ಬೆಂಗಳೂರು: ‘ಡಿ.5ರಂದು ಕರ್ನಾಟಕ ಬಂದ್ ನಡೆಸಲು ಯಾರೂ ಅನುಮತಿ ಕೇಳಿಲ್ಲ. ಪೊಲೀಸ್ ಇಲಾಖೆಯೂ ಅನುಮತಿ ನೀಡಿಲ್ಲ. ನಗರದಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು.
ಬಂದ್ ಕುರಿತಾಗಿ ಶುಕ್ರವಾರ ಮಾತನಾಡಿದ ಅವರು, ‘ಶನಿವಾರ ಯಾವುದೇ ರ್ಯಾಲಿ ನಡೆಸಲು ಅವಕಾಶ ನೀಡಿಲ್ಲ. ಬಂದ್ಗೆ ಕೆಎಸ್ಆರ್ಟಿಸಿ, ಬಿಎಂಟಿಸಿ ಬೆಂಬಲ ನೀಡಿಲ್ಲ. ಬಸ್ಗಳನ್ನು ತಡೆಯುವಂತಿಲ್ಲ. ಸಾರ್ವಜನಿಕರು ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಬಹುದು’ ಎಂದರು.
‘ರೌಡಿಶೀಟರ್ಗಳ ಮೇಲೆ ನಿಗಾವಹಿಸಲಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.
ಭದ್ರತೆಗೆ 15 ಸಾವಿರ ಪೊಲೀಸರ ನಿಯೋಜನೆ: ಅನಾವಶ್ಯಕವಾಗಿ ಬಂದ್ ಮಾಡುವುದನ್ನು ತಡೆಯಲು ಹಾಗೂ ಭದ್ರತೆಗಾಗಿ 15 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. 12 ಡಿಸಿಪಿಗಳು ಹಾಗೂ ಹೊಯ್ಸಳ ವಾಹನಗಳು ನಗರವೆಲ್ಲಾ ಸುತ್ತಲಿವೆ. 33 ಕೆಎಸ್ಆರ್ಪಿ, 32 ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ' ಎಂದರು.