ನವದೆಹಲಿ: ಲಾಕ್ಡೌನ್ ಜಾರಿಯಲ್ಲಿರುವಈ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಎಲ್ಲ ರೀತಿಯ ಅಗತ್ಯ ನೆರವನ್ನು ಸರ್ಕಾರವು ನೀಡಲಿದೆ. ದಯವಿಟ್ಟು ಯಾರೊಬ್ಬರೂ ನಗರದಿಂದ ಹೊರ ಹೋಗಬಾರದು ಎಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವುದನ್ನು ಪರಿಗಣಿಸಿ ಸೋಮವಾರ ಸಂಜೆಯಿಂದ ಏಪ್ರಿಲ್26ರ ಮುಂಜಾನೆವರೆಗೆ ಸಂಪೂರ್ಣ ಲಾಕ್ಡೌನ್ ಘೋಷಿಸಲಾಗಿದೆ. ಈ ಹಿನ್ನಲೆಯಲ್ಲಿ ನಗರವನ್ನು ತೊರೆಯಲು ಬಸ್ ಹಾಗೂ ರೈಲು ನಿಲ್ದಾಣಗಳ ಬಳಿ ವಲಸೆ ಕಾರ್ಮಿಕರು ಜಮಾಯಿಸಿರುವ ಬಗ್ಗೆ ವರದಿಯಾಗಿವೆ.ಕಾರ್ಮಿಕರು ಸಮಸ್ಯೆ ಎದುರಿಸುತ್ತಿರುವುದನ್ನು ಬಿಂಬಿಸುವಸಾಕಷ್ಟುಚಿತ್ರಗಳು ವೈರಲ್ ಆಗಿವೆ. ಈ ಬಗ್ಗೆ ಬೈಜಲ್ ಕಳವಳ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಮುಖ್ಯ ಕಾರ್ಯದರ್ಶಿ ಅವರನ್ನೂ ಭೇಟಿ ಮಾಡಿರುವ ಬೈಜಲ್, ಪರಿಸ್ಥಿತಿ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಹಾಗೆಯೇ ವಲಸೆ ತಡೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಮೂಲಗಳ ಪ್ರಕಾರ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಪೊಲೀಸ್ ವಿಶೇಷ ಆಯುಕ್ತರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಲಾಕ್ಡೌನ್ ಘೋಷಣೆ ಬಳಿಕ ನೂರಾರು ಸಂಖ್ಯೆಯ ಕಾರ್ಮಿಕರು ತಮ್ಮತಮ್ಮ ಊರುಗಳಿಗೆ ತೆರಳಲು ಆನಂದ ವಿಹಾರ್ ಬಸ್ ಟರ್ಮಿನಲ್ ಬಳಿ ಸೋಮವಾರ ಸಂಜೆ ಜಮಾಯಿಸಿದ್ದರು. ಮಹಿಳೆಯರು ಮಕ್ಕಳು ಸೇರಿದಂತೆ ಸಾಕಷ್ಟು ಕಾರ್ಮಿಕರು ರಸ್ತೆ ಮೇಲೆಯೇ ಮಲಗಿದ್ದ ದೃಶ್ಯಗಳು ರಾಷ್ಟ್ರ ರಾಜಧಾನಿಯಾದ್ಯಂತ ಕಂಡು ಬಂದಿವೆ.