ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಯೊಟಾ ಕಿರ್ಲೋಸ್ಕರ್ ಕಾರ್ಮಿಕರ ಮುಷ್ಕರ: 'ಸಮಸ್ಯೆಗೆ ಅಂತ್ಯ ಹಾಡುವುದು ಅಗತ್ಯ'

Last Updated 20 ಡಿಸೆಂಬರ್ 2020, 7:54 IST
ಅಕ್ಷರ ಗಾತ್ರ

ಬೆಂಗಳೂರು: ಬಿಡದಿ ಟೊಯೊಟಾ ಕಿರ್ಲೋಸ್ಕರ್‌ ಕಾರ್ಮಿಕರ ಮುಷ್ಕರಕ್ಕೆ 2 ತಿಂಗಳಾಗುತ್ತಿದೆಯಾದರೂ, ಪರಿಹಾರ ಕಾಣಿಸುತ್ತಿಲ್ಲ. ಕಾರ್ಮಿಕರು-ಸಂಸ್ಥೆಯ ಮುಖ್ಯಸ್ಥರ ನಡುವಿನ ವ್ಯವಸ್ಥಾಪಕರ ಭಿನ್ನಾಭಿಪ್ರಾಯಗಳು, ಪ್ರತಿಷ್ಠೆ, ಸರ್ಕಾರದ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗಿರಬಹುದು. ರಾಜ್ಯದ ಔದ್ಯಮಿಕ ಪ್ರಗತಿ ದೃಷ್ಟಿಯಿಂದ ಈ ಸಮಸ್ಯೆಗೆ ಅಂತ್ಯ ಹಾಡುವುದು ಈಗಿನ ಅಗತ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ವ್ಯವಸ್ಥಾಪಕರ ಮಾತು ಕೇಳಿಯೋ, ಕಾರ್ಮಿಕರ ಮೇಲಿನ ಕ್ಷುಲ್ಲಕ ಆರೋಪಗಳಿಗೋ ಸಂಸ್ಥೆ 3000 ಕಾರ್ಮಿಕರನ್ನು ಬೀದಿಗೆ ತಳ್ಳಿದೆ. ನಮ್ಮ ನೆಲ, ಜಲ, ಗಾಳಿ, ಸೌಕರ್ಯ ಬಳಸಿಕೊಂಡು ನಡೆಯುತ್ತಿರುವ ಸಂಸ್ಥೆಗಳೂ ನಮ್ಮವರ ವಿಷಯದಲ್ಲಿ ಇಷ್ಟು ಕ್ರೂರವಾಗಿರುವುದು ಸರಿಯಲ್ಲ. ಸಂಸ್ಥೆ ಮುಖ್ಯಸ್ಥರು ಪ್ರತಿಷ್ಠೆ ಪಕ್ಕಕ್ಕಿಟ್ಟು ಮಾನವೀಯವಾಗಿ ವರ್ತಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾರ್ಮಿಕರ ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ ಸ್ವತಃ ನಾನೇ ಹಲವು ಸಭೆಗಳನ್ನು ನಡೆಸಿದ್ದೇನೆ. ಕಾರ್ಮಿಕರು-ಸಂಸ್ಥೆಯ ಮುಖ್ಯಸ್ಥರ ನಡುವೆ ಇರುವ ವ್ಯವಸ್ಥಾಪಕ ವರ್ಗ ಗೊಂದಲ ಸೃಷ್ಟಿ ಮಾಡುತ್ತಿರುವುದು ನನಗೆ ಮೇಲ್ನೋಟಕ್ಕೆ ಗೊತ್ತಾಗಿದೆ. ಈ ವ್ಯವಸ್ಥಾಪಕ ವರ್ಗ ಸಾಮಾನ್ಯವಾಗಿ ಈ ಪ್ರದೇಶ, ಪ್ರಾಂತ್ಯದವರಾಗಲಿ, ರಾಜ್ಯದವರಾಗಲಿ ಅಲ್ಲ ಎಂಬುದು ಗಮನಾರ್ಹ ಎಂದಿದ್ದಾರೆ.

ಕೋಲಾರದ 'ವಿಸ್ಟ್ರಾನ್‌' ಘಟನೆಗೆ ಸಂಸ್ಥೆಯ ವ್ಯವಸ್ಥಾಪನೆಯಲ್ಲಿ ಆಗಿದ್ದ ಲೋಪವೇ ಕಾರಣ ಎಂದೂ, ಕಾರ್ಮಿಕರು, ನೌಕರರನ್ನು ಘನತೆಯಿಂದ ಕಾಣುವುದಾಗಿಯೂ ಆಪಲ್‌ ಸಂಸ್ಥೆ ಹೇಳಿದೆ. ವಿಸ್ಟ್ರಾನ್‌ ಕಂಪನಿಯೂ ತನ್ನ ಉಪಾಧ್ಯಕ್ಷನನ್ನು ಇದೇ ಉದ್ದೇಶಕ್ಕೆ ಕಿತ್ತು ಹಾಕಿದೆ. ಟೊಯೋಟಾ ಕೂಡ ತನ್ನ ಆಂತರಿಕ ವಿಚಾರಗಳ ಬಗ್ಗೆ ಒಮ್ಮೆ ಪರಾಮರ್ಶೆ ಮಾಡಬೇಕು ಎಂದು ತಿಳಿಸಿದ್ದಾರೆ.

ಸರ್ಕಾರವೂ ಸಮಸ್ಯೆಯನ್ನು ಆದ್ಯತೆ ಮೇಲೆ ಬಗೆಹರಿಸಲು ಮುಂದಾಗಬೇಕು. ಅದರಿಂದ ರಾಜ್ಯಕ್ಕೂ ಲಾಭವಿದೆ ಎಂಬುದನ್ನು ಗಮನಿಸಬೇಕು. ಕಾರ್ಮಿಕರ ಪ್ರತಿಭಟನೆ, ದಾಂಧಲೆ, ಮುಷ್ಕರಗಳಂಥ ಘಟನೆಗಳು ಹೂಡಿಕೆದಾರರಲ್ಲಿ ಅಪನಂಬಿಕೆ ಹುಟ್ಟು ಹಾಕಲು ಕಾರಣವಾಗುತ್ತದೆ. ರಾಜ್ಯದಲ್ಲಿ ಸುಲಲಿತ ಉದ್ದಿಮೆ ನಡೆಸಲು ಅವಕಾಶಗಳಿಲ್ಲ ಎಂಬ ಭಾವನೆ ಮೂಡಿಸುತ್ತವೆ. ಈ ಎಲ್ಲ ಕಾರಣಗಳಿಂದಾಗಿ ಸರ್ಕಾರವೂ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸುತ್ತೇನೆ. ಸಂಸ್ಥೆಯ ಪ್ರತಿಭಟನಾ ನಿರತ ಕಾರ್ಮಿಕರು, ಸಂಸ್ಥೆಯ ಮುಖ್ಯಸ್ಥರನ್ನು ನೇರ ಸಂಧಾನಕ್ಕೆ ಕೂರಿಸಬೇಕು. ಈ ವಿಚಾರದಲ್ಲಿ ಸರ್ಕಾರ ಸಂಪರ್ಕ ಸೇತುವಾಗಿ ನಡೆದುಕೊಳ್ಳಬೇಕು. ರಾಜ್ಯದ ಔದ್ಯಮಿಕ ಭವಿಷ್ಯದ ದೃಷ್ಟಿಯಿಂದ ಇದು ಅನಿವಾರ್ಯ ಕೂಡ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT