸ್ಸಿಒ ನಿರ್ಧರಿಸಿದೆ. ಅದರ ಪ್ರಕಾರ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಸೆರಂ ಮತ್ತು ಭಾರತ ಬಯೋಟೆಕ್ ಲಸಿಕೆಗಳಿಗೆ ಅನುಮೋದನೆ ನೀಡಲಾಗುತ್ತಿದೆ ಎಂದು ಹೇಳಿದರು.
ಅದೇ ರೀತಿ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕಾಗಿ ಕ್ಯಾಡಿಲಾ ಹೆಲ್ತ್ಕೇರ್ಗೆ ಅನುಮತಿ ನೀಡಲಾಗಿದೆ ಎಂದು ಡಿಸಿಜಿಐ ತಿಳಿಸಿದೆ.
ಇದನ್ನೂ ಓದಿ: ಕೋವಿಡ್ ಲಸಿಕಾ ಅಭಿಯಾನ: 75 ಲಕ್ಷ ನೋಂದಣಿ
ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಸಂಸ್ಥೆಗಳು 'ಕೋವಿಶೀಲ್ಡ್' ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಇನ್ನೊಂದೆಡೆ 'ಕೊವ್ಯಾಕ್ಸಿನ್' ಲಸಿಕೆಯನ್ನು ಭಾರತೀಯ ವೈದ್ಯಕೀಯ ಪರಿಷತ್ (ಐಸಿಎಂಆರ್) ಸಹಯೋಗದಲ್ಲಿ ಭಾರತ್ ಬಯೋಟೆಕ್ ದೇಶೀಯವಾಗಿ ಅಭಿವೃದ್ಧಿಸಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.