ಬೆಂಗಳೂರು: ‘ಮುಖ್ಯಮಂತ್ರಿ ಕೇವಲ ಹೆಸರಿಗಷ್ಟೆ ರಾಜಾಹುಲಿಯಾದರೆ ಪ್ರಯೋಜನ ಇಲ್ಲ. ಎಲ್ಲ ವಿಚಾರದಲ್ಲೂ ರಾಜಾಹುಲಿ ಆಗಬೇಕು’ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಹೇಳಿದರು.
‘ಕೇಂದ್ರದ ಮುಂದೆ ಮಾತನಾಡುವ ಧೈರ್ಯ ರಾಜ್ಯ ಸರ್ಕಾರಕ್ಕೆ ಇಲ್ಲ. ಏನೂ ಮಾಡದೆ ಕೈ ಕಟ್ಟಿ ಕೂತರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಲಿದೆ. ರಾಜಾಹುಲಿ ಅಂತ ಬಿರುದು ಕೊಟ್ಟ ಮೇಲೆ ಮುಖ್ಯಮಂತ್ರಿ ಆ ಹೆಸರಿನಂತೆ ಕೆಲಸ ಮಾಡಬೇಕು’ ಎಂದರು.
‘ಡ್ರಗ್ಸ್ ದಂಧೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎನ್ನುವುದು ಗೊತ್ತಾಗಬೇಕು. ಬೆಂಗಳೂರಷ್ಟೇ ಅಲ್ಲ, ಇಡೀ ದೇಶದಲ್ಲಿ ಈ ಜಾಲ ವ್ಯಾಪಕವಾಗಿ ಹಬ್ಬಿದೆ. ಯಾರು ಪೂರೈಕೆ ಮಾಡುತ್ತಾರೆ, ಯಾರು ವಿತರಿಸುತ್ತಾರೆ ಅವರನ್ನು ಪತ್ತೆಹಚ್ಚಿ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
‘ಸದನಲ್ಲೂ ಡ್ರಗ್ಸ್ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳಬೇಕು’ ಎಂದೂ ದಿನೇಶ್ ಸಲಹೆ ನೀಡಿದರು.
ಸಿಸಿಬಿ ಸಮಗ್ರ ತನಿಖೆ ನಡೆಸಲಿ: ‘ಡ್ರಗ್ಸ್ ವಿಚಾರದಲ್ಲಿ ರಾಜ್ಯದ ಕಾನೂನು ಗಟ್ಟಿಯಾಗಿಲ್ಲ. ಕಾನೂನು ಇನ್ನಷ್ಟು ಗಟ್ಟಿಯಾದರೆ ಮಾತ್ರ ಡ್ರಗ್ಸ್ ಹಾವಳಿ ತಡೆಗಟ್ಟಬಹುದು. ಇಲ್ಲದೆ ಹೋದರೆ ಪ್ರಯೋಜನವಿಲ್ಲ’ ಎಂದು ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ ಹೇಳಿದರು.
‘ಇಂದ್ರಜಿತ್ಗೆ ನಮ್ಮೆಲ್ಲರ ಬೆಂಬಲವಿದೆ. ಕೇವಲ ನಟ, ನಟಿಯರು ಎಂದು ಒಂದೆರಡು ದಿನ ಸುದ್ದಿ ಮಾಡಿದರೆ ಪ್ರಯೋಜನ ಇಲ್ಲ. ಎಲ್ಲ ವಿಚಾರಗಳನ್ನು ಸಿಸಿಬಿ ಪೊಲೀಸರು ಸಮಗ್ರವಾಗಿ ತನಿಖೆ ಮಾಡಲಿ’ ಎಂದರು.