ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಕ್ಕೆ ವಿವಾದದ ಸ್ಪರ್ಶ ನೀಡುವುದು ಬಿಜೆಪಿ-ಸಿಟಿ ರವಿ ಅವರಿಗೆ ಕರಗತ: ಎಚ್‌ಡಿಕೆ

Last Updated 18 ಜನವರಿ 2022, 9:59 IST
ಅಕ್ಷರ ಗಾತ್ರ

ಬೆಂಗಳೂರು: ಗಣರಾಜ್ಯೋತ್ಸವ ಪರೇಡ್ ಸ್ತಬ್ಧಚಿತ್ರಗಳ ಆಯ್ಕೆಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರವುಳ್ಳ ಕೇರಳ ರಾಜ್ಯದ ಸ್ತಬ್ಧಚಿತ್ರವನ್ನು ತಿರಸ್ಕಾರ ಮಾಡಿದ್ದನ್ನು ಪ್ರಶ್ನೆ ಮಾಡಿದ್ದನ್ನೇ ಬಿಜೆಪಿ ವಿವಾದ ಎಂದು ಬಿಂಬಿಸುತ್ತಿದೆ. ಸೂಕ್ಷ್ಮ ವಿಚಾರಗಳಿಗೆ ವಿವಾದದ ಸ್ಪರ್ಶ ನೀಡುವುದು ಬಿಜೆಪಿ ಮತ್ತು ಸಿಟಿ ರವಿ ಅವರಿಗೆ ಕರತಲಾಮಲಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, 'ವಿವಾದವಲ್ಲದ ವಿಚಾರ ಅಂದರೇನು? ನಾರಾಯಣ ಗುರುಗಳಿಗೆ ಆದ ಅನ್ಯಾಯವನ್ನು ಪ್ರಶ್ನೆ ಮಾಡಬಾರದಿತ್ತೆ? ಕೇರಳ ಸರ್ಕಾರ ಸ್ತಬ್ಧಚಿತ್ರದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿಲ್ಲ ಎಂದಾದರೆ ಆ ಮಾರ್ಗದರ್ಶಿ ಸೂತ್ರಗಳನ್ನು ಸಾರ್ವಜನಿಕವಾಗಿ ದೇಶದ ಮುಂದಿಡಿ. ಅರೆಬರೆ ವಿವರ ಬೇಡ' ಎಂದಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, 'ಕೇರಳದ ಜತೆಗೆ ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳ ಸ್ತಬ್ಧಚಿತ್ರಗಳನ್ನು ಕೂಡ ನಿರಾಕರಿಸಲಾಗಿದೆ. ಪ್ರಾದೇಶಿಕ ಪಕ್ಷಗಳ ಆಡಳಿತ ಇರುವ ರಾಜ್ಯಗಳ ಸ್ತಬ್ಧ ಚಿತ್ರಗಳ ಆಯ್ಕೆ ಬಗ್ಗೆ ಏಕೆ ತಾರತಮ್ಯ ನೀತಿ? ಪ್ರಾದೇಶಿಕ ಆಸ್ಮಿತೆಯ ಕತ್ತು ಹಿಸುಕುವ ಪ್ರಯತ್ನವೇ ಇದು ಎಂಬ ಅನುಮಾನ ಬರುತ್ತಿದೆ' ಎಂದು ಹೇಳಿದ್ದಾರೆ.

ಮುಂದುವರಿದು, 'ಆಯ್ಕೆ ಸಮಿತಿಯಲ್ಲಿ ಇರುವವರು ಯಾರು? ಅವರ ಹಿನ್ನೆಲೆ ಏನು? ಅವರ ಆಯ್ಕೆಯ ಬಗ್ಗೆ ಇರುವ ಮಾನದಂಡ ಏನು? ಇದು ಕೂಡ ದೇಶಕ್ಕೆ ಗೊತ್ತಾಗಬೇಕಿದೆ. ಸ್ತಬ್ಧಚಿತ್ರಗಳ ಆಯ್ಕೆಯಲ್ಲಿ ಕೇಂದ್ರ ಸರ್ಕಾರದ ಪಾತ್ರ ಇಲ್ಲ ಎನ್ನುವ ಬಿಜೆಪಿ, ಪ್ರಧಾನಿಗಳಿಗೆ ಶ್ರೀ ನಾರಾಯಣ ಗುರುಗಳ ಬಗ್ಗೆ ತುಂಬಾ ಗೌರವ ಇದೆ ಎನ್ನುತ್ತೀರಿ. ಏನಿದು ಎರಡು ನಾಲಗೆಯ ತುತ್ತೂರಿ? ಈ ವಿವಾದವನ್ನು ಹುಟ್ಟು ಹಾಕಿದವರು ಎಚ್.ಡಿ. ಕುಮಾರಸ್ವಾಮಿ ಅವರಲ್ಲ. ಬಿಜೆಪಿ ಮತ್ತು ಕೇಂದ್ರ ಸರ್ಕಾರ. ವಿವಿಧತೆಯಲ್ಲಿ ಏಕತೆಯುಳ್ಳ ಭಾರತವನ್ನು ಸಾಂಸ್ಕೃತಿಕವಾಗಿ ಬೆಂಗಾಡು ಮಾಡುವ ಇಂಥ ಹುನ್ನಾರಗಳು ಇನ್ನಾದರೂ ನಿಲ್ಲಲಿ' ಎಂದು ಒತ್ತಾಯಿಸಿದ್ದಾರೆ.

'ಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರದಲ್ಲಿ ಇದ್ದ ನ್ಯೂನತೆಗಳು ಏನು? ಎಂದು ತಿಳಿಯುವ ಹಕ್ಕು ದೇಶಕ್ಕಿದೆ ಎನ್ನುವುದು ನಮ್ಮ ಭಾವನೆ' ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT