ಶುಕ್ರವಾರ, ಮಾರ್ಚ್ 24, 2023
24 °C

ಕಾಶ್ಮೀರದ ಹತ್ಯೆಗಳಿಗೆ ‘ಕಾಶ್ಮೀರ್‌ ಫೈಲ್ಸ್‌’ ಚಿತ್ರ ಕಾರಣ: ಬಿಹಾರ ಮಾಜಿ ಸಿಎಂ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಪಟ್ನಾ: 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಕಾರಣದಿಂದಾಗಿ ಕಾಶ್ಮೀರದಲ್ಲಿ ಉದ್ದೇಶಪೂರ್ವಕ ಹತ್ಯೆಗಳು ನಡೆಯುತ್ತಿವೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್‌ ರಾಮ್‌ ಮಾಂಜಿ ಹೇಳಿದ್ದಾರೆ.

‘ಚಿತ್ರಕ್ಕೆ ಬಿಹಾರದಲ್ಲಿಯೂ ತೆರಿಗೆ ವಿನಾಯಿತಿ ನೀಡಬೇಕು ಎಂದು ಬಿಜೆಪಿಯು ನಿತೀಶ್ ಕುಮಾರ್ ಸರ್ಕಾರವನ್ನು ಒತ್ತಾಯಿಸಿತ್ತು. ಹಲವು ಸಚಿವರು ಮತ್ತು ಶಾಸಕರು ಸರ್ಕಾರದ ದುಡ್ಡಿನಲ್ಲಿ ಸಿನಿಮಾ ವೀಕ್ಷಿಸಲು ಥಿಯೇಟರ್‌ಗೆ ಹೋಗಿದ್ದರು. ನಾಗರಿಕರಲ್ಲಿ ಭಯ ಹುಟ್ಟಿಸಲು ಉಗ್ರಗಾಮಿಗಳೇ ಈ ಚಿತ್ರ ನಿರ್ಮಾಣ ಮಾಡಿರಬಹುದು ಎಂದು ನಾನು ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ಕೇಂದ್ರ ಸರ್ಕಾರವು ಸಿನಿಮಾ ನಿರ್ಮಾಪಕರ ಉಗ್ರ ನಂಟಿನ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮಾಂಜಿ ಆಗ್ರಹಿಸಿದರು.

‘ದಿ ಕಾಶ್ಮೀರ್‌ ಫೈಲ್ಸ್’ ತಯಾರಿಕೆಯ ಉದ್ದೇಶವು 'ಕಾಶ್ಮೀರಿ ಬ್ರಾಹ್ಮಣ'ರಲ್ಲಿ (ಪಂಡಿತರು) ಭಯವನ್ನು ಉಂಟುಮಾಡುವುದಾಗಿದೆ. ಹೀಗೆ ಮಾಡಿದರೆ ಅವರು ಮರಳಿ ಕಣಿವೆಗೆ ಹಿಂತಿರುಗುವುದಿಲ್ಲ. ಕಣಿವೆಯಲ್ಲಿ ವಾಸಿಸುವ ಹಿಂದೂಗಳು ಸಹ ಭೀತಿಯಲ್ಲೇ ಬದುಕಬೇಕಾಗುತ್ತದೆ. ಬಿಹಾರಿ ಕಾರ್ಮಿಕರ ಉದ್ದೇಶಿತ ಹತ್ಯೆಗಳೂ ಕೂಡ ಇದೇ ಸಂಚಿನ ಭಾಗವಾಗಿದೆ. ನನ್ನ ಮಾತು ನಿಜವಾಗಿದೆ’ ಎಂದು ಅವರು ಹೇಳಿದರು.

‘ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕಿದ್ದರೆ, ಅದನ್ನು ಬಿಹಾರಿಗಳಿಗೆ ಹಸ್ತಾಂತರಿಸಬೇಕು. ಅಲ್ಲಿ ನಾವು ಶಾಂತಿಯನ್ನು ಪುನಃಸ್ಥಾಪಿಸುತ್ತೇವೆ’ ಎಂದು ಮಾಂಝಿ ಹೇಳಿದರು!

ಗುರುವಾರ ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಬಿಹಾರ ಮೂಲದ ಕಾರ್ಮಿಕನೊಬ್ಬನನ್ನು ಕೊಂದಿದ್ದರು. ಮೃತ ದಿಲ್ಖಾಸ್, ಇಟ್ಟಿಗೆಗೂಡಿನಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆತನ ಜೊತೆಗೆ ಮತ್ತೊಬ್ಬ ವಲಸೆ ಕಾರ್ಮಿಕನಿಗೂ ಗುಂಡೇಟು ಬಿದ್ದಿತ್ತು.

ಅದಕ್ಕೂ ಮೊದಲು, ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ರಾಜಸ್ಥಾನ ಮೂಲದ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು