ಬೆಂಗಳೂರು: ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಭಾನುವಾರ ಬಿಡುಗಡೆಯಾಗಿರುವ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ನಾಯಕಿ ವಿ.ಕೆ.ಶಶಿಕಲಾ ಅವರು ಮುಂದಿನ ಏಳು ದಿನಗಳನ್ನು ಬೆಂಗಳೂರಿನಲ್ಲಿಯೇ ಕಳೆಯಲಿದ್ದಾರೆ.
ನಗರದ ಹೊರವಲಯದಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ರೆಸಾರ್ಟ್ನಲ್ಲಿ ಶಶಿಕಲಾ ಅವರು ತಂಗಲಿದ್ದಾರೆ ಎಂದು ಅವರ ಸೋದರಳಿಯ ಹಾಗೂ ಶಾಸಕ ಟಿಟಿವಿ ದಿನಕರನ್ ಮಾಹಿತಿ ನೀಡಿದ್ದಾರೆ.
ವೈದ್ಯರ ಸಲಹೆಯಂತೆ ಶಶಿಕಲಾ ಅವರು ಬೆಂಗಳೂರಿನಲ್ಲಿಯೇ ಕ್ವಾರಂಟೈನ್ ಮುಗಿಸಿ ಚೆನ್ನೈಗೆ ಪ್ರಯಾಣ ಬೆಳಸಲಿದ್ದಾರೆ ಎಂದು ದಿನಕರನ್ ಸುದ್ದಿವಾಹಿನಿಗಳಿಗೆ ತಿಳಿಸಿದ್ದಾರೆ.
66 ವರ್ಷದ ಶಶಿಕಲಾ ಅವರನ್ನು ಉಸಿರಾಟದ ಸಮಸ್ಯೆಯ ಕಾರಣ, ಜನವರಿ 20ರಂದು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಒಂದು ದಿನದ ನಂತರ, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಅವರಿಗೆ ಕೋವಿಡ್ ದೃಢಪಟ್ಟಿತ್ತು.
ಕೊರೊನಾ ಸೋಂಕು ತಗುಲಿ ಉಸಿರಾಟದ ತೊಂದರೆ ಎದುರಿಸುತ್ತಿದ್ದ ಶಶಿಕಲಾಗೆ ವೆಂಟಿಲೇಟರ್ ಸಹ ಅಳವಡಿಸಲಾಗಿತ್ತು. ಇತ್ತೀಚೆಗೆ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ವೆಂಟಿಲೇಟರ್ ತೆಗೆಯಲಾಗಿತ್ತು. ಬಿಡುಗಡೆ ಸಂದರ್ಭದಲ್ಲಿ ಶಶಿಕಲಾ ಜೊತೆ ಮಾತನಾಡಿರುವ ವೈದ್ಯರು, ಕೆಲ ದಿನ ಹೆಚ್ಚು ಒತ್ತಡದ ಕೆಲಸ ಮಾಡದೇ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿರುವುದಾಗಿ ಗೊತ್ತಾಗಿದೆ.
ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಮಾಡಿದ ಆರೋಪದಲ್ಲಿ ಅವರು ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿ, ಜನವರಿ 27ರಂದು ಬಿಡುಗಡೆಯಾಗಿದ್ದರು