ಮುಂಬೈ: ಗಡಿ ವಿವಾದಕ್ಕೆ ಸಂಬಂಧಿಸಿ ರಾಜಕೀಯ ತಿಕ್ಕಾಟ ಹೆಚ್ಚುತ್ತಿರುವಂತೆಯೇ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ವಿರುದ್ಧ ಶಿವಸೇನಾ (ಉದ್ಧವ್ ಬಾಳಾ ಠಾಕ್ರೆ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ.
‘ರಾಜ್ಯದ ಕೆಲ ಗ್ರಾಮಗಳು ಕರ್ನಾಟಕದೊಂದಿಗೆ ವಿಲೀನಗೊಳ್ಳಲು ಬಯಸಿದ್ದವು ಎಂದು ಹೇಳಿರುವ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಮಾತನಾಡಲು ಮುಖ್ಯಮಂತ್ರಿ ಏಕನಾಥ ಶಿಂದೆಗೆ ಧೈರ್ಯ ಇಲ್ಲ’ ಎಂದು ಅವರು ಕುಟುಕಿದ್ದಾರೆ.
‘ಮಹಾರಾಷ್ಟ್ರದ ಕೆಲ ಗ್ರಾಮಗಳು ರಾಜ್ಯಕ್ಕೆ ಸೇರಬೇಕು ಎಂಬುದಾಗಿ ಕರ್ನಾಟಕ ಮುಖ್ಯಮಂತ್ರಿ ಸುಲಭವಾಗಿ ಹೇಳಿಕೆ ನೀಡುತ್ತಿರುವುದರರಿಂದಲೇ ನಾವು ಅವರ ವಿರುದ್ಧ ಧ್ವನಿ ಎತ್ತಲು ಧೈರ್ಯ ಕಳೆದುಕೊಂಡಿದ್ದೇವೆಯೇ’ ಎಂದು ಪ್ರಶ್ನಿಸುವ ಮೂಲಕ ಉದ್ಧವ್ ಅವರು ಶಿಂದೆ ವಿರುದ್ಧ ಹರಿಹಾಯ್ದಿದ್ದಾರೆ.
‘ಈ ವಿಷಯಕ್ಕೆ ಸಂಬಂಧಿಸಿ ಕರ್ನಾಟಕ ಮುಖ್ಯಮಂತ್ರಿಗೆ ದೆಹಲಿ ನಾಯಕರ ಆಶೀರ್ವಾದ ಇದೆಯೇ?. ಕೇಂದ್ರ ಸರ್ಕಾರಕ್ಕೂ ಇದೇ ಬೇಕಾಗಿದೆಯೇ? ಎಂದು ಅವರು ಕೇಳಿದ್ದಾರೆ.
‘ಗಮನ ಬೇರೆಡೆ ಸೆಳೆಯುವ ತಂತ್ರ’: ‘ಛತ್ರಪತಿ ಶಿವಾಜಿ ಮಹಾರಾಜ್ಗೆ ರಾಜ್ಯಪಾಲ ಭಗತ್ಸಿಂಗ್ ಕೋಶ್ಯಾರಿ ಅವರು ಅವಮಾನಿಸಿದ ವಿಷಯದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಮಹಾರಾಷ್ಟ್ರ–ಕರ್ನಾಟಕ ಗಡಿ ವಿವಾದವನ್ನು ಮತ್ತೆ ಮುನ್ನೆಲೆ ತರಲಾಗಿದೆ’ ಎಂದು ಶಿವಸೇನಾ (ಉದ್ಧವ್ ಠಾಕ್ರೆ ಬಣ) ಮುಖಂಡ ಸಂಜಯ್ ರಾವುತ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಂದು ವೇಳೆ ಗುಜರಾತಿಗಳು ಹಾಗೂ ಮಾರವಾಡಿಗಳು ನಗರವನ್ನು ತೊರೆದರೆ ಮುಂಬೈ ಈ ದೇಶದ ಆರ್ಥಿಕ ರಾಜಧಾನಿ ಆಗಿ ಉಳಿಯುವುದಿಲ್ಲ ಎಂದು ಹೇಳುವ ಮೂಲಕ ಈ ಹಿಂದೆಯೂ ರಾಜ್ಯಪಾಲ ಕೋಶ್ಯಾರಿ ಅವರು ಮರಾಠಿ ಭಾಷಿಕರನ್ನು ಅವಮಾನಿಸಿದ್ದರು’ ಎಂದರು.