ಉತ್ತರ ಪ್ರದೇಶದ ಪ್ರಮುಖ 11 ಸ್ಥಾನಗಳಲ್ಲಿ ಕಾಂಗ್ರೆಸ್ ಜತೆಗಿನ ಮೈತ್ರಿಯು ಉತ್ತಮ ಬೆಳವಣಿಗೆ ಎಂದು ಅಖಿಲೇಶ್ ಯಾದವ್ ಹೇಳಿದ ಬೆನ್ನಲ್ಲೇ ಕಾಂಗ್ರೆಸ್ ಹೀಗೆ ಹೇಳಿದೆ.
ಹಿರಿಯ ನಾಯಕ ಅಶೋಕ್ ಗೆಹಲೋತ್ ಅವರು ಅಖಿಲೇಶ್ ಯಾದವ್ ಅವರೊಂದಿಗೆ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ಮಾತುಕತೆಯು ಸಕಾರಾತ್ಮಕ ಮತ್ತು ರಚನಾತ್ಮಕವಾಗಿ ನಡೆಯುತ್ತಿದೆ. ಸೀಟುಗಳ ಹಂಚಿಕೆ ಅಂತಿಮಗೊಂಡ ನಂತರ ನಾವು ತಿಳಿಸುತ್ತೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಮೈತ್ರಿ ಕುರಿತಂತೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಖಿಲೇಶ್ ಯಾದವ್, ರಾಜ್ಯದ 11 ಪ್ರಮುಖ ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ನೊಂದಿಗೆ ಸಮಾಜವಾದಿ ಪಕ್ಷದ ಮೈತ್ರಿಯು ಉತ್ತಮ ಆರಂಭವಾಗಿದೆ. ಇದರಿಂದ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಹಾಯವಾಗಲಿದೆ. ಇಂಡಿಯಾ ಮೈತ್ರಿಕೂಟದ ಕಾರ್ಯತಂತ್ರವು ದೇಶದಲ್ಲಿ ಹೊಸ ಇತಿಹಾಸ ಬರೆಯಲಿದೆ ಎಂದು ತಿಳಿಸಿದ್ದಾರೆ.