ಚೆನ್ನೈ: ‘ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಜಲಾಶಯ ನಿರ್ಮಿಸಲು ಕರ್ನಾಟಕಕ್ಕೆ ಅವಕಾಶ ನೀಡುವುದಿಲ್ಲ. ನಿರ್ಮಾಣ ತಡೆಯಲು ‘ಎಲ್ಲ ಅಗತ್ಯ’ ಕ್ರಮವನ್ನು ಕೈಗೊಳ್ಳಲಾಗುತ್ತಿದೆ’ ಎಂದು ತಮಿಳುನಾಡು ಸರ್ಕಾರ ಹೇಳಿದೆ.
ಪೆನ್ನಿಯಾರ್ ನದಿ ನೀರು ಹರಿವಿನ ದಿಕ್ಕನ್ನು ಅನಧಿಕೃತವಾಗಿ ತಿರುಗಿಸುವ ಕರ್ನಾಟಕದ ಕ್ರಮ ಕುರಿತ ವಿಚಾರಣೆಗೆ ನ್ಯಾಯಮಂಡಳಿಯನ್ನು ರಚಿಸಬೇಕು ಎಂದು ಸರ್ಕಾರ ಆಗ್ರಹಪಡಿಸಿದೆ.
ತಮಿಳುನಾಡು ವಿಧಾನಸಭೆ ಅಧಿವೇಶನದ ಮೊದಲ ದಿನ ಚಾಲನೆ ನೀಡಿ ಮಾತನಾಡಿದ ರಾಜ್ಯಪಾಲ ಆರ್.ಎನ್.ರವಿ ಅವರು, ‘ಅಂತರರಾಜ್ಯ ನದಿ ವಿವಾದ ಪ್ರಕರಣಗಳಲ್ಲಿ ತನ್ನ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಇದೇ ಸಂದರ್ಭದಲ್ಲಿ ನೆರೆ ರಾಜ್ಯಗಳ ಜೊತೆಗೆ ಸ್ನೇಹಪರ ಬಾಂಧವ್ಯ ಹೊಂದಲು ಆದ್ಯತೆ ನೀಡಿದೆ’ ಎಂದರು.
ಮೇಕೆದಾಟು ಅಣೆಕಟ್ಟು ಒಳಗೊಂಡಂತೆ ತಮಿಳುನಾಡಿನ ರೈತರ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುವ ಯಾವುದೇ ನಿರ್ಮಾಣ ಕಾರ್ಯಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.