ಛತ್ರಪತಿ ಸಾಂಭಾಜಿನಗರ (ಮಹಾರಾಷ್ಟ್ರ): ಎನ್ಸಿಪಿಯ ಶರದ್ ಪವಾರ್ ಬಣದ ಚುನಾವಣಾ ಚಿಹ್ನೆ ‘ಕಹಳೆ ಊದುತ್ತಿರುವ ವ್ಯಕ್ತಿ’ಯಿಂದಾಗಿ ಸಾಂಪ್ರದಾಯಿಕ ಕಹಳೆ ಊದುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚುನಾವಣೆ ಹಾಗೂ ಮದುವೆ ಋತು ಒಂದೇ ಅವಧಿಯಲ್ಲಿ ಇರುವುದರಿಂದ ನಷ್ಟ ಅನುಭವಿಸುವ ಭೀತಿ ಎದುರಿಸುತ್ತಿದ್ದಾರೆ.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ಬಾರಿಯ ವಿವಾಹ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಕಹಳೆ ಊದುವವರಿಗೆ ಬೇಡಿಕೆ ಇಳಿಕೆಯಾಗುವ ಸಾಧ್ಯತೆ ಇದೆ.
ಸಮಾರಂಭಗಳಲ್ಲಿ ಸ್ವಾಗತ ಕೋರಲು ಈ ವಾದ್ಯವನ್ನು ಊದಲಾಗುತ್ತದೆ. ಈ ಹಿಂದೆ ರಾಜರ ಆಗಮನ ಸೂಚಿಸಲು ಕಹಳೆ ಊದಲಾಗುತ್ತಿತ್ತು.
‘ನಾವು ದೈನಂದಿನ ಬಳಸುವ ವಸ್ತುಗಳು ರಾಜಕೀಯ ಪಕ್ಷಗಳ ಚಿಹ್ನೆಯಾಗಿ ಬಳಕೆಯಲ್ಲಿವೆ. ಅವುಗಳನ್ನು ನಾವು ತ್ಯಜಿಸಲು ಸಾಧ್ಯವಿಲ್ಲ. ಕಹಳೆ ಪ್ರಮುಖ ರಾಜಕೀಯ ಪಕ್ಷವೊಂದರ ಚಿಹ್ನೆಯಾಗಿರುವುದರಿಂದ ಅದನ್ನು ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಬಳಕೆ ಮಾಡಬೇಕೋ? ಬೇಡವೋ? ಎನ್ನುವುದರ ಬಗ್ಗೆ ನಮಗೆ ಖಚಿತತೆ ಇಲ್ಲ. ಹೀಗಾಗಿ ನಮಗೆ ನಷ್ಟವಾಗುವ ಸಾಧ್ಯತೆ ಇದೆ’ ಎಂದು ಇಲ್ಲಿನ ಕಹಳೆ ಊದುವ ಬಾಬೂರಾಬ್ ಗೌರವ್ ಹೇಳಿದರು.
‘ರಾಜಕೀಯ ಪಕ್ಷಗಳೂ ಕೂಡ ಕಹಳೆ ಊದುವವರನ್ನು ಚುನಾವಣಾ ಸಮಾವೇಶಗಳಿಗೆ ಆಹ್ವಾನಿಸುತ್ತವೆ. ಆದರೆ ಈಗ ಕಹಳೆ ಚುನಾವಣಾ ಚಿಹ್ನೆಯಾಗಿರುವುದರಿಂದ ರಾಜಕೀಯ ಪಕ್ಷಗಳ ಆರ್ಡರ್ ತಪ್ಪಿಹೋಗುವ ಭೀತಿ ಇದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜನರೂ ಕೂಡ ಶುಭಕಾರ್ಯಗಳಿಗೆ ನಮ್ಮನ್ನು ಆಹ್ವಾನಿಸದೇ ಇರುವ ಸಾಧ್ಯತೆ ಇದೆ’ ಎಂದು ಗೌರವ್ ಆತಂಕ ವ್ಯಕ್ತಪಡಿಸಿದರು.
‘ಕಹಳೆ ಊದುವ ಬಗ್ಗೆ ನಮಗೆ ಖಚಿತತೆ ಇಲ್ಲ. ಮದುವೆ ಸಮಾರಂಭದಲ್ಲಿ ಉಭಯ ಪಕ್ಷಗಳು ಒಪ್ಪಿಕೊಂಡರೆ ನಾವು ಊದುತ್ತೇವೆ. ಒಂದು ಪಕ್ಷದಿಂದ ವಿರೋಧ ಬಂದರೂ ನಾವು ನಿಲ್ಲಿಸುತ್ತೇವೆ’ ಎಂದು ಅವರು ಹೇಳಿದರು.
ಎನ್ಸಿಪಿ ಇಬ್ಭಾಗವಾದ ಬಳಿಕ ಅಜಿತ್ ಪವಾರ್ ಅವರದ್ದು ನೈಜ ಎನ್ಸಿಪಿ ಎಂದು ಗುರುತಿಸಿದ್ದ ಚುನಾವಣಾ ಆಯೋಗ, ಗಡಿಯಾರ ಚಿಹ್ನೆಯನ್ನು ಆ ಬಣಕ್ಕೆ ನೀಡಿತ್ತು. ಎನ್ಸಿಪಿ (ಶರದ್ಚಂದ್ರ ಪವಾರ್) ಬಣಕ್ಕೆ ಕಹಳೆ ಊದುತ್ತಿರುವ ವ್ಯಕ್ತಿ ಚಿಹ್ನೆಯನ್ನು ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.