ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೋವಿಡ್ನಿಂದ ಮೃತಪಟ್ಟ ಪೌರಕಾರ್ಮಿಕ ರಾಜು ಅವರ ಮನೆಗೆ ಶುಕ್ರವಾರ ಭೇಟಿ ನೀಡಿ₹ 1 ಕೋಟಿ ಪರಿಹಾರ ಚೆಕ್ ವಿತರಿಸಿದರು.
ಉತ್ತರ ದೆಹಲಿಯ ಮಂಜು ಕಾ ತಿಲ್ಲಾ ಪ್ರದೇಶದಲ್ಲಿರುವ ರಾಜು ಅವರ ಮನೆಗೆ ಭೇಟಿ ನೀಡಿ, ಮೃತ ಪೌರಕಾರ್ಮಿಕನ ಕುಟುಂಬದ ಸದಸ್ಯರಿಗೆ ಪರಿಹಾರದ ಚೆಕ್ ಹಸ್ತಾಂತರಿಸಲಾಯಿತು.
ಕೋವಿಡ್-19 ಸೇವೆಯಲ್ಲಿದ್ದಾಗಲೇ ರಾಜು ಅವರಿಗೆ ಸೋಂಕು ತಗುಲಿತ್ತು. 'ದೆಹಲಿ ಜನರ ಸೇವೆಯಲ್ಲಿದ್ದಾಗಲೇ ರಾಜು ಮೃತಪಟ್ಟಿದ್ದಾರೆ. ಇಂಥ ಕೋವಿಡ್ ಯೋಧರ ಬಗ್ಗೆ ನಮಗೆ ಹೆಮ್ಮೆಯಿದೆ' ಎಂದು ಚೆಕ್ ಹಸ್ತಾಂತರಿಸಿದ ನಂತರ ಕೇಜ್ರಿವಾಲ್ ಹೇಳಿದರು.
ಕೋವಿಡ್-19 ಕಾಣಿಸಿಕೊಂಡ ನಂತರ 30ಕ್ಕೂ ಹೆಚ್ಚು ಪೌರಕಾರ್ಮಿಕರು ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಈವರೆಗೆ ಒಟ್ಟು 4000 ಮಂದಿ ಮತ್ತು ದೇಶದಾದ್ಯಂತ ಒಟ್ಟು 50,000 ಮಂದಿ ಮೃತಪಟ್ಟಿದ್ದಾರೆ.
ಸೋಂಕು ಬಾರದಂತೆ ತಡೆಗಟ್ಟುವ ಸಾಧನಗಳನ್ನು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಅಗತ್ಯ ಪ್ರಮಾಣದಲ್ಲಿ ನೀಡಿಲ್ಲ ಎಂದು ಪೌರ ಕಾರ್ಮಿಕರು ಹೇಳಿದ್ದಾರೆ. ರಕ್ಷಣಾ ಸಾಧನಗಳಾಗಿ ಒಂದಿಷ್ಟು ಫೇಸ್ ಮಾಸ್ಕ್ಗಳನ್ನು ಕೊಟ್ಟು ಕೈತೊಳೆದುಕೊಳ್ಳಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾರ್ಗಸೂಚಿಯ ಅನ್ವಯ ಪೌರ ಕಾರ್ಮಿಕರಿಗೆ ಅಗತ್ಯ ರಕ್ಷಣಾ ಸಾಧನಗಳನ್ನು ವಿತರಿಸಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.