ಬೆಂಗಳೂರು: ಕಾಂಗ್ರೆಸ್– ಬಿಜೆಪಿ ನಡುವೆ ರಾಜಕೀಯ ಕೆಸರೆರೆಚಾಟ ಶುಕ್ರವಾರವೂ ಮುಂದುವರಿದಿದೆ.
‘ಆರ್ಎಸ್ಎಸ್ ಮತ್ತು ಬಿಜೆಪಿಯ ಸಿದ್ಧಾಂತವು ವಿಷಕಾರಿಯಾಗಿದ್ದು, ಜನರು ಅದನ್ನು ತಮಿಳುನಾಡು ಮತ್ತು ಪುದುಚೇರಿಯೊಳಗೆ ಪ್ರವೇಶಿಸಲು ಬಿಡಬಾರದು’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ನೀವು ನಡೆಸಿದ ದುರಾಚಾರ, ಕುಟುಂಬ ಪೋಷಣೆಯ ಫಲವಾಗಿ ಸ್ವ ಕ್ಷೇತ್ರವನ್ನೂ ಉಳಿಸಿಕೊಳ್ಳುವುದಕ್ಕೂ ನಿಮ್ಮಿಂದ ಸಾಧ್ಯವಾಗಿಲಿಲ್ಲ’ ಎಂದು ವಾಗ್ದಾಳಿ ನಡೆಸಿದೆ.
‘ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರವೇಶಿಸುವುದನ್ನು ತಡೆಯವ ಕನಸು ಕಾಣುತ್ತಿರುವುದು ಹಾಸ್ಯಾಸ್ಪದ. ಅಂಗಳ ಅಳೆಯಲು ಅಸಮರ್ಥರಾದವರು ಆಕಾಶ ಅಳೆಯಲು ಮುಂದಾದರು' ಎಂದು ಬಿಜೆಪಿ ವ್ಯಂಗ್ಯವಾಡಿದೆ.
‘ಕಲ್ಯಾಣ ಕರ್ನಾಟಕದ ವಿರೋಧಿ ಮಲ್ಲಿಕಾರ್ಜುನ ಖರ್ಗೆ ಅವರೇ, ತಮಿಳುನಾಡಿನಲ್ಲಿ ಈಗಾಗಲೇ ಬಿಜೆಪಿ ಬೆಂಬಲಿತ ಸರ್ಕಾರವಿದೆ. ಪುದುಚೇರಿಯಲ್ಲಿ ಈ ಬಾರಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಪುದುಚೇರಿಯಲ್ಲಿ ಕಾಂಗ್ರೆಸ್ ಶಾಶ್ವತವಾಗಿ ಬಾಗಿಲು ಮುಚ್ಚಲಿದೆ. ನಿಮ್ಮ ಪಕ್ಷವನ್ನು ಮೊದಲು ಉಳಿಸಿಕೊಳ್ಳಿ, ಮಾನವರಾರೂ ಚಿರಂಜೀವಿಗಳಲ್ಲ’ ಎಂದು ಕಿಡಿಕಾರಿದೆ.
‘ಖರ್ಗೆ ಅವರು ದಲಿತ ವಿರೋಧಿಯಾಗಿದ್ದಾರೆ. ದಕ್ಷಿಣ ಭಾರತದ ರಾಜಕೀಯದ ಬಗ್ಗೆ ಮಾತನಾಡುವ ನೀವು ಕಲ್ಯಾಣ ಕರ್ನಾಟಕಕ್ಕೆ ಏನು ಮಾಡಿದ್ದೀರಿ?, ದಲಿತರ ಬಗ್ಗೆ ಕಾಳಜಿ ಇದ್ದರೆ ಚಿತ್ತಾಪುರ ಮೀಸಲು ಕ್ಷೇತ್ರದಲ್ಲಿ ಮುಂದಿನ ಬಾರಿ ನಿಮ್ಮ ಕುಟುಂಬ ಹೊರತಾದವರಿಗೆ ಅವಕಾಶ ನೀಡಿ. ಸಾಕಷ್ಟು ಅಧಿಕಾರ ಅನುಭವಿಸಿದ ಮೇಲೂ ಮೀಸಲು ಕ್ಷೇತ್ರವನ್ನು ಮಗನಿಗೆ ಧಾರೆ ಎರೆಯುವುದೇಕೆ?’ ಎಂದು ಬಿಜೆಪಿ ಪ್ರಶ್ನಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.