ಬೆಂಗಳೂರು: ಅವೈಜ್ಞಾನಿಕ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ವಿಚಾರವಾಗಿ ಪಕ್ಷದ ಕರ್ನಾಟಕ ಘಟಕವು ಸರಣಿ ಟ್ವೀಟ್ ಮಾಡಿದ್ದು, ಜಿಎಸ್ಟಿಯಿಂದ ಐದು ವರ್ಷಗಳಲ್ಲಿ ದೇಶಕ್ಕೆ, ರಾಜ್ಯಕ್ಕೆ ಆಗಿರುವ ಒಂದೇ ಒಂದು ಪ್ರಯೋಜನವನ್ನು ಬಿಜೆಪಿ ವಿವರಿಸಲಿ ಎಂದು ಸವಾಲೆಸೆದಿದೆ.
‘ಜಿಎಸ್ಟಿ ಜಾರಿಯಾಗಿ ಐದು ವರ್ಷಗಳು ಕಳೆದಿವೆ. ಜಾರಿಗೊಳಿಸುವಾಗ ಜಿಎಸ್ಟಿಯಿಂದ ಸ್ವರ್ಗವೇ ಧರೆಗಿಳಿದುಬಿಡುತ್ತದೆ ಎಂದು ಬೆನ್ನು ತಟ್ಟಿಕೊಂಡಿದ್ದ ಬಿಜೆಪಿಗೆ ಇಂದು ಅದರಿಂದಾದ ಏಳಿಗೆಯನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ. ಅವೈಜ್ಞಾನಿಕ ಜಿಎಸ್ಟಿ ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡಿದೆ. ಜನರ ಬದುಕನ್ನು ಕಷ್ಟಕ್ಕೆ ದೂಡಿದೆ’ ಎಂದು ಕಾಂಗ್ರೆಸ್ ಉಲ್ಲೇಖಿಸಿದೆ.
‘ಈ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ಪ್ರತಿ ವರ್ಷವೂ ಜಿಎಸ್ಟಿ ಪಾಲಿನಲ್ಲಿ ಅನ್ಯಾಯವಾಗಿದೆ. ಜಿಎಸ್ಟಿ ಮೂಲಕ ಜನತೆಗೆ, ಸಣ್ಣ ಉದ್ಯಮಗಳಿಗೆ ಅಷ್ಟೇ ಅಲ್ಲ ಕರ್ನಾಟಕಕ್ಕೂ ಮೋಸ ಮಾಡಿದೆ ಕೇಂದ್ರ ಸರ್ಕಾರ. ಜಿಎಸ್ಟಿಯಿಂದ ಈ ಐದು ವರ್ಷಗಳಲ್ಲಿ ದೇಶಕ್ಕೆ, ರಾಜ್ಯಕ್ಕೆ ಆಗಿರುವ ಒಂದೇ ಒಂದು ಪ್ರಯೋಜನವನ್ನು ಬಿಜೆಪಿ ವಿವರಿಸಲಿ’ ಎಂದು ಮತ್ತೊಂದು ಟ್ವೀಟ್ನಲ್ಲಿ ಉಲ್ಲೇಖಿಸಿದೆ.
‘ಕಾರ್ಪೋರೇಟ್ ಸಂಸ್ಥೆಗಳ ಮೇಲಿನ ತೆರಿಗೆಯನ್ನು ಶೇ 30ರಿಂದ ಶೇ 22ಕ್ಕೆ ಇಳಿಸಿ, ಬಡ ಮತ್ತು ಮಧ್ಯಮ ವರ್ಗ ಉಪಯೋಗಿಸುವ ದಿನನಿತ್ಯದ ವಸ್ತುಗಳ ಮೇಲೆ ಹೆಚ್ಚೆಚ್ಚು ತೆರಿಗೆ ವಿಧಿಸಿ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕನ್ನು ನಿರ್ನಾಮಗಳಿಸಲು ಹೊರಟಿರುವ ಪರಮನೀಚ ಬಿಜೆಪಿ ಸರ್ಕಾರ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.