ನವದೆಹಲಿ: ಜಗತ್ತಿನಲ್ಲಿ ಅತೀ ಹೆಚ್ಚು ಕ್ಷೀರೋತ್ಪಾದನೆಯಾಗುವ ದೇಶ ಭಾರತ. ಅದೇ ವೇಳೆ ಜಗತ್ತಿನಲ್ಲಿ ಅತೀ ಹೆಚ್ಚು ಬೀಫ್ ರಫ್ತು ಮಾಡುವ ದೇಶವೂ ನಮ್ಮದೇ. 2015ರ ಆರ್ಥಿಕ ವರ್ಷದಲ್ಲಿ ಭಾರತ 2.4ಮಿಲಿಯನ್ ಟನ್ ಬೀಫ್ ರಫ್ತು ಮಾಡಿದೆ.
ದ ಹಿಂದೂ ಪತ್ರಿಕೆ ವರದಿ ಪ್ರಕಾರ ಬೀಫ್ ಮತ್ತು ಹಾಲು ಒಂದೇ ನಾಣ್ಯದ ಎರಡು ಮುಖಗಳು. ಭಾರತದಲ್ಲಿ ಹಸು ಮತ್ತು ಎತ್ತುಗಳನ್ನು ಹಾಲಿಗಾಗಿಯೇ ಸಾಕಲಾಗುತ್ತಿದೆ. ಬೀಫ್ (ಮಾಂಸಕ್ಕಾಗಿಯೇ) ಯಾವುದೇ ಪ್ರಾಣಿಯನ್ನು ಇಲ್ಲಿ ಸಾಕಲಾಗುತ್ತಿಲ್ಲ. ಭಾರತದಲ್ಲಿನ ಮಾಂಸ ಮಾರಾಟ ಉದ್ಯಮದಲ್ಲಿ ಶೇ.62 ರಷ್ಟು ಮಾರಾಟವಾಗುವ ಮಾಂಸ ಹಸುವಿನದ್ದೇ. ಹೈನುಗಾರಿಕೆ ಉದ್ಯಮದಿಂದಲೇ ಬೀಫ್ ಕೂಡಾ ಪೂರೈಕೆಯಾಗುತ್ತದೆ. ಹೈನುಗಾರಿಕೆ ಉದ್ಯಮವೂ ಮಾಂಸ ಮತ್ತು ಮಾಂಸದ ಉತ್ಪನ್ನ (ಚರ್ಮ)ದಿಂದಲೇ ಆರ್ಥಿಕ ಸುಸ್ಥಿತಿಯನ್ನು ಕಂಡುಕೊಂಡಿದೆ. ಹಾಗಾಗಿ, ಜಾನುವಾರಗಳ ಬಗ್ಗೆ ನಾವು ಯೋಚಿಸುವಾಗ ನಾವು ಮೊದಲು ಹಾಲು ಕೊಡುವ ಹಸುಗಳ ಬಗ್ಗೆಯೇ ಚಿಂತಿಸಬೇಕಿದೆ.
ಭಾರತದಲ್ಲಿ ಬೀಫ್ಗಾಗಿಯೇ ಪ್ರಾಣಿಗಳನ್ನು ಸಾಕಲಾಗುತ್ತಿಲ್ಲ. ರೈತರು ಕೃಷಿ ಉಪಯೋಗಕ್ಕಾಗಿ ಹಸುಗಳನ್ನು (ಎತ್ತು, ಹೋರಿ) ಗಳನ್ನು ಸಾಕುತ್ತಾರೆ. ಅವುಗಳು ಉಪಯೋಗ ಶೂನ್ಯವಾದಾಗ ಅವುಗಳನ್ನು ಕಸಾಯಿಖಾನೆಗೆ ಮಾರಲಾಗುತ್ತದೆ.
ಪ್ರಾಣಿ ದಯಾ ಸಂಘಟನೆ (ಪೆಟಾ) ಹಲವಾರು ಡೈರಿಗಳಿಗೆ ಭೇಟಿ ನೀಡಿದ ತಯಾರಿಸಿದ ವರದಿ ಹೀಗಿದೆ
ಡೈರಿಗಳಲ್ಲಿ ಹಸುವಿನ ಹಾಲು ಹಿಂಡುವಾಗ ಅದರ ಕರುವನ್ನು ದೂರ ಎಳೆದೊಯ್ಯಲಾಗುತ್ತದೆ. ಕರು ಹಾಲು ಕುಡಿಯದಂತೆ ಅದನ್ನು ದೂರವಿಡಲಾಗುತ್ತದೆ. ಹಸುವಿನ ಹಾಲು ವಂಚಿತ ಕರುಗಳು ಸಾಯುತ್ತವೆ. ಹೀಗೆ ಸತ್ತ ಕರುಗಳನ್ನು ಮುಂಬೈಯ ಡಿಯೋನರ್ (ಮುಂಬೈಯ ಕಸಾಯಿಖಾನೆ)ಗೆ ಒಯ್ದು ಅಲ್ಲಿ ಅವುಗಳ ಚರ್ಮ ಸುಲಿಯಲಾಗುತ್ತದೆ. ಇನ್ನು ಕೆಲವು ಕರುಗಳು ಅಡ್ನಾಡಿಯಾಗಿ ಅಲೆದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಬದುಕಿ ಉಳಿದರೆ ಅವುಗಳನ್ನು ಕಸಾಯಿಖಾನೆಗೆ ಒಯ್ಯಲಾಗುತ್ತದೆ.
ಹೈನುಗಾರಿಕೆ ಮತ್ತು ಬೀಫ್ ರಪ್ತು ಒಂದಕ್ಕೊಂದು ಬೆಸೆದುಕೊಂಡಿದೆ ಅಂತಾರೆ ತಜ್ಞರು. ಸಿಎನ್ಎನ್ ಮನಿಯಲ್ಲಿ ಪ್ರಕಟವಾದ ಲೇಖನದಲ್ಲಿ ರೋಬೊ ಬ್ಯಾಂಕ್ ತಜ್ಞರು ಹೀಗೆ ಹೇಳುತ್ತಾರೆ.
ಪ್ರತಿ ವರ್ಷ ಬೀಫ್ ರಫ್ತಿನಿಂದ ಭಾರತ 4.8 ಬಿಲಿಯನ್ ಅಮೆರಿಕನ್ ಡಾಲರ್ ಗಳಿಸುತ್ತದೆ. ದೇಶದಲ್ಲಿ ಹೈನುಗಾರಿಕೆ ಉದ್ಯಮ ಬೆಳೆಯಲು ಇದು ಕೂಡಾ ಕಾರಣ.
[related]
ಫೈನಾನ್ಶಿಯನ್ ಟೈಮ್ಸ್ ವರದಿ ಪ್ರಕಾರ ದೇಶದಲ್ಲಿರುವ ಅಕ್ರಮ ಮಾಂಸ ಮಾರಾಟ ಉದ್ಯಮಗಳು ವಿವಾದಕ್ಕೀಡಾಗಿವೆ. ಅದೇ ವೇಳೆ ದೇಶದಲ್ಲಿ ಅತೀ ಹೆಚ್ಚು ರಫ್ತಾಗುವ ಮಾಂಸವೆಂದರೆ ಗೋಮಾಂಸ. 2010ರಲ್ಲಿ ಭಾರತ 653,000 ಟನ್ ಕೋಣದ ಮಾಂಸ ರಫ್ತು ಮಾಡಿದೆ. ಜಗತ್ತಿನ ಇನ್ನುಳಿದ ರಾಷ್ಟ್ರಗಳು ರಫ್ತು ಮಾಡಿದ ಗೋಮಾಂಸದ ಪ್ರಮಾಣ 169,000 ಟನ್. ಈ ವ್ಯತ್ಯಾಸವನ್ನು ಗಮನಿಸಿದರೆ ಭಾರತದ ಬೀಫ್ ರಫ್ತು ಎಷ್ಟಿದೆ ಎಂಬುದು ಗೊತ್ತಾಗುತ್ತದೆ.
ಭಾರತದ ಪಶು ಸಂಗೋಪನ ಇಲಾಖೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ವೆಬ್ ಸೈಟ್ ಮಾಹಿತಿ ಪ್ರಕಾರ ದೇಶದಲ್ಲಿ 4000 ಸಕ್ರಮ ಮತ್ತು 100,000ಕ್ಕಿಂತಲೂ ಹೆಚ್ಚು ಅಕ್ರಮ ಕಸಾಯಿಖಾನೆಗಳಿವೆ.
ಭಾರತದ ಹೈನುಗಾರಿಕೆ ಉದ್ಯಮದ ಒಳಹೊಕ್ಕು ನೋಡಿದರೆ ಅಲ್ಲಿರುವ ಹಸುಗಳ ಶೋಚನೀಯಅವಸ್ಥೆ ಮನವರಿಕೆಯಾಗುತ್ತದೆ. ಹೆಚ್ಚು ಹಾಲು ಪಡೆಯುವುದಕ್ಕೋಸ್ಕರ ಇಲ್ಲಿ ಹಸುಗಳಿಗೆ ಆಕ್ಸಿಟೋಸಿನ್ ಚುಚ್ಚಲಾಗುತ್ತದೆ. ಹಾಲು ಕೊಡುವುದನ್ನು ನಿಲ್ಲಿಸಿದಾಗ ಆ ಹಸುಗಳನ್ನು ಕಸಾಯಿಖಾನೆಗಳಿಗೆ ಮಾರಲಾಗುತ್ತದೆ. ಹೀಗೆ ಹೈನುಗಾರಿಕೆ ಮತ್ತು ಗೋಮಾಂಸ ಮಾರಾಟ ಉದ್ಯಮ ಒಂದಕ್ಕೊಂದು ಬೆಸೆದುಕೊಂಡು ಬೆಳೆಯುತ್ತದೆ. ಒಂದು ವೇಳೆ ದೇಶದಾದ್ಯಂತ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬಂದರೆ ಅದರಿಂದ ಹೈನುಗಾರಿಕೆ ಉದ್ಯಮವೂ ಕುಂಠಿತವಾಗುವ ಸಾಧ್ಯತೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.