ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News: ಈ ದಿನದ ಪ್ರಮುಖ 10 ಸುದ್ದಿಗಳು

Published 19 ಅಕ್ಟೋಬರ್ 2023, 11:33 IST
Last Updated 19 ಅಕ್ಟೋಬರ್ 2023, 11:33 IST
ಅಕ್ಷರ ಗಾತ್ರ
Introduction

ರಾಜ್ಯ, ದೇಶ, ವಿದೇಶ, ಕ್ರೀಡೆ ಸೇರಿ ಈ ದಿನದ 10 ‍ಪ್ರಮುಖ ಸುದ್ದಿಗಳು ಇಲ್ಲಿವೆ.

1

ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಹೈಕೋರ್ಟ್ ಹಸಿರು ನಿಶಾನೆ

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಸಿಬಿಐ ತನಿಖೆ ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಪ್ರಕಟಿಸಿತು.

2

ಜೆಡಿಎಸ್‌ ಸಮಿತಿ ವಿಸರ್ಜನೆ: ಎಚ್.ಡಿ.ಕುಮಾರಸ್ವಾಮಿ ಹಂಗಾಮಿ ಅಧ್ಯಕ್ಷ

ಬೆಂಗಳೂರು: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಒಳಗೊಂಡಂತೆ ಕಾರ್ಯಕಾರಿ ಸಮಿತಿಯ ಎಲ್ಲ ಪದಾಧಿಕಾರಿಗಳನ್ನೂ ವಿಸರ್ಜಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಆದೇಶ ಹೊರಡಿಸಿದ್ದಾರೆ.

ಪಕ್ಷದ ಕಾರ್ಯಚಟುವಟಿಕೆಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಅನುಕೂಲವಾಗುವಂತೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

3

ಜೆಡಿಎಸ್‌ ರಾಜ್ಯ ಘಟಕಕ್ಕೆ ನಾನೇ ಅಧ್ಯಕ್ಷ: ಸಿ.ಎಂ.ಇಬ್ರಾಹಿಂ

ಬೆಂಗಳೂರು: ‘ಜೆಡಿಎಸ್‌ ರಾಜ್ಯ ಘಟಕಕ್ಕೆ ನಾನೇ ಅಧ್ಯಕ್ಷ. ನನ್ನನ್ನು ಕೆಳಗಿಳಿಸುವ ಅಧಿಕಾರ ರಾಜ್ಯ ಉನ್ನತ ನಾಯಕರ ಸಭೆಗೆ ಇಲ್ಲ. ಅವರ ನಿರ್ಧಾರವನ್ನು ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇನೆ. ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುತ್ತೇನೆ’ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.

ಪಕ್ಷದ ರಾಜ್ಯ ಘಟಕ ವಿಸರ್ಜನೆ ಕುರಿತು ಗುರುವಾರ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

4

ಉದ್ಯೋಗಕ್ಕಾಗಿ ಹಣ: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಗೆ ಜಾಮೀನು ನಿರಾಕರಣೆ

ಉದ್ಯೋಗಕ್ಕಾಗಿ ಹಣ: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಗೆ ಜಾಮೀನು ನಿರಾಕರಣೆ

5

Telangana Election 2023 | ಚುನಾವಣೆಯಲ್ಲಿ ಕೆಸಿಆರ್‌ಗೆ ಸೋಲು: ರಾಹುಲ್‌ ಗಾಂಧಿ

ಹೈದರಾಬಾದ್‌: ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ನೇತೃತ್ವದ ಬಿಆರ್‌ಎಸ್‌ ಪಕ್ಷ ಸೋಲುತ್ತದೆ ಎಂದು ಎಐಸಿಸಿ ನಾಯಕ ರಾಹುಲ್‌ ಗಾಂಧಿ ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್‌ ಪಕ್ಷದ ‘ವಿಜಯಭೇರಿ’ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಚುನಾವಣೆಯು ಸಾಮಾನ್ಯ ಜನರ ತೆಲಂಗಾಣ ಹಾಗೂ ಉಳಿಗಮಾನ್ಯ ಸಮಾಜವಿರುವ ತೆಲಂಗಾಣ ನಡುವೆ ನಡೆಯಲಿದೆ. ರಾಜ ಮತ್ತು ಜನರ ಈ ಹೋರಾಟದ ಚುನಾವಣೆಯಲ್ಲಿ ಕೆಸಿಆರ್‌ ಸೋಲುತ್ತದೆ ಎಂದು ತಿಳಿಸಿದ್ದಾರೆ.

6

ಬೈಡನ್ ಬೆನ್ನಲ್ಲೇ ಇಸ್ರೇಲ್‌ಗೆ ಸುನಕ್ ಭೇಟಿ; ನೆತನ್ಯಾಹು ಜತೆ ಗೋಪ್ಯ ಚರ್ಚೆ

ಜೆರುಸಲೇಂ: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಬೆನ್ನಲ್ಲೇ ಇಸ್ರೇಲ್‌ಗೆ ಭೇಟಿ ಕೊಟ್ಟಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಗೋಪ್ಯ ಚರ್ಚೆ ನಡೆಸಿದ್ದಾರೆ.

ಈ ಕುರಿತು ಇಸ್ರೇಲ್‌ನ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

7

ಪ್ಯಾಲೇಸ್ಟಿನಿಯನ್ನರಿಗೆ ₹2.5 ಕೋಟಿ ನೆರವು ನೀಡುವುದಾಗಿ ಘೋಷಿಸಿದ ಮಲಾಲಾ

ನವದೆಹಲಿ: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಝೈ ಅವರು ಪ್ಯಾಲೇಸ್ಟಿನಿಯನ್ನರಿಗೆ ಸಹಾಯ ಮಾಡುವ ಮೂರು ದತ್ತಿಗಳಿಗೆ ಸುಮಾರು ₹2.5 ಕೋಟಿ ನೆರವು ನೀಡುವುದಾಗಿ ಹೇಳಿದ್ದಾರೆ.

ಗಾಜಾದ ಆಸ್ಪತ್ರೆ ನಡೆದ ಭೀಕರ ದಾಳಿಯಿಂದಾಗಿ 500 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದು, ಬಹಳ ಗಾಬರಿಯಾಗಿದೆ. ಎಂದ ಅವರು ವಿಡಿಯೊ ಮೂಲಕ ಹೇಳಿಕೆ ನೀಡಿದ್ದಾರೆ. ’ಕದನ ವಿರಾಮ ನೀಡಿ ಗಾಜಾದಲ್ಲಿರುವವರಿಗೆ ಮಾನವೀಯ ನೆರವು ನೀಡಲು ಇಸ್ರೇಲ್‌ ಸರ್ಕಾರ ಅನುಮತಿ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

8

2024ಕ್ಕೆ ಮಾರುಕಟ್ಟೆಗೆ ದೇಶದಲ್ಲಿ ತಯಾರಾದ ‘ಗೂಗಲ್ ಪಿಕ್ಸಲ್‌ 8’ ಸ್ಮಾರ್ಟ್‌ಫೋನ್

ನವದೆಹಲಿ: ‘ಗೂಗಲ್‌ ಕಂಪನಿಯು ಭಾರತದಲ್ಲಿಯೇ ಸ್ಮಾರ್ಟ್‌ಫೋನ್ ತಯಾರಿಕೆ ಆರಂಭಿಸಲಿದೆ. ಮೊದಲಿಗೆ ಪಿಕ್ಸಲ್‌ 8 ಸ್ಮಾರ್ಟ್‌ಫೋನ್‌ ತಯಾರಿಸಲಿದ್ದು, ಮುಂದಿನ ವರ್ಷ ಅದು ಮಾರುಕಟ್ಟೆಗೆ ಬರಲಿದೆ’ ಎಂದು ಕಂಪನಿಯ ಹಿರಿಯ ಉಪಾಧ್ಯಕ್ಷ ರಿಕ್‌ ಆಸ್ಟರ್ಲೋ ತಿಳಿಸಿದ್ದಾರೆ.

9

‘ಎಕ್ಸ್‌’ನಲ್ಲಿ ತಾಂತ್ರಿಕ ದೋಷ: ಹಲವು ಬಳಕೆದಾರರಿಂದ ದೂರು

ಬೆಂಗಳೂರು: ಜನಪ್ರಿಯ ಮೈಕ್ರೋ ಬ್ಲಾಗಿಂಗ್ ಜಾಲತಾಣ ಎಕ್ಸ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಟ್ವಿಟರ್ ಸ್ಪಂದಿಸುತ್ತಿಲ್ಲ ಎಂದು ಹಲವು ಬಳಕೆದಾರರು ವರದಿ ಮಾಡಿದ್ದಾರೆ.

ವೆಬ್‌ಸೈಟ್‌ಗಳು ಸ್ಥಗಿತಗೊಳ್ಳುವ ಸಮಸ್ಯೆಗಳನ್ನು ಟ್ರ್ಯಾಕ್ ಮಾಡುವ ಡೌನ್‌ಡಿಟೆಕ್ಟರ್, ಗುರುವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಎಕ್ಸ್‌ ವೇದಿಕೆಯ ದೋಷದ ಬಗ್ಗೆ ಬಳಕೆದಾರರ ದೂರುಗಳು ಹೆಚ್ಚಾಗಿವೆ ಎಂದು ತಿಳಿಸಿದೆ.

10

CWC 2023 | IND vs BAN: ಹಾರ್ದಿಕ್ ಪಾಂಡ್ಯಗೆ ಗಾಯ; ಬೌಲಿಂಗ್ ಮಾಡಿದ ವಿರಾಟ್

ಪುಣೆ: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪಂದ್ಯದ ವೇಳೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಇನಿಂಗ್ಸ್‌ನ ಒಂಬತ್ತನೇ ಓವರ್‌ನ ಮೂರನೇ ಎಸೆತದಲ್ಲಿ ಘಟನೆ ನಡೆಯಿತು. ಹಾರ್ದಿಕ್ ಪಾಂಡ್ಯ ದಾಳಿಯಲ್ಲಿ ಬಾಂಗ್ಲಾ ಬ್ಯಾಟರ್ ಲಿಟನ್ ದಾಸ್ ಸ್ಟ್ರೇಟ್ ಡ್ರೈವ್ ಹೊಡೆದರು. ಈ ವೇಳೆ ಕಾಲಿನಲ್ಲಿ ಚೆಂಡನ್ನು ತಡೆಯಲು ವಿಫಲ ಯತ್ನ ನಡೆಸಿದ ಹಾರ್ದಿಕ್ ಪಾಂಡ್ಯ ಎಡವಿ ಬಿದ್ದರು. ಚೆಂಡು ಬೌಂಡರಿ ಗೆರೆ ದಾಟಿತು.

ನೋವು ತಡೆಯಲಾರದೇ ಕುಂಟುತ್ತಾ ಸಾಗಿದ ಹಾರ್ದಿಕ್ ಪಾಂಡ್ಯ ಅವರಿಗೆ ಫಿಸಿಯೊ ನೆರವನ್ನು ಒದಗಿಸಲಾಯಿತು. ಇದರಿಂದ ಸ್ವಲ್ಪ ಹೊತ್ತು ಪಂದ್ಯಕ್ಕೆ ಅಡ್ಡಿಯಾಯಿತು. ಅಂತಿಮವಾಗಿ ಬೌಲಿಂಗ್ ಮುಂದುವರಿಸಲಾಗದೇ ಮೈದಾನದಿಂದ ಹೊರಗೆ ನಡೆದರು.